masthmagaa.com:
ಮಣಿಪುರದ ಹಿಂಸಾಚಾರದಲ್ಲಿ ವಿದೇಶಿ ಶಕ್ತಿಗಳ ಕೈವಾಡವಿದೆ ಅನ್ನೋ ಅನುಮಾನಗಳ ನಡುವೆಯೇ ಮಾಜಿ ಸೇನಾ ಮುಖ್ಯಸ್ಥ ಜನರಲ್ ಎಂ.ಎಂ ನರವನೆ ಸ್ಫೋಟಕ ಹೇಳಿಕೆ ಕೊಟ್ಟಿದ್ದಾರೆ. ಈ ಹಿಂಸಾಚಾರದಲ್ಲಿ ವಿದೇಶಿ ಏಜೆನ್ಸಿಗಳ ಪಾತ್ರ ಖಂಡಿತವಾಗಿ ಇದೆ. ಈ ಹಿಂದೆ ಇಂತಹ ಅನೇಕ ಘಟನೆಗಳಿಗೆ ಹಾಗೂ ಅನೇಕ ಬಂಡಾಯ ಗುಂಪುಗಳಿಗೆ ಚೀನಾ ನೆರವು ನೀಡಿತ್ತು. ಚೀನಾ ಇಂತಹ ದಂಗೆಗಳನ್ನ ನಡೆಸಲು ಹಲವು ವರ್ಷಗಳಿಂದ ಸಹಾಯ ನೀಡುತ್ತಿದೆ, ಇಂದಿಗೂ ಇದು ಮುಂದುವರಿಯುತ್ತಿದೆ ಅಂತ ಹೇಳಿದ್ದಾರೆ. ಇದೇ ಈಗ ತೀವ್ರ ಚರ್ಚೆ ಹಾಗೂ ಆತಂಕಕ್ಕೆ ಕಾರಣವಾಗಿದೆ. ಯಾಕಂದ್ರೆ ನರವನೆ ಅವರು ಯಾರೋ ಸಾಮಾನ್ಯರಲ್ಲ. ಸೇನಾ ಮುಖ್ಯಸ್ಥರಾಗಿದ್ದವರು. ಇಡೀ ದೇಶದ ಭದ್ರತೆಯ ಜವಾಬ್ದಾರಿ ಹೊತ್ತಿದ್ದವರು. ಈಗ ಅವರೇ ಈ ರೀತಿ ಹೇಳಿರೋದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಇನ್ನು ಇದೇ ವೇಳೆ ಭಾರತದ ಟು ಫ್ರಂಟ್ ವಾರ್ ಬಗ್ಗೆಯೂ ನರವಾನೆ ಮಾತನಾಡಿದ್ದಾರೆ. ಪಾಕ್ ಹಾಗೂ ಚೀನಾವನ್ನ ಒಟ್ಟಿಗೆ ಎದುರಿಸೋ ಕುರಿತು ಮಾತನಾಡಿದ ಅವರು, ಒಂದು ದೇಶಕ್ಕೆ ರಾಜತಾಂತ್ರಿಕ ಮಾರ್ಗ ಅನ್ನೋದು ತುಂಬಾನೇ ಇಂಪಾರ್ಟೆಂಟ್. ಟು-ಫ್ರಂಟ್ ಥ್ರೆಟ್ ಹಾಗೂ ಟು-ಫ್ರಂಟ್ ವಾರ್ ನಡುವೆ ವ್ಯತ್ಯಾಸವಿದೆ. ಟು ಫ್ರಂಟ್ ವಾರ್ ಮಾಡೋಕ್ಕಿಂತ ನಾವು ರಾಜತಾಂತ್ರಿಕ ಮಾರ್ಗದಲ್ಲಿ ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಬೇಕು. ಇತಿಹಾಸದಲ್ಲಿ ಟು ಫ್ರಂಟ್ ವಾರ್ ಮಾಡಿ ಯಾರೂ ಇಲ್ಲಿತನಕ ಗೆದ್ದಿಲ್ಲ ಅಂತ ಹೇಳಿದ್ದಾರೆ.
ಇತ್ತ ಮಣಿಪುರಲ್ಲಿ ಇನ್ನೊಂದಷ್ಟು ಇಂಪಾರ್ಟೆಂಟ್ ಘಟನೆಗಳು ನಡೆದಿವೆ. ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಮೇರೆಗೆ ಇಬ್ಬರು ಮಹಿಳೆಯರ ಬೆತ್ತಲೆ ಮರೆವಣಿಗೆ ಪ್ರಕರಣವನ್ನು CBIಗೆ ಹಸ್ತಾಂತರಿಸಲಾಗಿದೆ. ಇದರ ಜೊತೆಗೆ ಹಿಂಸಾಚಾರಕ್ಕೆ ಸಂಬಂಧಿಸಿದ 6 ಪ್ರಕರಣಗಳನ್ನೂ ಸಹ CBIಗೆ ಹಸ್ತಾಂತರಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ . ಇತ್ತ ಸಂಘರ್ಷ ಪೀಡಿತ ಮಣಿಪುರದಲ್ಲಿನ ಪರಿಸ್ಥಿತಿಯನ್ನು ಪರಿಶೀಲನೆ ಮಾಡೋಕೆ ‘ಇಂಡಿಯಾʼ ಮೈತ್ರಿಕೂಟದ 21 ಸಂಸದರ ನಿಯೋಗ ಮಣಿಪುರಕ್ಕೆ ಭೇಟಿ ನೀಡಿದೆ. ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌದರಿ, ಗೌರವ್ ಗೊಗೊಯಿ, TMCಯ ಸುಶ್ಮಿತಾ ದೇವ್ ಹಾಗೂ DMKಯ ಕನಿಮೋಳಿ ಸೇರಿದಂತೆ 21 ಸಂಸದರ ನಿಯೋಗ ಇಂದು ಮತ್ತು ನಾಳೆ ನಿರಾಶ್ರಿತರ ಪರಿಹಾರ ಕೇಂದ್ರಗಳಿಗೆ ಭೇಟಿ ನೀಡಲಿದ್ದಾರೆ. ಜೊತೆಗೆ ಕುಕಿ ಸಮುದಾಯದ ಸಂತ್ರಸ್ತರ ಬಳಿ ಚರ್ಚೆ ನಡೆಸಲಿದ್ದಾರೆ. ಇನ್ನೊಂದ್ ಕಡೆ ವಿಪಕ್ಷಗಳ ಮೈತ್ರಿಕೂಟ ಮಣಿಪುರ ಭೇಟಿಯನ್ನ ಕೇಂದ್ರ ಸಚಿವ ಅನುರಾಗ್ ಠಾಕೂರ್ ಟೀಕಿಸಿದ್ದು, ಇದು ಕೇವಲ ಶೋ ಆಫ್ ಭೇಟಿ ಅಂತ ಕುಟುಕಿದ್ದಾರೆ. ರಾಜಸ್ಥಾನ ಮತ್ತು ಪಶ್ಚಿಮ ಬಂಗಾಳದಲ್ಲಿಯೂ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿದ್ದು, ನಿಯೋಗ ಅಲ್ಲಿಗೆ ಯಾವಾಗ ಭೇಟಿ ನೀಡಲಿದೆ? ಯಾವಾಗ ವರದಿ ಸಲ್ಲಿಸಲಿದೆ? ಅಂತ ಪ್ರಶ್ನಿಸಿದ್ದಾರೆ.
ಇತ್ತ ಮಣಿಪುರ ಹಿಂಸಾಚಾರ ಹಾಗೂ ಸಿಜೆಐ ಚಂದ್ರಚೂಡ್ ಅವರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದ, ಖ್ಯಾತ ಪಬ್ಲಿಶರ್ ಹಾಗೂ ರಾಜಕೀಯ ವಿಶ್ಲೇಷಕ ಬದ್ರಿ ಶೇಷಾದ್ರಿ ಅವರನ್ನ ತಮಿಳುನಾಡು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಇಂಟರ್ ವ್ಯೂ ಒಂದ್ರಲ್ಲಿ ಮಾತಾಡಿದ್ದ ಶೇಷಾದ್ರಿ, ಸಿಜೆಐಯವರ ಕೈಗೆ ಬಂದೂಕು ಕೊಟ್ಟು ಅವರನ್ನ ಮಣಿಪುರಕ್ಕೆ ಕಳುಹಿಸಿಬೇಕು. ಆಗ ಅವರು ಶಾಂತಿ ಸ್ಥಾಪನೆ ಮಾಡ್ತಾರಾ ಅಂತ ನೋಡಬೇಕು ಅಂತ ಹೇಳಿದ್ರು. ಹೀಗಾಗಿ ಇದು ಪ್ರಚೋದನೆ ಕೊಟ್ಟ ಹೇಳಿಕೆ ಅಂತೇಳಿ ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ. ಈ ಕಡೆ ಶೇಷಾದ್ರಿ ಬಂಧನ ವಿರೋಧಿಸಿ, ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ತಮಿಳುನಾಡಲ್ಲಿ ಅಭಿವ್ಯಕ್ತಿ ಸ್ವಾತಂತ್ರಕ್ಕೂ ಅವಕಾಶ ಇಲ್ವಾ ಅಂತ ಪ್ರಶ್ನೆ ಮಾಡಿದ್ದಾರೆ. ಆ ಕಡೆ ಕಾಂಗ್ರೆಸ್ ನಾಯಕರು ಕೂಡ ಶೇಷಾದ್ರಿ ಬಂಧನವನ್ನ ವಿರೋಧಿಸಿದ್ದಾರೆ.
-masthmagaa.com
Contact Us for Advertisement