ವಿಭಿನ್ನ ಕಥೆಯ “ಸಿಗ್ನಲ್ ಮ್ಯಾನ್ 1971” ತೆರೆಗೆ .

masthmagaa.com:

ಹಿಂದೂಸ್ತಾನ್ ಮುಕ್ತ ಮೀಡಿಯಾ ಎಂಟರ್ ಟೇನರ್ಸ್ ಲಾಂಛನದಲ್ಲಿ ಗಣೇಶ್ ಪ್ರಭು ನಿರ್ಮಿಸಿರುವ, ಕೆ.ಶಿವರುದ್ಯಯ್ಯ ನಿರ್ದೇಶಿಸಿರುವ, ಖ್ಯಾತ ನಟ ಪ್ರಕಾಶ್ ಬೆಳವಾಡಿ ವಿಭಿನ್ನಪಾತ್ರದಲ್ಲಿ ನಟಿಸಿರುವ “ಸಿಗ್ನಲ್‌ ಮ್ಯಾನ್” 1971″ ಚಿತ್ರ ತೆರೆಗೆ ಬರಲು‌ ಸಿದ್ದವಾಗಿದೆ. ಅದಕ್ಕೂ ಮುನ್ನ ಈ ಬಾರಿಯ 14 ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ಏಷ್ಯನ್ ಚಿತ್ರಗಳ ವಿಭಾಗಕ್ಕೆ ಈ ಚಿತ್ರ ಆಯ್ಕೆಯಾಗಿದೆ‌‌. ಮಾರ್ಚ್ 26 ಹಾಗೂ 29 ರಂದು ಪ್ರದರ್ಶನವಾಗಲಿದೆ. ಈ ಚಿತ್ರದ ಕೆಲವು ವಿಷಯಗಳನ್ನು ಚಿತ್ರತಂಡದ ಸದಸ್ಯರು ಪತ್ರಿಕಾಗೋಷ್ಠಿಯಲ್ಲಿ ಹಂಚಿಕೊಂಡರು.

ಇಂಗ್ಲೀಷ್ ಲೇಖಕ ಚಾರ್ಲ್ಸ್ ಡಿಕನ್ಸ್ ಅವರ “ಸಿಗ್ನಲ್ ಮ್ಯಾನ್” ಕಥೆಯಿಂದ ಸ್ಪೂರ್ತಿ ಪಡೆದ ನಾನು ಈ ಚಿತ್ರ ಮಾಡಬೇಕೆಂದು ಕೊಂಡೆ. ಈ ವಿಷಯವನ್ನು ಪ್ರಕಾಶ್ ಬೆಳವಾಡಿ ಅವರ ಹತ್ತಿರ ಹೇಳಿದಾಗ, ಈ ಕಥೆಯನ್ನು ಭಾರತ ದೇಶಕ್ಕೆ ತಕ್ಕ ಹಾಗೆ ಅವರು ಕಥೆ ಹೆಣೆದು ಕೊಟ್ಟರು. 1971 ರ ಕಾಲಘಟ್ಟದಲ್ಲಿ ನಡೆಯುವ ಕಥೆಯಿದು. ಆಗಷ್ಟೇ ಭಾರತ – ಪಾಕ್ ಯುದ್ದದ ಭೀತಿ ದೇಶದೆಲ್ಲೆಡೆ ಇರುತ್ತದೆ. ಅಂತಹ ಸಮಯದಲ್ಲಿ ನಡೆಯುವ ಕಥೆ “ಸಿಗ್ನಲ್ ಮ್ಯಾನ್ 1971″. ಅದೊಂದು ಪಶ್ಚಿಮ ಘಟ್ಟದ ರೈಲ್ವೆ ನಿಲ್ದಾಣ. ಆದರೆ ಅಲ್ಲಿ ರೈಲು ನಿಲುವುದಿಲ್ಲ. ಆ ನಿಲ್ದಾಣದಲೊಬ್ಬ ಬಾಲು ಎಂಬ ” ಸಿಗ್ನಲ್ ಮ್ಯಾನ್”. ಅಲ್ಲಿಗೆ ಆತನೇ ಎಲ್ಲಾ. ಅಂತಹ ಸುಂದರ ಪರಿಸರದಲ್ಲಿರುವ ನಿಲ್ದಾಣಕ್ಕೆ ಅನಿರೀಕ್ಷಿತವಾಗಿ ಫೋಟೋಗ್ರಾಫರ್ ರಾಜಶೇಖರ್ ಆಗಮನವಾಗುತ್ತದೆ. ಬಾಲುವಿನ ಒಂಟಿತನ, ತಳಮಳ, ಹಿಂದಿನ ನೆನಪುಗಳು, ಯುದ್ದದ ಭೀತಿ. ಸೈನಿಕರನ್ನು ಹೊತ್ತೊಯುವ ರೈಲುಗಳು. ಇವೆಲ್ಲವೂ ಐದು ದಿನಗಳಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ. ಈ ಬಾರಿಯ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲೂ ನಮ್ಮ ಚಿತ್ರ ಪ್ರದರ್ಶನವಾಗುತ್ತಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ಉತ್ತಮ ತಂತ್ರಜ್ಞರ ಹಾಗೂ ಕಲಾವಿದರ ಸಹಕಾರದಿಂದ ನಮ್ಮ ಚಿತ್ರ ಅದ್ದೂರಿಯಾಗಿ ಬಂದಿದೆ. ಇದು ನನ್ನ ಹನ್ನೊಂದನೇ ನಿರ್ದೇಶನದ ಚಿತ್ರ ಎಂದರು ನಿರ್ದೇಶಕ ಕೆ.ಶಿವರುದ್ರಯ್ಯ.

ನನಗೆ ಶಿವರುದ್ರಯ್ಯ ಅವರು ಈ ಕಾನ್ಸೆಪ್ಟ್ ಬಗ್ಗೆ ಹೇಳಿ, ನೀವು ಅಭಿನಯಿಸಬೇಕು ಎಂದರು. ಆನಂತರ ಕಥೆಯನ್ನು ನೀವೆ ಬರೆಯಿರಿ ಎಂದು ಹೇಳಿದರು. ನಾನು ಈ ಕಥೆಯನ್ನು ಭಾರತದ ಸೊಗಡಿಗೆ ತಕ್ಕ ಹಾಗೆ ಬರೆದಿದ್ದೇನೆ. ಊಟಿಯ ಬಳಿ ಹೆಚ್ಚು ಚಿತ್ರೀಕರಣ ನಡೆದಿದೆ. ಕೊಟ್ಟಿಗೆಹಾರ, ಚಿಕ್ಕಮಗಳೂರು, ಬೆಂಗಳೂರಿನಲ್ಲೂ ಚಿತ್ರೀಕರಣವಾಗಿದೆ. ಈ ಚಿತ್ರಕ್ಕಾಗಿ ಅದ್ದೂರಿ ಸೆಟ್ ನಿರ್ಮಿಸಲಾಗಿತ್ತು. ರೈಲು ಈ ಚಿತ್ರದ ಒಂದು ಭಾಗವಾಗಿತ್ತು. ಸಹ ಕಲಾವಿದರ ಅಭಿನಯ ಹಾಗೂ ತಂತ್ರಜ್ಞರ ಕಾರ್ಯವೈಖರಿ ಸೊಗಸಾಗಿತ್ತು ಎಂದು ನಟ ಹಾಗೂ ಕಥೆಗಾರ ಪ್ರಕಾಶ್ ಬೆಳವಾಡಿ ತಿಳಿಸಿದರು.

ನಾನು ಉದ್ಯಮಿ. ಈ ಚಿತ್ರದ ಕಥೆ ಇಷ್ಟವಾಯಿತು ನಿರ್ಮಾಣಕ್ಕೆ ಮುಂದಾದೆ‌. ಮುಂದೆ ಸದಭಿರುಚಿ ಚಿತ್ರಗಳನ್ನು ನಿರ್ಮಿಸುವ ಆಸೆ ಇದೆ ಎಂದರು ನಿರ್ಮಾಪಕ ಗಣೇಶ್ ಪ್ರಭು.

ಛಾಯಾಗ್ರಹಣದ ಬಗ್ಗೆ ಶೇಖರ್ ಚಂದ್ರು ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ – ನಟ ವೆಂಕಟೇಶ್ ಪ್ರಸಾದ್ ಹಾಗೂ ಚಿತ್ರದಲ್ಲಿ ಅಭಿನಯಿಸಿರುವ ರಾಜೇಶ್ ನಟರಂಗ ಈ ಚಿತ್ರದ ಕುರಿತು ಮಾತನಾಡಿದರು.

-masthmagaa.com

Contact Us for Advertisement

Leave a Reply