masthmagaa.com:
ದೆಹಲಿ: ಇನ್ನು ಎಷ್ಟು ಪೀಳಿಗೆವರೆಗೆ ಶಿಕ್ಷಣ ಮತ್ತು ಉದ್ಯೋಗ ಕ್ಷೇತ್ರದಲ್ಲಿ ಮೀಸಲಾತಿ ಮುಂದುವರಿಯಬೇಕು ಅಂತ ಸುಪ್ರೀಂಕೋರ್ಟ್ ಪ್ರಶ್ನಿಸಿದೆ. ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಮೀಸಲಾತಿ ನೀಡುವಂತೆ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದೆ. ಕಳೆದೈದು ದಿನಗಳಿಂದ ಈ ಅರ್ಜಿ ಸುಪ್ರೀಂಕೋರ್ಟ್ನ ಪಂಚಸದಸ್ಯ ಪೀಠದ ಮುಂದೆ ವಿಚಾರಣೆ ನಡೀತಾ ಇದೆ.
ಮಹಾರಾಷ್ಟ್ರ ಪರ ವಕೀಲರಾದ ಮುಕುಲ್ ರೋಹ್ಟಗಿ, ಸದ್ಯ ದೇಶದಲ್ಲಿ ಮಂಡಲ್ ತೀರ್ಪು ಉದ್ಯೋಗ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೀಸಲಾತಿಯನ್ನು ಶೇ.50ಕ್ಕೆ ಸೀಮಿತಗೊಳಿಸಿದೆ. 1931ರ ಜನಗಣತಿ ಆಧಾರದಲ್ಲಿ ಮಂಡಲ್ ತೀರ್ಪು ನೀಡಿತ್ತು. ಆದ್ರೀಗ ಪರಿಸ್ಥಿತಿ ಬದಲಾಗಿದೆ. ಹೀಗಾಗಿ ಮೀಸಲಾತಿಯ ಕೋಟಾದಲ್ಲಿ ಹೆಚ್ಚು ಕಡಿಮೆ ಮಾಡುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ಬಿಡಬೇಕು ಅಂತ ವಾದಿಸಿದ್ರು.
ಈ ವೇಳೆ ಪ್ರತಿಕ್ರಿಯಿಸಿದ ನ್ಯಾಯಾಲಯ, ಶೇ.50ರಷ್ಟು ಮೀಸಲಾತಿ ಅನ್ನೋ ಮಿತಿಯನ್ನು ತೆಗೆದು ಹಾಕಿದ್ರೆ ಸಮಾಜದಲ್ಲಿ ಅಸಮಾನತೆ ಸೃಷ್ಟಿಗೆ ಕಾರಣವಾಗಲ್ವಾ.. ಇನ್ನು ಎಷ್ಟು ಪೀಳಿಗೆವರೆಗೆ ಮೀಸಲಾತಿ ಬೇಕು ಅಂತ ಪ್ರಶ್ನಿಸಿದೆ. ಜೊತೆಗೆ ಸ್ವಾತಂತ್ರ್ಯ ಬಂದು 70 ವರ್ಷಗಳಾಗಿದ್ದು, ಮೀಸಲಾತಿ ನೀಡಿದರೂ ಹಿಂದುಳಿದ ವರ್ಗಗಳು ಮುಂದೆ ಬಂದಿಲ್ಲ. ಹೀಗಾಗಿ ಮಂಡಲ್ ತೀರ್ಪನ್ನು ಕೂಡ ಮರುಪರಿಶೀಲನೆ ಮಾಡಬೇಕಾದ ಅಗತ್ಯತೆ ಎದುರಾಗಿದೆ ಅಂತ ಅಭಿಪ್ರಾಯಪಟ್ಟಿದೆ. ನಂತರ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಯ್ತು.
-masthmagaa.com
Contact Us for Advertisement