masthmagaa.com:
ಬೆಂಗಳೂರು: ರಾಜ್ಯದಲ್ಲಿ ಮಳೆ ಆರ್ಭಟ ಸ್ವಲ್ಪ ಕಮ್ಮಿಯಾಯ್ತು ಅನ್ನುವಾಗಲೇ ಭಾನುವಾರ ರಾತ್ರಿ ಬೆಂಗಳೂರಿನ ಕೆಲವೊಂದುಕಡೆ ಭಾರಿ ಮಳೆಯಾಗಿದೆ. ಯಲಹಂಕದ ಜಕ್ಕೂರು -2ರಲ್ಲಿ ಅತಿಹೆಚ್ಚು 153 ಮಿಲಿಮೀಟರ್ ಮಳೆಯಾಗಿದೆ. ನಿನ್ನೆ ಸುರಿದ ಮಳೆಗೆ ಬೆಂಗಳೂರಿನ ಹಲವು ಪ್ರದೇಶಗಳು ಜಲಾವೃತವಾಗಿ ಜನಜೀವನ, ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಪ್ರಮುಖವಾಗಿ ಯಲಹಂಕ, ವಿದ್ಯಾರಣ್ಯಪುರ, ಕೋಗಿಲು ಕ್ರಾಸ್, ಅಲ್ಲಾಳಸಂದ್ರ ಸುತ್ತಮುತ್ತ, ಸಿಂಗಾಪುರ ಕೆರೆ ಸುತ್ತಮುತ್ತ, ನಾಗಾವರ ಮುಂತಾದ ಕಡೆ ಹೆಚ್ಚು ಸಮಸ್ಯೆಯಾಗಿದೆ.
ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್ಮೆಂಟ್ ಬೇಸ್ಮೆಂಟ್ಗೆ ನೀರು ನುಗ್ಗಿ ಸಂಪೂರ್ಣ ಜಲಾವೃತವಾಗಿದೆ. ಬೇಸ್ಮೆಂಟ್ನಲ್ಲಿ ನಿಲ್ಲಿಸಿದ್ದ ಅವರ ವಾಹನಗಳು ನೀರಿನಲ್ಲಿ ಮುಳುಗಿ ಹೋಗಿದೆ. ಎಷ್ಟರಮಟ್ಟಿಗೆ ಅಂದ್ರೆ ಅಲ್ಲಿನ ನಿವಾಸಿಗಳನ್ನ ರಬ್ಬರ್ ಬೋಟ್ ಬಳಸಿ ರಕ್ಷಣೆ ಮಾಡಬೇಕಾದ ಪರಿಸ್ಥಿತಿ ಬಂದಿತ್ತು. ಈ ಅಪಾರ್ಟ್ಮೆಂಟ್ನಲ್ಲಿ ಸುಮಾರು 600 ಮನೆಯಲ್ಲಿ ಆರು ಸಾವಿರ ಜನ ವಾಸವಿದ್ದಾರೆ. ಸದ್ಯ ಇಲ್ಲಿನ ಪರಿಸ್ಥಿತಿಗೆ ನಿವಾಸಿಗಳು ಬಿಬಿಎಂಪಿಗೆ ಹಿಡಿಶಾಪ ಹಾಕ್ತಿದ್ದಾರೆ.
ಈ ಬಗ್ಗೆ ಮಾತನಾಡಿರೋ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ, ಯಲಹಂಕ ಕೆರೆ ಪಕ್ಕದ ತಗ್ಗು ಪ್ರದೇಶದಲ್ಲಿ ಕೇಂದ್ರೀಯ ವಿಹಾರ ನಿರ್ಮಾಣವಾಗಿದೆ. ಹೀಗಾಗಿ ನಿನ್ನೆ ಎರಡ್ಮೂರು ಗಂಟೆ ಸುರಿದ ಧಾರಾಕಾರ ಮಳೆಯಿಂದ ಕೆರೆ ನೀರು ನುಗ್ಗಿದೆ. ಇಂಥಾ ಸಂದರ್ಭದಲ್ಲಿ 8 ಅಡಿ ಸ್ಟಾರ್ಮ್ವಾಟರ್ ಡ್ರೈನ್ ಸಮರ್ಪಕವಾಗಲ್ಲ. ಹೀಗಾಗಿ 30ರಿಂದ 40 ಅಡಿ ಅಗಲದ ಡ್ರೈನ್ ವ್ಯವಸ್ಥೆ ಮಾಡೋ ಕೆಲಸ ನಡೀತಿದೆ. ನಿವಾಸಿಗಳಿಗೆ ಅಗತ್ಯ ವಸ್ತುಗಳನ್ನ ಪೂರೈಸಲು ವಿವಿಧ ತಂಡಗಳನ್ನ, ಬೋಟ್ಗಳನ್ನ, ಎಸ್ಡಿಆರ್ಎಫ್ ತಂಡವನ್ನ ನಿಯೋಜಿಸಿದ್ದೀವಿ ಎಂದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ರಾಜಕಾಲುವೆಯನ್ನ ಒತ್ತುವರಿ ಮಾಡಿ 25 ವರ್ಷದ ಹಿಂದೆ ಈ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಕಟ್ಟಿದ್ದಾರೆ. ಹೀಗಾಗಿ ರಾಜಕಾಲುವೆಯನ್ನ ಒತ್ತುವರಿಯನ್ನು ತೆರವು ಮಾಡ್ತೀವಿ ಎಂದಿದ್ದಾರೆ.
-masthmagaa.com
Contact Us for Advertisement