masthmagaa.com:
ರಾಜ್ಯದ ಹಲವೆಡೆ ಇವತ್ತೂ ಕೂಡ ಮಳೆಯ ಆರ್ಭಟ ಮುಂದುವರಿದಿದೆ. ಕೆಲವೊಂದುಕಡೆ ಮಳೆ ಕಮ್ಮಿಯಾದ್ರೂ, ಪ್ರವಾಹದಿಂದ ಸಾಕಷ್ಟು ಅನಾಹುತವಾಗಿದೆ. ಉತ್ತರ ಕನ್ನಡದಲ್ಲಿ ಜಿಲ್ಲಾಧಿಕಾರಿಗಳ ಮನವಿ ಮೇರೆಗೆ ಜನರ ರಕ್ಷಣೆಗೆ ಭಾರತೀಯ ನೌಕಾಪಡೆ ತನ್ನ ಎಮರ್ಜೆನ್ಸಿ ರೆಸ್ಪಾನ್ಸ್ ಟೀಂ-ERT ಅನ್ನ ನಿಯೋಜಿಸಿದೆ. ಈ ಟೀಂ ಸಿಂಗುಡ್ಡ ಮತ್ತು ಭೈರೆ ಗ್ರಾಮದಲ್ಲಿ ಸಿಲುಕಿದ್ದ 100ಕ್ಕೂ ಹೆಚ್ಚು ಜನರನ್ನ ರಕ್ಷಿಸಿದೆ. ನಾಳೆ ಸಿಎಂ ಯಡಿಯೂರಪ್ಪ ಬೆಳಗಾವಿಗೆ ಭೇಟಿ ನೀಡಿ ನೆರೆ ಪರಿಶೀಲನೆ ನಡೆಸಲಿದ್ದಾರೆ ಅಂತ ವರದಿಯಾಗಿದೆ. ಇನ್ನು ಕಳೆದ 24 ಗಂಟೆಯಲ್ಲಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕೂಡುಮಲ್ಲಿಗೆಯಲ್ಲಿ ಅತಿಹೆಚ್ಚು 355 ಮಿಲಿಮೀಟರ್ ಮಳೆಯಾಗಿದೆ ಅಂತ ಕರ್ನಾಟಕ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರ ತಿಳಿಸಿದೆ. ಮುಂದಿನ 24 ಗಂಟೆಗಳಲ್ಲಿ ಪಶ್ಚಿಮ ಕರಾವಳಿಯಲ್ಲಿ ಮಳೆಯ ಆರ್ಭಟ ಮತ್ತಷ್ಟು ಕಮ್ಮಿಯಾಗಲಿದೆ ಅಂತ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ರಾಜ್ಯದ ಉತ್ತರಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳ ಅಲ್ಲಲ್ಲಿ ಮುಂದಿನ 24 ಗಂಟೆಯಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಈ 7 ಜಿಲ್ಲೆಗಳಲ್ಲೂ ಭಾರತೀಯ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
-masthmagaa.com
Contact Us for Advertisement