masthmagaa.com:
ಪಂಚರಾಜ್ಯಗಳ ಚುನಾವಣಾ ಮಹಾಸಂಗ್ರಾಮದಲ್ಲಿ ಮಿಜೋರಾಂ ಒಂದು ಹೊರತುಪಡಿಸಿ ಉಳಿದ ರಾಜ್ಯಗಳ ಫಲಿತಾಂಶ ಇಂದು ಹೊರಬಿದ್ದದೆ. ಉತ್ತರ ಭಾರತದ ರಾಜಸ್ತಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ್ನಲ್ಲಿ ವಿಜಯದೊಂದಿಗೆ ಬಿಜೆಪಿ ತನ್ನ ಪ್ರಾಬಲ್ಯ ಮೆರೆದಿದೆ. ಈ ಮೂಲಕ ಲೋಕಸಭೆಗೆ ಮುನ್ನ ಮಿನಿಲೋಕ ಸಮರದಲ್ಲಿ BJP ಗೆದ್ದು ಬೀಗಿದೆ. ಇತ್ತ ದಕ್ಷಿಣ ಭಾರತದ ತೆಲಂಗಾಣದಲ್ಲಿ ಕೆ.ಸಿ.ಆರ್ ನೇತೃತ್ವದ ಬಿ.ಆರ್.ಎಸ್ ಪಾರ್ಟಿಗೆ ಬಿಗ್ ಶಾಕ್ ಕೊಟ್ಟ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಮಧ್ಯ ಪ್ರದೇಶದಲ್ಲಿ 230 ಕ್ಷೇತ್ರಗಳ ಪೈಕಿ ಆಡಳಿತರೂಢ ಬಿಜೆಪಿ ಇದುವರೆಗೂ 163 ಸೀಟು ಗೆಲ್ಲುವ ಮೂಲಕ ಮತ್ತೇ ಅಧಿಕಾರದ ಚುಕ್ಕಾಣಿ ಹಿಡಿಯೋದು ಖಚಿತವಾಗಿದೆ. ಕಾಂಗ್ರೆಸ್ 66 ಸ್ಥಾನಗಳನ್ನ ಗೆಲ್ಲುವ ಮೂಲಕ ಚುನಾವಣೆಯಲ್ಲಿ ನೀರಸ ಪ್ರದರ್ಶನ ತೋರಿದೆ. ಅತ್ತ ಈ ಬಾರಿ ರಾಜಸ್ತಾನದಲ್ಲಿಯೂ ಕಮಲ ಪಡೆ ಗೆದ್ದು ಬೀಗಿದ್ದು 199 ವಿಧಾನಸಭಾ ಸ್ಥಾನಗಳ ಪೈಕಿ 115 ಸೀಟುಗಳನ್ನ ಗೆಲ್ಲೋ ಮೂಲಕ ಕಾಂಗ್ರೆಸ್ ಆಡಳಿತಕ್ಕೆ ಅಂತ್ಯ ಹಾಡಿದೆ. ಇನ್ನು ಈ ಹಿಂದೆ ಅಧಿಕಾರದಲ್ಲಿದ್ದ ಕಾಂಗ್ರೆಸ್ 69 ಸ್ಥಾನಗಳಿಗೆ ಕುಸಿದು ಚುನಾವಣೆಯಲ್ಲಿ ಭಾರಿ ಮುಖಭಂಗ ಅನುಭವಿಸಿದೆ. ಇತ್ತ ಛತ್ತೀಸ್ಗಢ್ನಲ್ಲಿ ಕೂಡ ಮತದಾರ ಅಧಿಕಾರದಲ್ಲಿದ್ದ ಕಾಂಗ್ರೆಸ್ನ್ನ ತಿರಸ್ಕರಿಸಿ ಕಮಲಕ್ಕೆ ʼಜೈʼ ಅಂದಿದ್ದಾನೆ. 90 ಸ್ಥಾನಗಳ ಪೈಕಿ 54ರಲ್ಲಿ ಬಿಜೆಪಿ ಗೆದ್ದು ಆಡಳಿತ ಪಕ್ಷವಾಗಿ ಹೊರಹೊಮ್ಮಿದೆ. ಆದರೆ ಈ ಬಾರಿ ಕಾಂಗ್ರೆಸ್ 35 ಕ್ಷೇತ್ರಗಳಲ್ಲಿ ಜಯಗಳಿಸಲಷ್ಟೇ ಶಕ್ತವಾಗಿದೆ. ಇಷ್ಟೆಲ್ಲ ಸೋಲಿನ ನಡುವೆ ತೆಲಂಗಾಣ ಮಾತ್ರ ಕೈಗೆ ಆಸರೆಯಾಗಿದೆ. ತೆಲಂಗಾಣದ ಮಹಾ ಸಮರದಲ್ಲಿ ಈ ಬಾರಿ ಮತದಾರ ನಿರೀಕ್ಷೆಗೂ ಮಿರಿದ ರಿಸಲ್ಟ್ ಕೊಟ್ಟಿದ್ದು, ಪ್ರಬಲ ಆಡಳಿತರೂಢ BRS ಕೇವಲ 39 ಸ್ಥಾನಗಳನ್ನು ಗೆದ್ದು ಆಘಾತಕಾರಿ ಸೋಲನುಭವಿಸಿದೆ. ರೇವಂತ್ ರೆಡ್ಡಿ ನಾಯಕತ್ವದ ಕಾಂಗ್ರೆಸ್ 64 ಸ್ಥಾನಗಳೊಂದಿಗೆ ಭರ್ಜರಿ ಗೆಲವು ಸಾಧಿಸಿ ಆಡಳಿತ ಪಕ್ಷದ ಸ್ಥಾನ ಅಲಂಕರಿಸಿದೆ. ಇನ್ನು ಪವನ್ ಕಲ್ಯಾಣ್ರ ಜನಸೇನಾ ಪಕ್ಷ 8 ಕ್ಷೇತ್ರದಲ್ಲೂ ಠೇವಣಿ ಕಳೆದುಕೊಂಡು ಭಾರಿ ಮುಖಭಂಗ ಅನುಭವಿಸಿದೆ. ಬಿಜೆಪಿ 8 ಸ್ಥಾನಗಳನ್ನ ಗೆಲ್ಲುವ ಮೂಲಕ ಗಮನಾರ್ಹ ಪ್ರದರ್ಶನ ನೀಡಿದೆ.
-masthmagaa.com
Contact Us for Advertisement