ಅಂಬರೀಶ್ ಅಂತಿಮ ದರ್ಶನಕ್ಕೆ ಗೈರು: ಕಾರಣ ಹೇಳಿದ ನಟಿ ರಮ್ಯಾ!

masthmagaa.com:

ಮಂಡ್ಯದ ಗಂಡು, ರೆಬೆಲ್ ಸ್ಟಾರ್ ಅಂಬರೀಶ್ ನಿಧನ ಹೊಂದಿದಾಗ ಮಾಜಿ ಸಂಸದೆ ರಮ್ಯಾ ಅವರ ಅಂತಿಮ ದರ್ಶನಕ್ಕೆ ಬಂದಿರಲಿಲ್ಲ. ಹಾಗೆ ನೋಡಿದರೆ ಅಂಬರೀಷ್ ರಮ್ಯಾ ಅವರ ರಾಜಕೀಯ ಗುರು ಅಂತಾನೇ ಹೇಳಬಹುದು. ರಮ್ಯಾ ತಮ್ಮ ಮೊದಲ ಚುನಾವಣೆಯಲ್ಲೇ ಗೆಲುವನ್ನ ಸಾಧಿಸೋದಕ್ಕೆ ಪ್ರಮುಖ ಕಾರಣ ಅಂಬರೀಷ್ ಅವರೇ ಆಗಿದ್ರು, ಹಾಗಿದ್ರೂ ಕೂಡ ಅಂಬರೀಷ್ ಅಂತಿಮ ದರ್ಶನಕ್ಕೆ ರಮ್ಯಾ ಬಂದಿರಲಿಲ್ಲ.

ರಮ್ಯಾ ಆ ಟೈಂ ಅಲ್ಲಿ ಯಾಕೆ ಬಂದಿರಲಿಲ್ಲ ಅನ್ನೋ ಪ್ರಶ್ನೆ ಮಂಡ್ಯದ ಮೂಲೆ, ಮೂಲೆಯಲ್ಲೂ ಹಲವು ರೀತಿಯ ಚರ್ಚೆಗೆ ಗುರಿಯಾಗಿತ್ತು. ಅಲ್ಲದೆ ಅಂಬಿ ಅಭಿಮಾನಿಗಳು ಕೂಡ ರಮ್ಯಾ ವಿರುದ್ಧ ಕಿಡಿಕಾರಿದ್ದರು. ರಮ್ಯಾ ಅವ್ರನ್ನ ಈ ಕಾರಣಕ್ಕೆ ಟ್ರೊಲ್ ಮಾಡುವವರು ಈಗಲೂ ತುಂಬಾ ಜನ ಇದ್ದಾರೆ. ಇದೀಗ ಸ್ವತಃ ರಮ್ಯ ಅವರೇ ಈ ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಎಲ್ಲಾ ಊಹಾಪೋಹಗಳಿಗೆ ಅವರೇ ತೆರೆ ಎಳೆದಿದ್ದಾರೆ. ಅಂಬರೀಶ್ ಅವರ ಅಂತ್ಯ ಸಂಸ್ಕಾರದ ವೇಳೆ ಅವರು ಯಾಕೆ ಬರಲಿಲ್ಲ ಅನ್ನೋ ಅಸಲಿ ಕಾರಣವನ್ನು ಬಹಿರಂಗ ಪಡಿಸಿದ್ದಾರೆ.

ಮಂಡ್ಯದಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ ರಮ್ಯಾ ಅವರು ಸುದ್ದಿಗೋಷ್ಟಿಯನ್ನು ನಡೆಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಅಂಬರೀಶ್ ಸಾವಿನ ಸಂದರ್ಭದಲ್ಲಿ ನಟಿ ರಮ್ಯಾ ಅವರು ಬಾರದ ವಿಚಾರವನ್ನು ಪ್ರಸ್ತಾಪಿಸಿದರು. ಇದಕ್ಕೆ ಉತ್ತರಿಸಿದ ರಮ್ಯಾ, ನನಗೆ ಆಗ ಟ್ಯೂಮರ್ ಬಂದಿತ್ತು. ನಾನು ಆಗ ಸರ್ಜರಿ ಮಾಡಿಸಿದ್ದೆ ಅಂತ ಹೇಳಿದ್ದಾರೆ. ಹಾಗೆ ಮುಂದುವರಿದು ನನಗೆ ಪಬ್ಲಿಕ್ ಆಗಿ ಬಂದು ದುಃಖ ಹಂಚಿಕೊಳ್ಳೋ ಅಭ್ಯಾಸ ಇಲ್ಲ, ಆ ರೀತಿಯ ವ್ಯಕ್ತಿತ್ವ ನನ್ನದಲ್ಲ, ಬೇರೆ ಅವರು ಕ್ಯಾಮೆರಾ ಮುಂದೆ ಬಂದು ಹಂಚಿಕೊಳ್ಳುತ್ತಾರೆ ಅಂತ ಹೇಳಿದ್ದಾರೆ.

ನಾನು ಚಿಕ್ಕವಳಿಂದ ಸ್ವತಂತ್ರವಾಗಿ ಇದ್ದೇನೆ. ನಾನು ಏನೇ ಇದ್ರೂ ಕೆಲಸದ ಬಗ್ಗೆ ಮಾತಾಡುತ್ತೇನೆ ಅಷ್ಟೇ. ಪರ್ಸನಲ್ ವಿಷಯಗಳನ್ನು ಮಾತಾಡೋಕೆ ಹೋಗಲ್ಲ. ಹೀಗಾಗಿ ಏನೇನೋ ಹಬ್ಬಿಸುತ್ತಾರೆ. ಅಂಬರೀಶ್ ಅಂತಿಮ ದರ್ಶನದ ವಿಚಾರದಲ್ಲಿ ಅಪಪ್ರಚಾರ ಮಾಡಿರುವುದು ನನಗೆ ಬೇಸರವಾಗಿದೆ ಅಂತ ರಮ್ಯಾ ಹೇಳಿದ್ದಾರೆ. ಇನ್ನು, ನನಗೆ ನಾನು ಯಾರು ಅಂತ ಗೊತ್ತು. ನನಗೆ ಆಗ ಟ್ಯೂಮರ್ ಇತ್ತು. ಅದರ ಜೊತೆಗೆ ಆಟೋ ಇಮ್ಯೂನ್ ಸಮಸ್ಯೆ ಆಗಿತ್ತು, ಹಾಗಾಗಿ ನನ್ನ ಆರೋಗ್ಯದಲ್ಲಿ ಏರುಪೇರಾಗಿ ನಂಗೆ ತುಂಬಾ ತೊಂದರೆ ಆಯ್ತು. ಅದರ ಬಗ್ಗೆ ಹೇಳಿ ಸಿಂಪಥಿ ತೆಗೆದುಕೊಳ್ಳೋ ವ್ಯಕ್ತಿತ್ವ ನನ್ನದಲ್ಲ, ಅದೇ ಕಾರಣಕ್ಕೆ ಅಂತಿಮ ದರ್ಶನಕ್ಕೆ ನನಗೆ ಬರೋಕೆ ಆಗಿರಲಿಲ್ಲ ಅಂತ ರಮ್ಯಾ ಸ್ಪಷ್ಟಪಡಿಸಿದ್ದಾರೆ.

ಇನ್ನು ಮಂಡ್ಯದಲ್ಲಿ ಮನೆ ಮಾಡ್ತೀನಿ ಅಂತ ಆಶ್ವಾಸನೆ ಕೊಟ್ಟಿದ್ದಿರಲ್ಲ ಅದೇನಾಯ್ತು? ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ, ”ನನ್ನ ತಾತನವರದು ಇಲ್ಲಿ ಒಂದು ತೊಟ್ಟಿ ಮನೆ ಇದೆ. ನನಗೂ ಇಲ್ಲಿ ಮನೆ ಮಾಡುವ ಆಸೆ ಈಗಲೂ ಇದೆ ಮಾಡ್ತೀನಿ. ಯಾರು ಏನೇ ಹೇಳಿದರೂ ನಾನು ಮಂಡ್ಯದವಳು, ನನ್ನ ತಾಯಿ, ತಂದೆ ಇಲ್ಲಿನವರು, ನಾನು ಮಂಡ್ಯ ಗೌಡ್ತಿ ಎಂಬುದನ್ನು ಯಾರೂ ಕಿತ್ತುಕೊಳ್ಳಲು ಸಾಧ್ಯವಿಲ್ಲ. ನಾನು ಸಂಕಷ್ಟದಲ್ಲಿ ಇದ್ದ ಸಮಯದಲ್ಲಿ ಇಲ್ಲಿನ ಜನ ಪ್ರೀತಿ ತೋರಿದ್ದಾರೆ. ಮಂಡ್ಯ ಜನರ ಬಗ್ಗೆ ಸದಾ ಗೌರವ ಇದೆ. ಮಂಡ್ಯದೊಟ್ಟಿಗೆ ನನ್ನದು ಕೇವಲ ರಾಜಕೀಯ ಸಂಬಂಧವಲ್ಲ. ನನ್ನ ಕುಟುಂಬ ಇಲ್ಲಿದೆ” ಅಂತ ರಮ್ಯ ಹೇಳಿದ್ದಾರೆ.

-masthmagaa.com

Contact Us for Advertisement

Leave a Reply