masthmagaa.com:
ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಟ್ವಸ್ಟ್ಗಳ ಮೇಲೆ ಟ್ವಿಸ್ಟ್ ಸಿಗ್ತಿದ್ದು ಬಗೆದೆಷ್ಟು ಬ್ರಹ್ಮಾಂಡ ಬಯಲಾಗ್ತಾ ಇದೆ. ಜಾತಿ, ಧರ್ಮ ಅಂತ ಜನ್ರಲ್ಲಿ ಜಗಳ ಹಚ್ಚೋ ರಾಜಕೀಯದ ಮಂದಿ ಭ್ರಷ್ಟಾಚಾರದಲ್ಲಿ ಪಕ್ಷಾತೀತವಾಗಿ ಭಾಗಿಯಾಗಿರೋದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಡಿವೈಎಸ್ಪಿಗೆ ಆವಾಜ್ ಹಾಕಿದ್ದ ಆರೋಪಿ ಅಫಜಲ್ಪುರ ಬ್ಲಾಕ್ ಮಾಜಿ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ್ ಪಾಟೀಲ್ನನ್ನ ಮೊನ್ನೆ ಸಿಐಡಿ ಪೋಲಿಸರು ಬಂಧಿಸಿದ ಬೆನ್ನಲ್ಲೇ ಈಗ ಅವನ ತಮ್ಮ ಆರ್.ಡಿ ಪಾಟೀಲ್ನನ್ನ ಕೂಡ ಪೋಲಿಸ್ರು ವಶಕ್ಕೆ ಪಡೆದಿದ್ದಾರೆ. ಮಹರಾಷ್ಟ್ರದ ಸೊಲಾಪುರದಲ್ಲಿ ತಲೆಮರೆಸಿಕೊಂಡಿದ್ದ ಈತನನ್ನ ಸಿಐಡಿ ಪೋಲಿಸರು ನೆನ್ನೆ ತಡರಾತ್ರಿ ಬಂಧಿಸಿ ಕರೆದುಕೊಂಡು ಬಂದಿದ್ದಾರೆ. ಇನ್ನು ಈ ಸಮಯದಲ್ಲಿ ರುದ್ರಗೌಡ ಪಾಟೀಲ್ ಘನಂದಾರಿ ನಾಯಕನ ತರ ನಗು ಬೀರಿ ಕೈ ಬೀಸಿ ಹೋಗಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ, ಸರ್ಕಾರಿ ಕೆಲ್ಸ ಕೊಡ್ಸ್ತೀವಿ ಅಂತ ಡೀಲ್ ಮಾಡೋದ್ರಲ್ಲಿ ಅಣ್ಣ ತಮ್ಮ ಇಬ್ರು ಎಕ್ಸ್ಪರ್ಟ್ ಆಗಿದ್ರೂ ಅಂತ ಹೇಳಲಾಗ್ತಿದೆ. ಇದ್ರೊಂದಿಗೆ ನೇಮಕಾತಿ ಅಕ್ರಮದಲ್ಲಿ ಬಂಧನವಾದವ್ರ ಸಂಖ್ಯೆ 14ಕ್ಕೆ ಏರಿಕೆ ಆಗಿದೆ. ಇನ್ನು ಪ್ರಕರಣದ ಇನ್ನೊಬ್ಬ ಪ್ರಮುಖ ಆರೋಪಿ ಬಿಜೆಪಿಯ ದಿವ್ಯಾ ಹಾಗರಗಿ ಇನ್ನೂ ಕೂಡ ಅರೆಸ್ಟ್ ಆಗಿಲ್ಲ. ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಯಿ ಅವ್ರಿಗೆ ಕೇಳಿದ್ಕೆ, ನಾನೇನು ತನಿಖಾಧಿಕಾರಿ ಅಲ್ಲ. ಅವ್ರೂ ಕೂಡ ಅರೆಸ್ಟ್ ಆಗ್ತಾರೆ ಅನ್ನೋ ಹಾರಿಕೆ ಉತ್ತರ ಕೊಟ್ಟಿದ್ದಾರೆ.
ಇನ್ನೊಂದ್ ಕಡೆ ಈ ಅಕ್ರಮ ಕೇವಲ ಪಿಎಸ್ಐ ನೇಮಕಾತಿಗೆ ಮಾತ್ರ ಸೀಮಿತ ಆಗಿರದೇ, ರಾಜ್ಯದ ಹಲವು ಸರ್ಕಾರಿ ಉದ್ಯೋಗ ನೇಮಕಾತಿಗೂ ಕೂಡ ವ್ಯಾಪಿಸಿದೆ ಅನ್ನೋ ವಾಸನೆ ಹೊರಗೆ ಬರ್ತಾ ಇದೆ. ಬೆಳಗ್ಗೆ ಪಿಎಸ್ಐ ಪರೀಕ್ಷೆಗೆ ಸಂಬಂಧಪಟ್ಟಿದ್ದು ಅಂತ ಒಂದು ವಿಡೀಯೋ ಸಿಕ್ತು. ಇದ್ರಲ್ಲಿ ವ್ಯಕ್ತಿಯೊಬ್ಬ ಎಲ್ಲೋ ಕೂತ್ಕೊಂಡು, ಪರೀಕ್ಷೆ ಬರೀತಾ ಇರೋ ಅಭ್ಯರ್ಥಿಗಳಿಗೆ ಬ್ಲ್ಯೂಟೂಥ್ ಮೂಲಕ ಉತ್ತರ ಹೇಳಿ ಕೊಡ್ತಾ ಇರೋದು ಕಂಡುಬಂತು. ಆದ್ರೆ ನಂತ್ರ ಇದು ಪಿಎಸ್ಐ ಪರೀಕ್ಷೆಯ ವಿಡೀಯೋ ಅಲ್ಲ ಬದ್ಲಾಗಿ PWD ಇಲಾಖೆಯ ಜೆಇ ಹುದ್ದೆಗೆ ನಡೆದಿರೋ ಪರೀಕ್ಷೆಯ ಅಕ್ರಮ ಅಂತ ಗೊತ್ತಾಗಿದೆ. ಅಷ್ಟೇ ಅಲ್ಲದೇ ಆ ಕಡೆ ಬಮೂಲ್, ಎಫ್ಡಿಎ, ಸಹಾಯಕ ಪ್ರಾಧ್ಯಾಪಕ, ಕೆಎಎಸ್, ಅಬಕಾರಿ ರಕ್ಷಕ, ಎಸ್ಐ ಹುದ್ದೆಯಲ್ಲೂ ಕೂಡ ಅಕ್ರಮಗಳು ನಡೆದಿದ್ದು ಇವುಗಳನ್ನೂ ತನಿಖೆ ಮಾಡ್ಬೇಕು ಅನ್ನೋ ಆಗ್ರಹಗಳು ಕೇಳಿ ಬರ್ತಾ ಇವೆ. ಇನ್ನು 2009 ರಿಂದ ಈಚೆಗೆ ನಡೆದ ಬಹುತೇಕ ಪರೀಕ್ಷೆಗಳಲ್ಲಿ ಅಕ್ರಮ ನಡೆದು ಸುಮಾರು 70% ಅಭ್ಯರ್ಥಿಗಳು ಡೀಲ್ನಿಂದಲೇ ಸರ್ಕಾರಿ ಹುದ್ದೆ ಪಡೆದ ಶಂಕೆ ವ್ಯಕ್ತವಾಗಿದೆ.
-masthmagaa.com
Contact Us for Advertisement