masthmagaa.com:
ಸದಾ ಕೋಮುಸಂಘರ್ಷಗಳಿಗೆ ಸುದ್ದಿಯಾಗುವ ಉಡುಪಿಯಲ್ಲಿ ಈಗ ಮತ್ತೊಂದು ಘಟನೆ ವಿವಾದಕ್ಕೆ ಕಾರಣವಾಗಿದೆ. ಅಲ್ಲಿನ ನೇತ್ರ ಜ್ಯೋತಿ ನರ್ಸಿಂಗ್ ಕಾಲೇಜಿನಲ್ಲಿ ಮೂವರು ವಿದ್ಯಾರ್ಥಿನಿಯರು ತಮ್ಮ ಸಹಪಾಠಿಯೊಬ್ಬಳು ವಾಷ್ರೂಂನಲ್ಲಿದ್ದಾಗ ವಿಡಿಯೋ ಮಾಡಿ ಅಮಾನತ್ತಿಗೆ ಗುರಿಯಾಗಿದ್ದಾರೆ. ಆದ್ರೆ ಈ ವಿದ್ಯಾರ್ಥಿನಿಯರು ಮುಸ್ಲಿಂ ಸಮುದಾಯಕ್ಕೆ ಸೇರಿರೋದ್ರಿಂದ ಘಟನೆ ಕೋಮು ಸ್ವರೂಪ ಪಡೆದಿದೆ. ಈ ಕೃತ್ಯ ಬೆಳಕಿಗೆ ಬಂದ ಬಳಿಕ ಉಳಿದ ವಿದ್ಯಾರ್ಥಿನಿಯರು ತರಾಟೆಗೆ ತೆಗೆದುಕೊಂಡಿದ್ದು ಕಾಲೇಜಿನಲ್ಲಿ ದೊಡ್ಡ ಗಲಾಟೆಯೇ ಸಂಭವಿಸಿದೆ. ವಿಡಿಯೋ ಶೂಟ್ ಮಾಡಿದ ಮೂವರು ವಿದ್ಯಾರ್ಥಿನಿಯರ ಜೊತೆ ಇತರೆ ವಿದ್ಯಾರ್ಥಿನಿಯರು ವಾಗ್ವಾದ ಮಾಡಿದ್ದಾರೆ. ಬಳಿಕ ಮಧ್ಯೆ ಪ್ರವೇಶ ಮಾಡಿದ ಆಡಳಿತ ಮಂಡಳಿ ಮೂವರು ವಿದ್ಯಾರ್ಥಿನಿಯರ ಅಮಾನತು ಮಾಡಿದೆ. ಘಟನೆ ತಿಳಿಯುತ್ತಿದ್ದಂತೆ ಕಾಲೇಜಿಗೆ ತೆರಳಿದ್ದ ಹಿಂದೂ ಸಂಘಟನೆಗಳು ಸೂಕ್ತ ಕ್ರಮಕ್ಕೆ ಆಗ್ರಹಿಸಿವೆ.
ಈ ಸಂಬಂಧ ವಿಡಿಯೋ ಒಂದು ಕೂಡ ಟ್ವಿಟರ್ನಲ್ಲಿ ಶೇರ್ ಆಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ರಶ್ಮಿ ಸಮಂತ ಭಟ್ ಅನ್ನೋವ್ರೊಬ್ರು ಟ್ವೀಟ್ ಮಾಡಿ, ಮುಸ್ಲಿಂ ಯುವತಿಯರು ನೂರಾರು ಹಿಂದೂ ಯುವತಿಯರು ಅರೆನಗ್ನರಾಗಿದ್ದಾಗ ವಿಡಿಯೋ ಮಾಡಿ ತಮ್ಮ ಕೋಮಿನ ಯುವಕರಿಗೆ ಶೇರ್ ಮಾಡ್ತಿದ್ದಾರೆ ಆದ್ರೆ ಅವ್ರ ಬಗ್ಗೆ ಯಾರು ಮಾತಾಡ್ತಿಲ್ಲ ಅಂತ ಹೇಳಿದ್ದಾರೆ. ಈ ಬೆನ್ನಲ್ಲೇ ಪೊಲೀಸರು ರಶ್ಮಿ ಅವ್ರ ಮನೆಗೆ ಬಂದು ವಿಚಾರಣೆ ನೆಪದಲ್ಲಿ ಬೆದರಿಕೆ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಟ್ವೀಟ್ ಮಾಡಿರೋ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಕಾಂಗ್ರೆಸ್ ಸರ್ಕಾರ ಹಿಂದೂ ಪರ ಹೋರಾಟಗಾರರ ದನಿ ಅಡಗಿಸಲು ಪ್ರಯತ್ನಿಸುತ್ತಿದೆ. ರಶ್ಮಿ ಸಾವಂತ್ ಪರ ನಾವಿದ್ದೇವೆ. ಸರ್ಕಾರ ತನ್ನ ಬೆದರಿಕೆ ನೀತಿಯನ್ನು ಹೀಗೆ ಮುಂದುವರಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಅಂತ ಟ್ವೀಟ್ ಮಾಡಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ರಶ್ಮಿ ಸಮಂತ ಅವ್ರ ಮನೆಗೆ ಭೇಟಿ ನೀಡಿ ಬಂದಿದ್ದಾರೆ.
ಇನ್ನು ಘಟನೆ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಲೇಜು ಆಡಳಿತ ಮಂಡಳಿ ನಿರ್ದೇಶಕಿ ರಶ್ಮಿ ಕೃಷ್ಣಪ್ರಸಾದ್ ಅವರು, ಕಾಲೇಜಿನ ಶೌಚಾಲಯದಲ್ಲಿ ವೀಡಿಯೋ ಚಿತ್ರೀಕರಣ ಮಾಡಿರುವುದು ನಿಜ. ಮೂವರು ಒಂದೇ ಕ್ಲಾಸ್ ಆಗಿದ್ದು, ಇನ್ನೊಬ್ಬಳು ಬೇರೆ ತರಗತಿಯವಳು. ನಮಗೆ ವಿಚಾರ ತಿಳಿದ ಕೂಡಲೆ ವಿಚಾರಣೆ ಮಾಡಿದ್ದೇವೆ. ವಿದ್ಯಾರ್ಥಿನಿಯರನ್ನ ಸಸ್ಪೆಂಡ್ ಮಾಡಿದ್ದೇವೆ. ಮಕ್ಕಳು ತಪ್ಪೊಪ್ಪಿಗೆ ಕೊಟ್ಟ ನಂತರವೂ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಕಾಲೇಜ್ಗೆ ಮೊಬೈಲ್ ತರುವಂತಿಲ್ಲ, ಕಾನೂನು ಮೀರಿದ ಕಾರಣ ಮೊಬೈಲನ್ನು ಪೊಲೀಸರಿಗೆ ಒಪ್ಪಿಸಿದ್ದೇವೆ. ತಮಾಷೆಯ ವೀಡಿಯೋ ಮಾಡಿರುವುದಾಗಿ ಮೂವರು ಹೇಳಿದ್ದಾರೆ. ಮೊಬೈಲ್ ಕೊಡುವಾಗಲೇ ಅದರಲ್ಲಿ ವೀಡಿಯೋ ಇರಲಿಲ್ಲ. ವಾಶ್ ರೂಮ್ಗೆ ಹೋದಾಗ ಮೊಬೈಲ್ ನೋಡಿದೆ, ತಕ್ಷಣ ಹೊರಗೆ ಬಂದೆ. ಸ್ಥಳದಲ್ಲೇ ವಿಡಿಯೋ ಡಿಲೀಟ್ ಮಾಡಿಸಿರುವುದಾಗಿ ಯುವತಿ ಹೇಳಿದ್ದಾಳೆ. ಜೊತೆಗೆ ಸಂತ್ರಸ್ತೆ ಯಾವುದೇ ದೂರು ಕೊಟ್ಟಿಲ್ಲ. ಒಂದೇ ಕಾಲೇಜ್ ಮೇಟ್ ಆಗಿರುವ ಕಾರಣ ದೂರು ಕೊಡಲ್ಲ ಎಂದಿದ್ದಾಳೆ. ನೂರಾರು ವಿದ್ಯಾರ್ಥಿನಿಯರ ಚಿತ್ರೀಕರಣ ಮಾಡಲಾಗಿದೆ ಎಂಬುದು ಸರಿಯಲ್ಲ. ವಿಚಾರ ತಿಳಿಯದೆ ತಪ್ಪು ಮಾಹಿತಿ ಯಾರೂ ಹಾಕಬೇಡಿ ಅಂತ ಮನವಿ ಮಾಡಿದ್ದಾರೆ. ಈ ಬಗ್ಗೆ ಮಾತಾಡಿರೋ ಉಡುಪಿ ಎಸ್.ಪಿ ಹಾಕೆ ಅಕ್ಷಯ ಮಚ್ಚೀಂದ್ರ, ವಿದ್ಯಾರ್ಥಿನಿಯರ ಮೊಬೈಲ್ ಪರಿಶೀಲನೆ ಮಾಡಲಾಗಿದ್ದು ಯಾವುದೇ ವಿಡಿಯೋ, ಪೋಟೋ ಲಭ್ಯವಾಗಿಲ್ಲ. ಪ್ರ್ಯಾಂಕ್ ಮಾಡಲು ವಿಡಿಯೋ ಮಾಡಿ ನಂತ್ರ ಡಿಲೀಟ್ ಮಾಡಿರೋದು ವಿಚಾರಣೆ ವೇಳೆ ತಿಳಿದುಬಂದಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಉಡುಪಿ ಕಾಲೇಜಿನ ಮಹಿಳಾ ಶೌಚಾಲಯದಲ್ಲಿ ಹಿಡನ್ ಕ್ಯಾಮೆರಾ ಇಟ್ಟು ಚಿತ್ರೀಕರಣ ಮಾಡಲಾಗಿದೆ ಅಂತ ಹರಿಬಿಟ್ಟಿರೋ ವಿಡಿಯೋ ನಕಲಿಯಾಗಿದೆ. ಬೇರೆಡೆ ನಡೆದ ವಿಡಿಯೋನ ಎಡಿಟ್ ಮಾಡಿ, ಧ್ವನಿ ಸೇರಿಸಿ ಉಡುಪಿಲಿ ನಡೆದಿದೆ ಅಂತ ಬಿಂಬಿಸಲಾಗ್ತಿದೆ. ಘಟನೆ ಸಂಬಂಧ ರಶ್ಮಿ ಸಾವಂತ್ ಅನ್ನೋವ್ರು ಟ್ವೀಟ್ ಮಾಡಿದ್ರು ಹೀಗಾಗಿ ಅವ್ರ ಖಾತೆ ಪರಿಶೀಲಿಸಲಾಗಿದೆ ಅಂತ ಹೇಳಿದ್ದಾರೆ.
-masthmagaa.com
Contact Us for Advertisement