masthmagaa.com:
ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ಚರ್ಚೆ ಜೋರಾಗ್ತಿದ್ದಂತೇ ಇವತ್ತು ಮತ್ತಷ್ಟು ಸ್ವಾಮೀಜಿಗಳು ಬಂದು ಸಿಎಂ ಯಡಿಯೂರಪ್ಪ ಅವರನ್ನ ಭೇಟಿಯಾಗಿದ್ದಾರೆ. ಈ ವೇಳೆ ರಾಜೀನಾಮೆ ನೀಡುವಂತೆ ಹೈಕಮಾಂಡ್ನಿಂದ ನನಗಿನ್ನೂ ಸೂಚನೆ ಬಂದಿಲ್ಲ ಅಂತ ಮುಖ್ಯಮಂತ್ರಿಗಳು ಹೇಳಿದ್ದಾರೆ ಅಂತ ವರದಿಯಾಗಿದೆ. ಸಿಎಂ ಯಡಿಯೂರಪ್ಪ ಅವರು ಎಲ್ಲೂ ಬಹಿರಂಗವಾಗಿ ಏನೂ ಹೇಳಿಲ್ಲ. ಆದ್ರೆ ಗೃಹಸಚಿವ ಬಸವರಾಜ ಬೊಮ್ಮಾಯಿ ಮಾತನಾಡಿ, ಸಿಎಂ ಆಗಿ ಯಡಿಯೂರಪ್ಪ ಅವರೇ ಮುಂದುವರೀತಾರೆ. ರಾಜಕೀಯ ಅಸ್ಥಿರತೆಯನ್ನ ಸೃಷ್ಟಿಸಲು ಇಂಥಾ ವದಂತಿಗಳನ್ನ ಹಬ್ಬಿಸಲಾಗ್ತಿದೆ ಅಂತ ಹೇಳಿದ್ದಾರೆ. ಇನ್ನು ಸಿಎಂ ಯಡಿಯೂರಪ್ಪ ಅವರಿಗೆ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಕೂಡ ಬೆಂಬಲ ಸೂಚಿಸಿದ್ದಾರೆ. ಕರ್ನಾಟಕದಲ್ಲಿ ಮೊದಲಬಾರಿ ಬಿಜೆಪಿಯನ್ನ ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ. ಅವರು ಯಾರದ್ದೋ ಚಮ್ಚಾ ಆಗದ ಕಾರಣ ಅವರನ್ನ ಕೆಳಗಿಳಿಸಲು ಕೆಲವರು ಸಂಚು ಹೂಡಿದ್ರು. ಆದ್ರೆ ಯಡಿಯೂರಪ್ಪ ಇಲ್ಲದೆ ಕರ್ನಾಟಕದಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲ್ಲ. ಹೀಗಿದ್ದಮೇಲೆ ಅವರನ್ನ ಯಾಕೆ ತೆಗೆಯುತ್ತೀರಿ ಅಂತ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ. ಮತ್ತೊಂದುಕಡೆ ಜುಲೈ 25ರಂದು ಶಾಸಕರಿಗಾಗಿ ಸಿಎಂ ಯಡಿಯೂರಪ್ಪ ಆಯೋಜಿಸಿದ್ದ ಭೋಜನಕೂಟವನ್ನ ರದ್ದು ಮಾಡಲಾಗಿದೆ. ಇದೆನ್ನೆಲ್ಲ ನೋಡಿದ್ರೆ ರಾಜ್ಯದಲ್ಲಿ ಸಿಎಂ ಬದಲಾವಣೆಗೆ ತಾತ್ಕಾಲಿಕ ಬ್ರೇಕ್ ಬಿತ್ತಾ ಅನ್ನೋ ಅನುಮಾನ ಮೂಡಿದೆ.
-masthmagaa.com
Contact Us for Advertisement