masthmagaa.com:
ದೆಹಲಿಯ ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಬಂಧನಕ್ಕೆ ಸಂಬಂಧಪಟ್ಟಂತೆ ಇವತ್ತು ಭಾರೀ ಹೈಡ್ರಾಮ ನಡೆದಿದೆ. ಮೂರು ರಾಜ್ಯಗಳ ಪೋಲಿಸರು ಭಾಗಿಯಾಗಿದ್ದ ಈ ಘಟನೆ ಯಾವುದೇ ಸಿನಿಮಾಗಿಂತ ಕಡಿಮೆಯಾಗಿರ್ಲಿಲ್ಲ. ಸತತವಾಗಿ ವಿವಾದಾತ್ಮಕ ಹೇಳಿಕೆ ಮತ್ತು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ರನ್ನ ಟೀಕೆ ಮಾಡಿ ಸುದ್ದಿಯಲ್ಲಿ ಇದ್ದ ತಜಿಂದರ್ ಪಾಲ್ ಬಗ್ಗಾ ಮೇಲೆ ಪಂಜಾಬ್ನ ಮೊಹಾಲಿಯಲ್ಲಿ ಪ್ರಕರಣ ಒಂದು ದಾಖಲಾಗಿತ್ತು. ಅದ್ರಲ್ಲಿ ಬಗ್ಗಾ ಪ್ರಚೋದನಕಾರಿ ಹೇಳಿಕೆ, ಆಕ್ಷೇಪಾರ್ಹ ಪದ ಬಳಕೆ, ದ್ವೇಷ ಭಾಷಣ ಮಾಡ್ತಾರೆ ಅಂತ ಆರೋಪ ಮಾಡಲಾಗಿತ್ತು. ಈ ಸಂಬಂಧ ಇವತ್ತು ಬಗ್ಗಾ ಅವ್ರನ್ನ ಪಂಜಾಬ್ ಪೋಲಿಸ್ರು ದಿಲ್ಲಿಯಲ್ಲಿ ಅರೆಸ್ಟ್ ಮಾಡಿ ಹರ್ಯಾಣ ಮೂಲಕ ಕರೆದುಕೊಂಡು ಹೋಗ್ತಾಇದ್ರು. ಆದ್ರೆ ಅಷ್ಟರಲ್ಲೇ ಬಗ್ಗಾ ಅವ್ರ ತಂದೆ ನನ್ನ ಮಗನನ್ನ ಕಿಡ್ನಾಪ್ ಮಾಡ್ಕೊಂಡು ಹೋಗ್ತಿದ್ದಾರೆ ಅಂತ ದಿಲ್ಲಿ ಪೋಲಿಸರಿಗೆ ಕಂಪ್ಲೇಂಟ್ ಮಾಡಿದ್ದಾರೆ. ಆ ನಂತ್ರ ದಿಲ್ಲಿ ಪೋಲಿಸ್, ಹರ್ಯಾಣ ಪೋಲಿಸರಿಗೆ ಈ ಪ್ರಕರಣವನ್ನ ವರ್ಗಾಯಿಸಿದ್ದಾರೆ. ಜೊತೆಗೆ ಪಂಜಾಬ್ ಪೋಲಿಸ್ ನಮ್ಗೆ ಯಾವ ಮಾಹಿತಿ ನೀಡಿರ್ಲಿಲ್ಲ ಅಂತ ಹೇಳಿದ್ದಾರೆ. ಅಷ್ಟರಲ್ಲೇ ಕಾರ್ಯಪ್ರವೃತ್ತರಾದ ಹರ್ಯಾಣ ಪೋಲಿಸ್ ಮಾರ್ಗಮಧ್ಯದಲ್ಲೇ ಬಗ್ಗಾ ಅವ್ರನ್ನ ಕರೆದುಕೊಂಡು ಹೋಗ್ತಿದ್ದ ಪಂಜಾಬ್ ಪೋಲಿಸರನ್ನ ಅಡ್ಡಗಟ್ಟಿ, ಬಗ್ಗಾ ಅವ್ರನ್ನ ತಮ್ಮ ವಶಕ್ಕೆ ಪಡೆದಿದ್ದಾರೆ. ನಂತ್ರ ದಿಲ್ಲಿ ಪೋಲಿಸ್ರಿಗೆ ಹಸ್ತಾಂತರಿಸಿದ್ದಾರೆ. ಇಲ್ಲಿ ನಾವು ವಿಶೇಷವಾಗಿ ಗಮಿನಿಸಬೇಕಾಗಿರೋದು ದಿಲ್ಲಿಯಲ್ಲಿ ಆಪ್ ಆಡಳಿತದಲ್ಲಿ ಇದೆ. ಆದ್ರೆ ದಿಲ್ಲಿ ಕೇಂದ್ರಾಡಳಿತ ಪ್ರದೇಶ ಆಗಿರೋದ್ರಿಂದ ದಿಲ್ಲಿ ಪೋಲಿಸ್ ಕೇಂದ್ರ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತೆ. ಇನ್ನು ಪಂಜಾಬ್ನಲ್ಲಿ ಇತ್ತೀಚಗೆ ತಾನೆ ಆಪ್ ಅಧಿಕಾರಕ್ಕೆ ಬಂದಿದೆ. ಜೊತೆಗೆ ಹರ್ಯಾಣದಲ್ಲಿ ಬಿಜೆಪಿ ಆಡಳಿತದಲ್ಲಿ ಇದೆ. ಇದೆಲ್ಲ ನೋಡಿದ್ರೆ ಮೇಲ್ನೋಟಕ್ಕೆ ಇದು, ರಾಜಕೀಯ ದ್ವೇಷದ ಘಟನೆ ಅನ್ನೋದು ಗೊತ್ತಾಗುತ್ತೆ. ಇನ್ನು ಸಹಜವಾಗಿ ಇದಕ್ಕೆ ಸಂಬಂಧಿಸಿದಂತೆ ರಾಜಕೀಯ ಕೆಸರೆರಚಾಟ ಶುರುವಾಗಿದ್ದು, ಆಪ್ ಮತ್ತು ಬಿಜೆಪಿ ಒಬ್ಬೊರಿಗೊಬ್ಬರು ವಾಗ್ದಾಳಿ ನಡೆಸಿವೆ. ಪಂಜಾಬ್ ಪೋಲಿಸ್ ಇದು ಕಿಡ್ನಾಪ್ ಅಲ್ಲ ನಾವು ಐದು ನೋಟಿಸ್ ನೀಡಿದ್ವಿ ಆದ್ರು ಅವ್ರು ತನಿಖೆ ಸಹಕರಿಸಿರಲಿಲ್ಲ ಅದಕ್ಕೆ ಬಂಧನ ಮಾಡಬೇಕಾಗಿ ಬಂತು. ಇನ್ನು ಈ ಬಗ್ಗೆ ನಾವು ದೆಹಲಿ ಪೋಲಿಸರಿಗೂ ಪೂರ್ವ ಮಾಹಿತಿ ನೀಡಿದ್ವಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement