masthmagaa.com:
ಹಾಸನ ಸಂಸದ, NDA ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯದ ಆರೋಪ ಕೇಳಿ ಬಂದಿದ್ದು ರಾಷ್ಟ್ರಮಟ್ಟದಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ಇದಕ್ಕೆ ಸಂಬಂಧಪಟ್ಟಂತೆ ಸಿಎಂ ಸಿದ್ರಾಮಯ್ಯ ಈಗ ಎಸ್ಐಟಿ ರಚನೆಗೆ ಆದೇಶ ಮಾಡಿದ್ದಾರೆ. ʻʻಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡ ರಚಿಸಲು ಸರ್ಕಾರ ತೀರ್ಮಾನಿಸಿದೆ. ಹಾಸನ ಜಿಲ್ಲೆಯಲ್ಲಿ ಅಶ್ಲೀಲ ವೀಡಿಯೋ ತುಣುಕುಗಳು ಹರಿದಾಡುತ್ತಿದ್ದು, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಈ ಹಿನ್ನೆಲೆಯಲ್ಲಿ ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದ ಅಧ್ಯಕ್ಷರು ಸರ್ಕಾರಕ್ಕೆ ಪತ್ರ ಬರೆದಿದ್ದರು. ಅವರ ಮನವಿಗೆ ಸ್ಪಂದಿಸಿ ಈ ನಿರ್ಣಯ ಕೈಗೊಳ್ಳಲಾಗಿದೆ ಅಂತ ಸಿದ್ಧರಾಮಯ್ಯನವ್ರು ಎಕ್ಸ್ ಖಾತೆಯಲ್ಲಿ ಹೇಳಿದ್ದಾರ. ಇನ್ನು ಈ ಬಗ್ಗೆ ಮಾಹಿತಿ ನೀಡಿರೋ ರಾಜ್ಯ ಗೃಹ ಸಚಿವ ಡಾ ಜಿ ಪರಮೇಶ್ವರ್, ʻಶೀಘ್ರದಲ್ಲೇ, SIT ತನಿಖೆ ಆರಂಭಿಸಲಿದೆ. ಪ್ರಜ್ವಲ್ ರೇವಣ್ಣರಿಗೆ ನೊಟೀಸ್ ಜಾರಿ ಮಾಡೋದು ಅಥ್ವಾ ಬಿಡೋದು SITಗೆ ಬಿಟ್ಟ ತೀರ್ಮಾನ. ಸರ್ಕಾರ ಮಾತ್ರ ಈ ಪ್ರಕರಣವನ್ನ ಬಹಳ ಸೀರಿಯಸ್ ಆಗಿ ಪರಿಗಣಿಸಿದ್ದು, ಯಾವ್ದೇ ರೀತಿ ಹಸ್ತಕ್ಷೇಪ ಇಲ್ದೇ ತನಿಖೆ ನಡೆಯಲಿದೆ. ಹಾಗೂ ಪ್ರಜ್ವಲ್ ರೇವಣ್ಣ ಅವ್ರು ವಿದೇಶಕ್ಕೆ ಹೋಗಿರೋ ಬಗ್ಗೆ ಮಾಹಿತಿ ಕೂಡ ಇದೆʼ ಅಂದಿದ್ದಾರೆ. ಅಂದ್ಹಾಗೆ ಪ್ರಜ್ವಲ್ ರೇವಣ್ಣ ದೇಶದಲ್ಲಿಲ್ಲ, ಏಪ್ರಿಲ್ 27ರ ಬೆಳಗಿನ ಜಾವ 3:15ಕ್ಕೆ ಬೆಂಗಳೂರಿನಿಂದ ಜರ್ಮನಿಯ ಫ್ರ್ಯಾಂಕ್ಫರ್ಟ್ಗೆ ಹೋಗಿದ್ದಾರೆ ಅಂತ ಹೇಳಲಾಗ್ತಿದೆ.
ಇನ್ನು ಪ್ರಕರಣದ ಬಗ್ಗೆ ಮಾಜಿ ಸಿಎಂ, ಪ್ರಜ್ವಲ್ ರೇವಣ್ಣ ಸಂಬಂಧಿಯೂ ಆಗಿರೋ.. ಎಚ್ಡಿ ಕುಮಾರಸ್ವಾಮಿಯವ್ರು ರಿಯಾಕ್ಟ್ ಮಾಡಿದ್ದಾರೆ. ʻʻಉಪ್ಪು ತಿಂದವ ನೀರು ಕುಡೀಲೆಬೇಕು. ನಾನಾಗಲಿ ದೇವೇಗೌಡರಾಗಲಿ ಹೆಣ್ಣು ಮಕ್ಕಳ ವಿಚಾರವಾಗಿ ಅತ್ಯಂತ ಗೌರವದಿಂದ ನಡೆದುಕೊಂಡಿದ್ದೇವೆ. ಯಾರಾದ್ರೂ ಕಷ್ಟ ಅಂತ ಹೇಳ್ಕೊಂಡ ಬಂದ್ರೆ, ಅವ್ರು ಕಷ್ಟ ಪರಿಹರಿಸಿನೇ ಕಳಿಸಿದ್ದೇವೆ. ಈ ಬಗ್ಗೆ ತನಿಖೆ ನಡೆಸಲು ಈಗಾಗಲೇ ಸರ್ಕಾರ SIT ರಚಿಸಿದೆ. ತನಿಖೆ ವೇಳೆ ಸತ್ಯ ಹೊರಬರಲಿ. ಉಪ್ಪು ತಿಂದವ್ರು ನೀರು ಕುಡೀಲೆಬೇಕು. ನಾವಂತೂ ತಪ್ಪು ಮಾಡಿದವ್ರನ್ನ ಕ್ಷಮಿಸೋ ಪ್ರಶ್ನೆಯೇ ಇಲ್ಲ. ಈ ಬಗ್ಗೆ ತನಿಖೆಯ ಕಂಪ್ಲೀಟ್ ರಿಪೋರ್ಟ್ ಹೊರಗೆ ಬಂದ್ಮೇಲೆ ಮಾತನಾಡ್ತೀನಿʼ ಅಂದಿದ್ದಾರೆ. ಇನ್ನು ಪ್ರಜ್ವಲ್ ರೇವಣ್ಣ ಪ್ರಕರಣ ವಿಚಾರವಾಗಿ ಡಿಸಿಎಂ ಡಿಕೆ ಶುವಕುಮಾರ್ ರಿಯಾಕ್ಟ್ ಮಾಡಿ, ʻಕುಮಾರಸ್ವಾಮಿ ಅವ್ರು ತೋರಿಸ್ತಿದ್ದ ಪೆನ್ ಡ್ರೈವ್ ಯಾವುದು, ಅದ್ರಲ್ಲಿ ಏನಿದೆ ಅಂತ ನನಗೆ ಗೊತ್ತಿರಲಿಲ್ಲ. ಆದ್ರೆ ಈಗ ಏನಿದೆ ಅಂತ ಗೊತ್ತಾಗಿದೆ. ಈ ಪೆನ್ಡ್ರೈವ್ ಬಗ್ಗೆ ಕುಮಾರಣ್ಣನಿಗೆ ಚೆನ್ನಾಗ್ ಗೊತ್ತಿದೆ. ಅವ್ರು ಈ ಪೆನ್ಡ್ರೈವ್ನ್ನ ಪಾಕೆಟ್ನಲ್ಲಿ ಇಟ್ಕೊಂಡು ಮೀಡಿಯಾದವ್ರಿಗೆ ತೋರಿಸ್ತಿದ್ರು. ಸೋ ಈ ಬಗ್ಗೆ ನೀವು ಕುಮಾರಸ್ವಾಮಿ ಅವ್ರ ಹತ್ರ ಕೇಳ್ಬೇಕುʼ ಅಂತೇಳಿದ್ದಾರೆ. ಜೊತೆಗೆ ʻಮಹಿಳಾ ಆಯೋಗದವ್ರು ದೂರು ದಾಖಲಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ತಾರೆ. ಇದು ಅಕ್ಷಮ್ಯ ಅಪರಾಧ, ಸರ್ಕಾರ ಈ ಬಗ್ಗೆ ನೋಡ್ಕೊಳುತ್ತೆ. ಮಾಧ್ಯಮದಲ್ಲಿ ನೋಡ್ದೇ, ಪ್ರಜ್ವಲ್ ರೇವಣ್ಣ ಈಗ ಎಸ್ಕೇಪ್ ಆಗಿದ್ದಾರೆ ಅಂತ. ಆದ್ರೆ ಸಂತ್ರಸ್ತರು ಕಂಪ್ಲೈಟ್ ಕೊಟ್ಟಿದ್ದಾರೆ. ಸೋ ಮುಂದಿನ ಕ್ರಮ ಕೈಗೊಳ್ಳಲಾಗ್ತದೆʼ ಅಂತಾ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇನ್ನೊಂದ್ಕಡೆ ರಾಜ್ಯ ಕಂದಾಯ ಸಚಿವ ಕೃಷ್ಣಭೈರೇಗೌಡ ಅವ್ರು ಕೂಡ ಪ್ರತಿಕ್ರಿಯೆ ನೀಡಿ, ʻಇದು ಅತೀದೊಡ್ಡ ಲೈಂಗಿಕ ಹಗರಣʼ ಅಂತ ಕರೆದಿದ್ದಾರೆ.
ಇನ್ನೊಂದು ಕಡೆ ಈ ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ಸಿಕ್ಕಿದೆ. ಸಂಸದ ಪ್ರಜ್ವಲ್ ರೇವಣ್ಣ ಬಳಿಕ ಮಾಜಿ ಸಚಿವ, ಹಾಲಿ ಶಾಸಕ ಹೆಚ್ಡಿ ರೇವಣ್ಣ ವಿರುದ್ದವೂ ದೂರು ನೀಡಲಾಗಿದೆ. ಪ್ರಜ್ವಲ್ ಜೊತೆಗೆ ರೇವಣ್ಣ ಕೂಡ ಅಸಭ್ಯವಾಗಿ ವರ್ತಿಸಿದ್ದಾರೆ. ಮನೆಯಲ್ಲಿ ಯಾರೂ ಇಲ್ಲದಿದ್ದಾಗ ನನ್ನ ಮೇಲೆ ದೌರ್ಜನ್ಯ ಎಸಗಲಾಗುತ್ತಿತ್ತು. ಅಲ್ದೆ ನನ್ನ ಮಗಳಿಗೆ ವಿಡಿಯೋ ಕಾಲ್ ಮಾಡಿ ಕೆಟ್ಟದಾಗಿ ವರ್ತಿಸಿದ್ದಾರೆ ಅಂತ ಸಂತ್ರಸ್ತೆ ದೂರು ಕೊಟ್ಟಿದ್ದಾರೆ. ಹೊಳೆ ನರಸೀಪುರ ಠಾಣೆಯಲ್ಲಿ ರೇವಣ್ಣ ಎ ಒನ್ ಆರೋಪಿ, ಪ್ರಜ್ವಲ್ ರೇವಣ್ಣ ಎ2 ಆರೋಪಿ ಅಂತ ದೂರು ಕೊಡಲಾಗಿದೆ. ಇನ್ನೊಂದು ಕಡೆ ಹಾಸನದ ಅಶ್ಲೀಲ ವಿಡಿಯೋಗೆ ಸಂಬಂಧಪಟ್ಟಂತೆ ಹಲವಾರು ಮಹಿಳಾ ಸಂಘಟನೆ, ಹೋರಾಟಗಾರರು ಮಹಿಳಾ ಆಯೋಗಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾರೆ. ಇದರ ಸೂಕ್ಷ್ಮತೆಯನ್ನು ಅರಿತು ತನಿಖೆ ನಡೆಸುವಂತೆ ಕೂಡಲೇ ಒತ್ತಾಯಿಸಲಾಗಿದೆ. ಇದು ಸಾವಿರಾರು ಹೆಣ್ಣು ಮಕ್ಕಳು ಜೀವನ ಮತ್ತು ಬದುಕಿನ ಪ್ರಶ್ನೆ ಆಗಿದೆ. ಇದಕ್ಕೆ ನ್ಯಾಯ ಸಿಗಬೇಕು. ಈ ಪ್ರಕರಣ ಬೇರೆಯವರಿಗೆ ಮಾದರಿಯಾಗಬೇಕು. ಈ ಕೃತ್ಯಕ್ಕೆ ಶೂನ್ಯ ಸಹಿಷ್ಣತೆ ಇದೆ. ಯಾರಿಂದಲೂ ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಈ ಅಪರಾಧಕ್ಕೆ ಶಿಕ್ಷೆ ಆಗಲೇಬೇಕು. ಒಂದು ಅಂದಾಜಿನ ಪ್ರಕಾರ ಸುಮಾರು 2,876 ಮಹಿಳೆಯರು ಈ ಪ್ರಕರಣದಲ್ಲಿ ಇದ್ದಾರೆ ಅಂತ ನಾಗಲಕ್ಷ್ಮಿ ಚೌಧರಿ ತಿಳಿಸಿದ್ದಾರೆ.
-masthmagaa.com
Contact Us for Advertisement