masthmagaa.com:
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ನೌಕರರು ಇವತ್ತು ನಡೆಸಿದ ಮುಷ್ಕರ ಬಹುತೇಕ ಯಶಸ್ವಿಯಾಗಿದೆ. ಇದರ ಪರಿಣಾಮ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ಗಳಿಲ್ಲದೆ ಪ್ರಯಾಣಿಕರು ಭಾರಿ ಪರದಾಟ ನಡೆಸಿದ್ರು. ಕೆಲವೊಂದು ಕಡೆ ಒಂದೆರಡು ಬಸ್ಗಳನ್ನ ರೋಡಿಗೆ ಬಿಟ್ಟರೂ ಚಾಲಕರು ಹೆದರಿಕೊಂಡೇ ಬಸ್ ಚಲಾಯಿಸಿದ್ರು. ಇನ್ನೂ ಕೆಲವೆಡೆ ಬಸ್ಗಳಿಗೆ ಎಸ್ಕಾರ್ಟ್ ನೀಡಲಾಯ್ತು. ಸಾರಿಗೆ ನೌಕರರ ಮುಷ್ಕರದಿಂದ ಬೆಂಗಳೂರಿನಲ್ಲಿ ಕೆಎಸ್ಆರ್ಟಿಸಿ, ಬಿಎಂಟಿಸಿ ಬಸ್ ನಿಲ್ದಾಣಗಳಿಗೆ ಖಾಸಗಿ ಬಸ್ಗಳು ಎಂಟ್ರಿಕೊಟ್ವು. ಉಳಿದಂತೆ ಪ್ರಯಾಣಿಕರು ಆಟೋ, ಕ್ಯಾಬ್ಗಳ ಮೊರೆ ಹೋದ್ರು. ಇನ್ನು ರಾಜ್ಯ ಸರ್ಕಾರ ತಮ್ಮ ಬೇಡಿಕೆ ಈಡೇರಿಸದೇ ಇರೋದ್ರಿಂದ, ಅಥವಾ ಈ ಬಗ್ಗೆ ಸರಿಯಾದ ಭರವಸೆ ಕೊಡದೇ ಇರೋದ್ರಿಂದ ನಾಳೆಯೂ ಮುಷ್ಕರ ಮುಂದುವರಿಸಲು ಸಾರಿಗೆ ನೌಕರರು ನಿರ್ಧರಿಸಿದ್ದಾರೆ.
ಹೀಗಾಗಿ ಇವತ್ತಿನ ಸಮಸ್ಯೆ ನಾಳೆಯೂ ಕಂಟಿನ್ಯೂ ಆಗೋದ್ರಲ್ಲಿ ಅನುಮಾನವಿಲ್ಲ. ನಾಳೆಯೂ ಸಮಸ್ಯೆ ಬಗೆಹರಿಯದಿದ್ರೆ ಸಾರಿಗೆ ನೌಕರರ ಮುಷ್ಕರ ಅನಿರ್ಧಿಷ್ಟಾವಧಿವರೆಗೆ ಮುಂದುವರಿಯೋ ಸಾಧ್ಯತೆ ದಟ್ಟವಾಗಿದೆ. ಈ ಬಗ್ಗೆ ಮಾತನಾಡಿರೋ ಸಾರಿಗೆ ನೌಕರರ ಒಕ್ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್, 9 ಬೇಡಿಕೆಗಳಲ್ಲಿ 8 ಬೇಡಿಕೆ ಈಡೇರಿಸಿದ್ದೇವೆ ಅಂತ ಸರ್ಕಾರ ಹೇಳ್ತಿದೆ. ಆದ್ರೆ ಲೋಪಗಳಿಂದ ಕೂಡಿರೋ 8 ಬೇಡಿಕೆಗಳಿಗಿಂತ ನಮಗೆ 9ನೇ ಬೇಡಿಕೆಯೇ ತುಂಬಾ ಮುಖ್ಯ. ಆ 9ನೇ ಬೇಡಿಕೆಯೇ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರೋದು ಎಂದಿದ್ದಾರೆ. ಆದ್ರೆ ರಾಜ್ಯ ಸರ್ಕಾರ ಈಗಾಗಲೇ 6ನೇ ವೇತನ ಆಯೋಗದ ಶಿಫಾರಸು ಜಾರಿಗೆ ತರಲು ಸಾಧ್ಯವೇ ಇಲ್ಲ ಅಂತ ಹೇಳಿರೋದ್ರಿಂದ ಈ ಸಮಸ್ಯೆ ಬಗೆಹರಿಯೋದಾದ್ರೂ ಹೇಗೆ ಅನ್ನೋ ಪ್ರಶ್ನೆ ರಾಜ್ಯದ ಜನರನ್ನ ಕಾಡ್ತಿದೆ.
-masthmagaa.com
Contact Us for Advertisement