masthmagaa.com:
ಅಫ್ಘಾನಿಸ್ತಾನದಲ್ಲಿ ಅಧಿಕಾರಕ್ಕೇರುತ್ತಲೇ ತಾಲಿಬಾನಿಗಳು ಭಾರತದ ಜೊತೆ ಯಾವ ರೀತಿ ಸಂಬಂಧ ಹೊಂದಬಹುದು ಅನ್ನೋದನ್ನ ತೋರಿಸಿದ್ದಾರೆ. ಭಾರತದ ಜೊತೆಗಿನ ಎಲ್ಲಾ ರೀತಿಯ ಆಮದು ಮತ್ತು ರಫ್ತು ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿದ್ದಾರೆ. ಭಾರತ ಪಾಕಿಸ್ತಾನ ಮತ್ತು ಇರಾನ್ ಮೂಲಕ ಅಫ್ಘಾನಿಸ್ತಾನದ ಜೊತೆಗೆ ವ್ಯಾಪಾರ ಸಂಪರ್ಕ ಹೊಂದಿತ್ತು. ಅಫ್ಘಾನಿಸ್ತಾನ ಜೊತೆಗೆ ವ್ಯಾಪಾರ ಮತ್ತು ಬಂಡವಾಳ ಹೂಡಿಕೆ ವಿಚಾರದಲ್ಲಿ ಭಾರತ ಒಳ್ಳೆ ಸಂಬಂಧ ಹೊಂದಿತ್ತು. ಆದ್ರೀಗ ಭಾರತದಿಂದ ಆಮದು ಮತ್ತು ರಫ್ತು ಎರಡಕ್ಕೂ ತಾಲಿಬಾನಿಗಳು ಬ್ರೇಕ್ ಹಾಕಿದ್ದಾರೆ. ಅಂದಹಾಗೆ ಭಾರತ 2021ರಲ್ಲಿ ಈವರೆಗೆ 83 ಕೋಟಿ ಡಾಲರ್ ಅಂದ್ರೆ 6,142 ಕೋಟಿ ರೂಪಾಯಿ ಮೊತ್ತದ ವಸ್ತುಗಳನ್ನು ರಫ್ತು ಮಾಡಿದ್ದು, 51 ಕೋಟಿ ಡಾಲರ್ ಅಂದ್ರೆ 3,774 ಕೋಟಿ ರೂಪಾಯಿ ಮೊತ್ತದ ವಸ್ತುಗಳನ್ನು ಆಮದು ಮಾಡಿಕೊಂಡಿದೆ. 300 ಕೋಟಿ ಡಾಲರ್ ಮೊತ್ತದ ಬಂಡವಾಳ ಹೂಡಿಕೆ ಮಾಡಿದ್ದು, ಸುಮಾರು 400 ಯೋಜನೆಗಳು ನಿರ್ಮಾಣ ಹಂತದಲ್ಲಿವೆ ಅಂತ ಕೂಡ ಗೊತ್ತಾಗಿದೆ.
ಇನ್ನು ಅಫ್ಘಾನಿಸ್ತಾನದಲ್ಲಿ ಸಿಲುಕಿರುವ ಸಿಖ್ ಮತ್ತು ಹಿಂದೂಗಳ ಕಥೆಯೇನು ಅನ್ನೋ ಚರ್ಚೆಯಾಗ್ತಿದೆ. ಈ ಬಗ್ಗೆ ತಾಲಿಬಾನಿಗಳು ಮಾತನಾಡಿರೋ ಒಂದು ವಿಡಿಯೋವನ್ನು ಅಕಾಲಿ ದಳ ಲೀಡರ್ ಒಬ್ಬರು ಶೇರ್ ಮಾಡಿದ್ದಾರೆ. ಇದ್ರಲ್ಲಿ ಸಿಖ್ ವಲಸಿಗರ ಜೊತೆ ಮಾತನಾಡಿರೋ ತಾಲಿಬಾನಿ ನಾಯಕ, ಹಿಂದೂಗಳು ಮತ್ತು ಸಿಖ್ ಸಮುದಾಯದವರು ಯಾವುದೇ ರೀತಿಯ ಭಯ ಪಡೋ ಅಗತ್ಯತೆ ಇಲ್ಲ.. ತಾಲಿಬಾನಿಗಳು ಏನೂ ಮಾಡೋದಿಲ್ಲ.. ಧೈರ್ಯವಾಗಿರಿ ಅಂತ ಭರವಸೆ ನೀಡಿದ್ದಾರೆ.
ಭಾರತ ರಾಯಭಾರಿ ಸೇರಿದಂತೆ ಹಲವರನ್ನು ಕರೆತಂದ್ರೂ ಇನ್ನೂ ಕೂಡ ಹಲವರು ಅಲ್ಲೇ ಸಿಲುಕಿದ್ದಾರೆ. ಅವರನ್ನು ಸುರಕ್ಷಿತವಾಗಿ ಕರೆತರಲು ಎಲ್ಲಾ ರೀತಿಯ ಪ್ರಯತ್ನಗಳನ್ನು ನಡೆಸ್ತಿದ್ದೀವಿ ಅಂತ ವಿದೇಶಾಂಗ ಸಚಿವ ಎಸ್.ಜೈಶಂಕರ್ ತಿಳಿಸಿದ್ದಾರೆ. ತಾಲಿಬಾನ್ ಜೊತೆ ಭಾರತ ಸರ್ಕಾರ ಸಂಪರ್ಕದಲ್ಲಿದ್ಯಾ ಅನ್ನೋ ಪ್ರಶ್ನೆಗೆ ಉತ್ತರಿಸಲು ಜೈಶಂಕರ್ ನಿರಾಕರಿಸಿದ್ರು. ತಾಲಿಬಾನ್ ಆಳ್ವಿಕೆಯಲ್ಲಿ ಭಾರತದ ಜೊತೆಗಿನ ಸಂಬಂಧ ಹೇಗಿರುತ್ತೆ ಅಂತ ಕೇಳಿದಾಗ ಇನ್ನೂ ಆರಂಭಿಕ ದಿನಗಳಲ್ವಾ.. ಮುಂದೆ ನೋಡೋಣ ಅಂತ ಹೇಳಿದ್ದಾರೆ. ಎಲ್ಲರಂತೆ ನಾವು ಕೂಡ ಸದ್ಯಕ್ಕೆ ಅಲ್ಲಿ ನಡೆಯುತ್ತಿರೋ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೀವಿ. ಮುಂದಿನ ದಿನಗಳಲ್ಲಿ ಸಂಬಂಧ ಯಾವ ರೀತಿ ಹೊಂದಬೇಕು. ಏನ್ ಕಥೆ ಅನ್ನೋದನ್ನ ನಿರ್ಧರಿಸುತ್ತೀವಿ ಅಂದ್ರು. ಅದೇ ಭಾರತ ಅಫ್ಘಾನಿಸ್ತಾನದಲ್ಲಿ ಬಂಡವಾಳ ಹೂಡಿಕೆ ಮುಂದುವರಿಸುತ್ತಾ ಅಂತ ಕೇಳಿದಾಗ, ಅಫ್ಘಾನ್ ಜನರ ಜೊತೆಗಿನ ಐತಿಹಾಸಿಕ ಸಂಬಂಧ ಮುಂದುವರಿಯುತ್ತೆ ಅಂತ ಕೂಡ ತಿಳಿಸಿದ್ದಾರೆ.
-masthmagaa.com
Contact Us for Advertisement