masthmagaa.com:
ಯುದ್ಧಪೀಡಿತ ಯುಕ್ರೇನ್ನಿಂದ ಜನರನ್ನ ಸೇಫಾಗಿ ಶಿಫ್ಟ್ ಮಾಡಲು ನಡೀತಿರೋ ಪ್ರಯತ್ನಗಳು ಪದೇಪದೆ ವಿಫಲವಾಗ್ತಿರೋ ನಡುವೆ, ಇವತ್ತು ರಷ್ಯಾ ಮತ್ತೊಮ್ಮೆ ಕದನ ವಿರಾಮದ ಆಫರ್ ಕೊಟ್ಟಿದೆ. ಈಸಲ ಐದು ನಗರಗಳಲ್ಲಿ ಕದನ ವಿರಾಮ ಘೋಷಿಸ್ತಿದ್ದೀವಿ. ರಾಜಧಾನಿ ಕಿಯವ್, ಖಾರ್ಕಿವ್, ಸುಮಿ, ಮಾರಿಯೋಪೋಲ್ ಮತ್ತು ಹೊಸದಾಗಿ ಚೆರ್ನಿಹಿವ್ ನಗರಗಳನ್ನ ಈ ಪಟ್ಟಿಗೆ ಸೇರಿಸಿದ್ದೀವಿ. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ ನಾವು ದಾಳಿ ಮಾಡಲ್ಲ. ಹ್ಯುಮನಿಟೇರಿಯನ್ ಕಾರಿಡಾರ್ಗೆ ಅವಕಾಶ ಕೊಡ್ತೀವಿ ಅಂತ ರಷ್ಯಾದ ರಕ್ಷಣಾ ಇಲಾಖೆ ಹೇಳಿದೆ. ಆದ್ರೆ ಒನ್ಸ್ ಅಗೈನ್ ಹ್ಯುಮನಿಟೇರಿಯನ್ ಕಾರಿಡಾರ್ಗೆ ರಷ್ಯಾ ಗುರ್ತಿಸಿರೋ ಬಹುತೇಕ ಮಾರ್ಗಗಳು ರಷ್ಯಾಗೆ ಹೋಗುತ್ತವೆ. ರೂಟ್ ರಷ್ಯಾ ಕಡೆ ಇರೋದ್ರಿಂದನೇ ನಿನ್ನೆಯ ಕದನ ವಿರಾಮ ವಿಫಲವಾಗಿತ್ತು. ಈಗ ಮತ್ತೆ ಅಂಥದ್ಧೇ ಆಫರ್ ಕೊಟ್ಟಿದೆ ರಷ್ಯಾ. ಇದಕ್ಕೆ ಯುಕ್ರೇನ್ ಏನ್ ಹೇಳುತ್ತೆ ನೋಡ್ಬೇಕು.
ಯುಕ್ರೆನ್ನ ಈಶಾನ್ಯ ಭಾಗದಲ್ಲಿ ಬರೋ ಸುಮಿ ನಗರ ಮತ್ತು ಅದರ ಸುತ್ತಮುತ್ತ ರಷ್ಯಾ ಸೇನೆ ಸೋಮವಾರ ರಾತ್ರಿ ನಡೆಸಿದ ವಾಯುದಾಳಿಯಲ್ಲಿ ಮಕ್ಕಳು ಸೇರಿದಂತೆ ಸುಮಾರು 10 ಜನ ಜನ ಮೃತಪಟ್ಟಿದ್ದಾರೆ. ಸುಮಿ ರೀಜಿನಲ್ ಮಿಲಿಟರಿ ಅಡ್ಮಿನಿಸ್ಟ್ರೇಷನ್ನ ಮುಖ್ಯಸ್ಥ ಈ ಮಾಹಿತಿ ಕೊಟ್ಟಿದ್ದಾರೆ. ಸುಮಿ ನಗರದಲ್ಲಿ 600ಕ್ಕೂ ಭಾರತೀಯರು ಕೂಡ ಸಿಲುಕಿಕೊಂಡಿದ್ದಾರೆ ಅಂತ ನಿನ್ನೆಯಷ್ಟೇ ಭಾರತ ಸರ್ಕಾರ ಹೇಳಿತ್ತು.
ಮತ್ತೊಂದುಕಡೆ ಯುಕ್ರೇನ್ನ ದಕ್ಷಿಣ ಭಾಗದಲ್ಲಿರೋ ಮೈಕೊಲೈವ್ ನಗರದಲ್ಲಿ ಜನವಸತಿ ಪ್ರದೇಶದ ಮೇಲೆ ದಾಳಿ ನಡೆದಿದೆ. ಇದರಲ್ಲಿ ಕನಿಷ್ಠ ನಾಲ್ವರು ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಯುಕ್ರೇನ್ನ ಪೂರ್ವ ಭಾಗದಲ್ಲಿರೋ ಖಾರ್ಕಿವ್ ನಗರದಲ್ಲಿ ನಡೆದ ದಾಳಿಯಲ್ಲಿ ಅಪಾರ್ಟ್ಮೆಂಟ್ಗೆ ಹಾನಿಯಾಗಿದೆ. ಇಲ್ಲೂ ಕನಿಷ್ಠ ನಾಲ್ಕು ಜನ ಮೃತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಬಂದರು ನಗರಿ ಒಡೆಸಾದಲ್ಲಿ ಮಂಗಳವಾರ ಬೆಳಗಿನಜಾವನ ನಾಲ್ಕು ಸಲ ಭಾರಿ ಸ್ಫೋಟದ ಸದ್ದು ಕೇಳಿಸಿದೆ.
ರಷ್ಯಾ ಸೇನೆಯ ಮತ್ತೊಬ್ಬ ಪ್ರಮುಖ ಜನರಲ್ನನ್ನ ಖಾರ್ಕಿವ್ನಲ್ಲಿ ಹತ್ಯೆ ಮಾಡಿದ್ದೀವಿ ಅಂತ ಯುಕ್ರೇನ್ ಹೇಳಿಕೊಂಡಿದೆ. ರಷ್ಯಾ ಸೇನೆಯ 41ನೇ ತುಕಡಿಯ ಫರ್ಸ್ಟ್ ಡೆಪ್ಯುಟಿ ಕಮ್ಯಾಂಡರ್ ವಿಟಲಿ ಗೆರಾಸಿಮೋವ್ ಹತ್ಯೆಯಾಗಿದ್ದಾರೆ ಎನ್ನಲಾಗ್ತಿದೆ. ಈ ಬಗ್ಗೆ ರಷ್ಯಾ ಇನ್ನೂ ಪ್ರತಿಕ್ರಿಯಿಸಿಲ್ಲ. ಇತ್ತೀಚೆಗೆ ರಷ್ಯಾದ ಜನರಲ್ ಅಂಡ್ರಿ ಸುಖೊವೆಟ್ಸ್ಕಿ ಅನ್ನೋರನ್ನ ಹೊಡೆದು ಹಾಕಿತ್ತು ಯುಕ್ರೇನ್. ಯುಕ್ರೇನ್ ಇದುವರೆಗು ರಷ್ಯಾದ 11 ಸಾವಿರ ಸೈನಿಕರನ್ನು ಕೊಂದಿರುವದಾಗಿ ಹೇಳಿಕೊಂಡಿದೆ. ಆದ್ರೆ ರಷ್ಯಾ 500 ಜನರ ಬಗ್ಗೆ ಮಾತ್ರ ಮಾಹಿತಿ ನೀಡಿದೆ.
-masthmagaa.com
Contact Us for Advertisement