masthmagaa.com:
ಲೈಂಗಿಕ ಕಿರುಕುಳ ಆರೋಪದ ಮೇಲೆ ಬಿಜೆಪಿ ಸಂಸದ, WFI ಮುಖ್ಯಸ್ಥ ಬ್ರಿಜ್ ಭೂಷಣ್ ಸಿಂಗ್ ವಿರುದ್ದ ಕುಸ್ತಿಪಟುಗಳ ಪ್ರತಿಭಟನೆ ಮುಂದುವರೆದಿದೆ. ಇದೀಗ ಕುಸ್ತಿಪಟುಗಳು ತಾವು ಅಂತಾರಾಷ್ಟ್ರೀಯ ವಿವಿಧ ಸ್ಪರ್ಧೆಗಳಲ್ಲಿ ಗೆದ್ದಿರುವ ಪದಕಗಳನ್ನ ಗಂಗಾ ನದಿಯಲ್ಲಿ ಬಿಡುವುದಾಗಿ ಹೇಳಿದ್ದಾರೆ. ಹರಿದ್ವಾರದಲ್ಲಿ ತಮ್ಮ ಪದಕಗಳನ್ನ ಗಂಗಾ ನದಿಗೆ ಹಾಕಿ, ಬಳಿಕ ಅನಿರ್ದಿಷ್ಟಾವಧಿವರೆಗೆ ಉಪವಾಸ ಸತ್ಯಾಗ್ರಹ ನಡೆಸೋದಾಗಿ ತಿಳಿಸಿದ್ದಾರೆ. ಇದೇ ವೇಳೆ ಪದಕಗಳನ್ನ ಕಳೆದುಕೊಂಡ ನಂತ್ರ ನಮ್ಮ ಜೀವಗಳಿಗೂ ಯಾವುದೇ ಅರ್ಥವಿಲ್ಲ. ಆದ್ರೆ ನಾವು ನಮ್ಮ ಆತ್ಮಗೌರವದ ಜೊತೆಯಲ್ಲಿ ಕಾಂಪ್ರಮೈಸ್ ಮಾಡಿಕೊಳ್ಳಲು ರೆಡಿಯಿಲ್ಲ ಅಂತ ಕುಸ್ತಿಪಟುಗಳು ಸುದೀರ್ಘ ಪತ್ರ ಬರೆಯುವ ಮೂಲಕ ತಮ್ಮ ನೋವು ತೋಡಿಕೊಂಡಿದ್ದಾರೆ. ಇನ್ನು ರಾಷ್ಟ್ರಪತಿಗಳಿಗೆ ಪದಕಗಳನ್ನ ವಾಪಾಸ್ ಕೊಡ್ಬೋದಿತ್ತು, ಆದ್ರೆ ಅವರು ಸ್ವತಃ ಮಹಿಳೆಯಾಗಿ ನಮ್ಮಿಂದ 2 ಕಿಲೋಮೀಟರ್ ಕುಳಿತು ಎಲ್ಲವನ್ನೂ ನೋಡುತ್ತಿದ್ದರು. ಆದ್ರೆ ಒಂದು ಮಾತನ್ನೂ ಸಹ ಆಡಲಿಲ್ಲ. ಜೊತೆಗೆ ಪ್ರಧಾನಿ ನರೇಂದ್ರ ಮೋದಿಯವರು ಕೂಡ ನಮ್ಮನ್ನ ಒಮ್ಮೆಯೂ ವಿಚಾರಿಸಲಿಲ್ಲ. ಬದಲಾಗಿ ನಮ್ಮ ಮೇಲೆ ಶೋಷಣೆ ಎಸಗಿರುವ ಬ್ರಿಜ್ ಭೂಷಣ್ ಮಾತ್ರ ಹೊಳೆಯುವ ಬಿಳಿ ಬಟ್ಟೆ ಧರಿಸಿ ಫೋಟೋಗಳನ್ನ ಕ್ಲಿಕ್ಕಿಸಿಕೊಳ್ಳುತ್ತಾ ಹೊಸ ಸಂಸತ್ ಕಟ್ಟಡದ ಉದ್ಘಾಟನೆಯಲ್ಲಿ ಭಾಗವಹಿಸಿದ್ದರು. ಅವರು ಉಟ್ಟಿದ್ದ ಆ ಬಿಳಿ ಬಟ್ಟೆಗಳು ‘ನಾನೇ ವ್ಯವಸ್ಥೆ’ ಎನ್ನುವ ರೀತಿಯಲ್ಲಿ ನಮ್ಮನ್ನ ಅಣಕಿಸುತ್ತಿದ್ದವು ಅಂತ ಭಾವುಕವಾಗಿ ಪತ್ರದಲ್ಲಿ ಬರೆದುಕೊಂಡಿದ್ದಾರೆ. ಈ ಪತ್ರವನ್ನ ಕುಸ್ತಿಪಟುಗಳಾದ ಸಾಕ್ಷಿ ಮಲಿಕ್, ವಿನೇಶ್ ಫೋಗಟ್ ಹಾಗೂ ಬಜರಂಗ್ ಪುನಿಯಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
-masthmagaa.com
Contact Us for Advertisement