masthmagaa.com:
ಇವತ್ತು ಸುದ್ದಿಗೋಷ್ಠಿಯಲ್ಲಿ ಸಿಎಂ ಯಡಿಯೂರಪ್ಪ ಮಾತನಾಡುತ್ತಿದ್ದ ವೇಳೆ ಜಮೀರ್ ಅಹಮದ್ ಖಾನ್ ಅವರ ಬಗ್ಗೆ ಪ್ರಸ್ತಾಪ ಆಯಿತು. ಪಾದರಾಯನಪುರ ಗಲಾಟೆಗೆ ಸಂಬಂಧಪಟ್ಟ ಹಾಗೆ ಜಮೀರ್ ಅಹ್ಮದ್ ಖಾನ್ ‘ಅವರೆಲ್ಲ ಅವಿದ್ಯಾವಂತ ಜನ. ಅಲ್ಲಿಗೆ ರಾತ್ರಿ ಯಾಕೆ ಹೋಗಬೇಕಿತ್ತು? ಹಗಲು ಹೋಗಬೇಕಿತ್ತು.’ ಎಂದು ಸರ್ಕಾರವನ್ನೇ ತರಾಟೆಗೆ ತೆಗೆದುಕೊಂಡಿದ್ದರು. ಗಲಾಟೆ ಮಾಡಿದವರನ್ನು ವಿರೋಧಿಸುವ ಬದಲು ಸರಕಾರಕ್ಕೆ ಬುದ್ಧಿ ಹೇಳಲು ಮುಂದಾಗಿದ್ದರು. ಇದಕ್ಕೆ ಸಂಬಂಧಪಟ್ಟ ಹಾಗೆ ಯಡಿಯೂರಪ್ಪ ಬಳಿ ಪತ್ರಕರ್ತರು ಕೇಳಿದಾಗ, ಮುಖ್ಯಮಂತ್ರಿಗಳಿಗೆ ಇದ್ದಕ್ಕಿದ್ದಹಾಗೆ ಸಿಟ್ಟು ಬಂತು. ‘ಅವರು ಯಾರ್ರೀ ಸರ್ಕಾರಕ್ಕೆ ಬುದ್ಧಿ ಹೇಳೋಕೆ. ಅವರನ್ನು ಕೇಳಿ ನಾವು ಸರ್ಕಾರ ನಡೆಸಬೇಕಾ? ಅವರೊಬ್ಬ ಜವಾಬ್ದಾರಿಯುತ ವ್ಯಕ್ತಿಯಾಗಿದ್ದರೆ ಗಲಾಟೆ ವಿರೋಧಿಸಬೇಕಿತ್ತು. ಅದು ಬಿಟ್ಟು ಈ ರೀತಿ ಮಾತನಾಡುವುದು ಸರಿಯೇ..? ಸರ್ಕಾರ ನಡೆಸಲು ಅವರ ಅಪ್ಪಣೆ ಬೇಕೆ..? ಇದಕ್ಕೆಲ್ಲಾ ಅವರೇ ಪ್ರಚೋದನೆ ಕೊಡುತ್ತಿದ್ದಾರೆಂದು ಭಾವಿಸಬೇಕಾ..? ಎಂದು ಪ್ರಶ್ನಿಸಿ ಸಿಡಿಮಿಡಿಗೊಂಡು ಯಡಿಯೂರಪ್ಪ ತೆರಳಿದರು.
ಅದಾದ ನಂತರ ಮತ್ತೆ ಮಾಧ್ಯಮಗಳೊಂದಿಗೆ ಮಾತನಾಡಿದ ಜಮೀರ್ ಅಹಮದ್ ಖಾನ್, ಮತ್ತೆ ಪುಂಡರ ಬೆಂಬಲಕ್ಕೆ ನಿಂತರು. ನಾನು ಗಲಾಟೆ ಮಾಡಿದವರಿಗೆ ಬೆಂಬಲ ಕೊಡುವುದಿಲ್ಲ ಎಂದು ಹೇಳುತ್ತಲೇ, ಮತ್ತೆ ಅವರು ಹೋಗಬೇಕಾಗಿತ್ತು ರಾತ್ರಿ ಯಾಕೆ ಹೋಗಿದ್ದು ಎಂದು ಸರ್ಕಾರವನ್ನೇ ಪ್ರಶ್ನಿಸಿದರು. ಈ ಮೂಲಕ ಜಮೀರ್ ಅಹಮದ್ ಖಾನ್ ಮತ್ತೆ ತಮ್ಮ ಮನಸ್ಥಿತಿಯನ್ನು ಪ್ರದರ್ಶಿಸಿದರು.
-masthmagaa.com
Contact Us for Advertisement