masthmagaa.com:
200 ಯುನಿಟ್ ಉಚಿತ ವಿದ್ಯುತ್ ಅಂತ ಕೊಡ್ತೀವಿ ಅಂತ ಘೋಷಿಸಿದ ಕೆಲ ದಿನಗಳ ಬಳಿಕ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರ ಕರೆಂಟ್ ಶಾಕ್ ಕೊಟ್ಟಿದೆ. ಪ್ರತಿ ಯುನಿಟ್ ವಿದ್ಯುತ್ ದರದಲ್ಲಿ 70 ಪೈಸೆಯಷ್ಟು ಹೆಚ್ಚಳ ಮಾಡಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ (KERC) ಆದೇಶ ಜಾರಿ ಮಾಡಿದೆ. ಈ ಹೊಸ ದರ ಈ ತಿಂಗಳಿನಿಂದಲೇ ಜಾರಿಯಾಗಿದೆ. ವಿದ್ಯುತ್ ಸರಬರಾಜು ಕಂಪನಿಗಳ (ESCOM) ವರಮಾನದ ಕೊರತೆಯನ್ನ ಸರಿದೂಗಿಸಲು ಪ್ರತಿ ಯುನಿಟ್ ದರವನ್ನ 70 ಪೈಸೆಯಷ್ಟು ಹೆಚ್ಚಳ ಮಾಡಲು ಒಪ್ಪಿಗೆ ನೀಡಿ, KERC ಮೇ 12ರಂದು ಆದೇಶ ಹೊರಡಿಸಿತ್ತು. ಇದೀಗ ಆಯೋಗದ ನಿರ್ದೇಶನದಂತೆ ದರ ಹೆಚ್ಚಳವನ್ನ ಜೂನ್ನಿಂದ ಅನುಷ್ಠಾನಕ್ಕೆ ತರಲಾಗಿದೆ. ಅಲ್ದೇ ವಿದ್ಯುತ್ ದರ ಏಪ್ರಿಲ್ 1ರಿಂದಲೇ ಅನ್ವಯವಾಗಲಿದೆ. ಗ್ರಾಹಕರು ಏಪ್ರಿಲ್ ಹಾಗೂ ಮೇ ನಲ್ಲಿ ಬಳಸಿರುವ ವಿದ್ಯುತ್ನ ಪ್ರತಿ ಯುನಿಟ್ಗೆ 70 ಪೈಸೆಯಂತೆ ಹಿಂಬಾಕಿಯನ್ನ ಈ ತಿಂಗಳ ಬಿಲ್ನಲ್ಲಿ ಪಾವತಿಸಬೇಕು. ಇತ್ತ ವಿದ್ಯುತ್ ದರ ಏರಿಕೆ ಬೆನ್ನಲ್ಲೇ ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿಕಾರಿದೆ. ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ, ಹಿಟ್ಲರ್ ಸರ್ಕಾರಕ್ಕೆ ಧಿಕ್ಕಾರ. 200 ಯುನಿಟ್ ಉಚಿತ ವಿದ್ಯುತ್ ಕೊಡುವುದಾಗಿ ರಾಜ್ಯವನ್ನ ನಂಬಿಸಿ, ರಾಜ್ಯದ ಜನರ ನಂಬಿಕೆದ್ರೋಹ ಮಾಡಿದ್ದಕ್ಕೆ, ಏಕಾಏಕಿ ವಿದ್ಯುತ್ ದರ ಹೆಚ್ಚಿಸಿದ್ದಕ್ಕಾಗಿ ಧಿಕ್ಕಾರ ಅಂತ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಇನ್ನೊಂದ್ ಕಡೆ ವಾರ್ಷಿಕ ಸರಾಸರಿ ವೆಚ್ಚದಲ್ಲಿ ಉಚಿತ ವಿದ್ಯುತ್ ಘೋಷಿಸಿದ್ದಕ್ಕೆ ಬಿಜೆಪಿ ವಿರೋಧಿಸಿದೆ. ಹೇಳಿದ ಹಾಗೇ 200 ಯುನಿಟ್ ಫ್ರೀ ವಿದ್ಯುತ್ ನೀಡಿ ಅಂತ ಆಗ್ರಹಿಸಿದೆ. ಇದಕ್ಕೆ ಪ್ರತಿಕ್ರಿಯಿಸಿರೋ ಸಿದ್ದರಾಮಯ್ಯ, ವಾರ್ಷಿಕ ಸರಾಸರಿ ಲೆಕ್ಕಾಚಾರ ಸರಿಯಾಗಿಯೇ ಇದೆ. ವಿರೋಧ ಪಕ್ಷದವ್ರು ಅಪಪ್ರಚಾರ ಮಾಡ್ತಿದಾರೆ. ವರ್ಷದಲ್ಲಿ ಬಳಸಿದ ವಿದ್ಯುತ್ನ ಸರಾಸರಿ ಮೇಲೆ ಚಾರ್ಜ್ ಹಾಕ್ತೇವೆ, 200 ಯುನಿಟ್ ಹೇಳಿದ್ದೀರಿ ಅಷ್ಟನ್ನು ಕೊಡಿ ಅಂತ ಕೇಳ್ತಿದಾರೆ. ಅವ್ರಿಗೆ ವಿವೇಕ ಇದೆಯಾ? ಈ ಹಿಂದೆ ಎಷ್ಟು ಬಳಸ್ತಿದ್ರೋ ಅಷ್ಟೆ ಬಳಸಬೇಕು. ಹೆಚ್ಚು ಬಳಸಿದ್ರೆ ದುಂದು ವೆಚ್ಚ ಆಗುತ್ತೆ. ಮನುಷ್ಯನಿಗೆ ವಿವೇಕ ಇರಬೇಕು. ನಾವೂ ಬದಕಬೇಕು, ಸಮಾಜದಲ್ಲಿರವವರೂ ಬದುಕಬೇಕು. ಹಾಗಾಗಿ ಕೆಲ ಮಿತಿಗಳನ್ನ ಹಾಕಬೇಕಾಗುತ್ತೆ ಎಂದಿದ್ದಾರೆ.
-masthmagaa.com
Contact Us for Advertisement