masthmagaa.com:
ಕೇರಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರ ಈಗ ಕರ್ನಾಟಕಕ್ಕೂ ಕಾಲಿಡ್ತಾ ಅನ್ನೋ ಅನುಮಾನ ಮೂಡಿದೆ. ಇದಕ್ಕೆ ಕಾರಣ, ಶಿವಮೊಗ್ಗ ನಗರದ ಪಾರ್ಕ್ವೊಂದರ ಬಳಿ 5ಕ್ಕೂ ಹೆಚ್ಚು ಹಕ್ಕಿಗಳು ಸತ್ತುಬಿದ್ದಿವೆ. ಅದೇ ರೀತಿ ಚಿಕ್ಕಬಳ್ಳಾಪುರದ ಕೆರೆವೊಂದರ ಬಳಿಯೂ ಹಕ್ಕಿಗಳು ಸತ್ತುಬಿದ್ದಿವೆ. ಸ್ಥಳಕ್ಕೆ ಬಂದಿರುವ ಅಧಿಕಾರಿಗಳು ಹಕ್ಕಿಗಳ ಸ್ಯಾಂಪಲ್ಗಳನ್ನ ಪಡೆದು ಪರೀಕ್ಷೆಗೆ ಕಳಿಸಿದ್ದಾರೆ. ಅಲ್ಲದೆ ಹಕ್ಕಿಗಳು ಸತ್ತುಬಿದ್ದಿರುವ ಪ್ರದೇಶದ ಬಳಿ ಜಾನುವಾರುಗಳನ್ನ ಬಿಡದಂತೆ ಸ್ಥಳೀಯರಿಗೆ ಸೂಚನೆ ಕೊಟ್ಟಿದ್ದಾರೆ. ಹಕ್ಕಿಜ್ವರದಿಂದಲೇ ಈ ಹಕ್ಕಿಗಳು ಸತ್ತಿವೆಯಾ ಅನ್ನೋದು ಪರೀಕ್ಷೆಯ ವರದಿ ಬಂದ ಮೇಲೆ ಗೊತ್ತಾಗಲಿದೆ. ಮತ್ತೊಂದುಕಡೆ ದಕ್ಷಿಣ ಕನ್ನಡ ಜಿಲ್ಲೆಯ ಮಂಜನಾಡಿಯಲ್ಲಿ ಮೊನ್ನೆ ಸತ್ತುಬಿದ್ದಿದ್ದ 6 ಕಾಗೆಗಳ ಸ್ಯಾಂಪಲ್ಗಳನ್ನ ಪರೀಕ್ಷೆಗೆ ಕಳಿಸಲಾಗಿದೆ ಅಂತ ರಾಜ್ಯ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ. ಜೊತೆಗೆ ಗಡಿ ಜಿಲ್ಲೆಗಳಲ್ಲಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳುವಂತೆ ಸೂಚಿಸಲಾಗಿದೆ ಅಂತಾನೂ ಹೇಳಿದ್ರು.
ಇನ್ನು ಕೇರಳದ ಅಲಪ್ಪುಳ ಜಿಲ್ಲೆಯಲ್ಲಿ ಇದುವರೆಗೆ 37,000ಕ್ಕೂ ಹೆಚ್ಚು ಹಕ್ಕಿಗಳನ್ನ ಕೊಲ್ಲಲಾಗಿದೆ. ಹಕ್ಕಿಜ್ವರ ಹರಡಂತೆ ತಡೆಯಲು ಜಿಲ್ಲಾಡಳಿತ ಈ ಕ್ರಮ ಕೈಗೊಂಡಿದೆ. ಇದೆಲ್ಲದರ ನಡುವೆ ಕೇಂದ್ರದ ತಂಡ ಅಲಪ್ಪುಳಕ್ಕೆ ಆಗಮಿಸಿದ್ದು ಜಿಲ್ಲಾಧಿಕಾರಿಯನ್ನ ಭೇಟಿಯಾಗಿದೆ. ಕೇಂದ್ರ ಸರ್ಕಾರದ ಪ್ರಕಾರ ಇದುವರೆಗೆ 5 ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದೆ. ಕೇರಳ, ರಾಜಸ್ಥಾನ, ಹಿಮಾಚಲ ಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ.
-masthmagaa.com
Contact Us for Advertisement