masthmagaa.com:
ರಾಜ್ಯದಲ್ಲಿ ತೀವ್ರ ಕೋಲಾಹಲಕ್ಕೆ ಕಾರಣವಾಗಿರೊ ಹುಬ್ಬಳ್ಳಿಯ ನೇಹಾ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವುಗಳು ಆಗ್ತಿವೆ. ಕೇಸನ್ನ ಸಿಐಡಿಗೆ ವಹಿಸಲಾಗುವುದು ಅಂತ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಅಲ್ದೇ ಈ ಕೇಸ್ ಸಂಬಂಧ ವಿಶೇಷ ನ್ಯಾಯಾಲಯ ರಚಿಸಿ, ಪ್ರಕರಣವನ್ನ ಇತ್ಯರ್ಥಗೊಳಿಸ್ತೀವಿ ಅಂತ ಹೇಳಿದ್ದಾರೆ. ಜೊತೆಗೆ ನಮ್ಮ ಸಚಿವರು ನೇಹಾಳ ನಿವಾಸಕ್ಕೆ ಭೇಟಿ ನೀಡಿದ್ದಾರೆ. ನಾನು ಕೂಡ ಧಾರವಾಡಕ್ಕೆ ತೆರಳಿದ ಸಂದರ್ಭದಲ್ಲಿ ಅವ್ರ ಮನೆಗೆ ಭೇಟಿ ನೀಡ್ತೀನಿ ಅಂತ ಸಿಎಂ ತಿಳಿಸಿದ್ದಾರೆ. ಇನ್ನೊಂದು ಕಡೆ ಕೊಲೆಗಾರರ ಬಗ್ಗೆ ಕಾಂಗ್ರೆಸ್ ಸರ್ಕಾರ ಮೃದು ಧೋರಣೆ ಹೊಂದಿದೆ ಅಂತ ನೇಹಾಳ ತಂದೆ, ಕಾಂಗ್ರೆಸ್ ಕಾರ್ಪೊರೇಟರ್ ಕೂಡ ಆಗಿರೋ ನಿರಂಜನ ಹಿರೇಮಠ ಆರೋಪ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಂಟು ಜನ ಭಾಗಿಯಾಗಿದ್ದಾರೆ, ಅವರ ಹೆಸರನ್ನೂ ಹೇಳಿದ್ದೇನೆ. ಆದರೆ ಒಬ್ಬರನ್ನೂ ಬಂಧಿಸಿಲ್ಲ. ಪ್ರಕರಣವನ್ನು ತಿರುಚಲು ಯತ್ನಿಸುತ್ತಿದ್ದಾರೆ. ಹೀಗಾಗಿ ಕೇಸ್ನ್ನ CBIಗೆ ವಹಿಸಬೇಕು ಅಂತ ಮನವಿ ಮಾಡಿದ್ದಾರೆ. ಜೊತೆಗೆ ನನ್ನ ಮಗಳನ್ನ ಚಾಕು ಇರಿದು ಕೊಲೆ ಮಾಡಿರೊ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಅದನ್ನ ಆಧರಿಸಿ ಎನ್ಕೌಂಟರ್ ಮಾಡೊದ್ ಬಿಟ್ಟು. ಇನ್ನುಳಿದ ಆರೋಪಿಗಳನ್ನ ಪೋಲಿಸ್ ಕಮೀಷನರ್ ಅವ್ರು ರಾಜಾರೋಷವಾಗಿ ಅಡ್ಡಾಡಲು ಬಿಟ್ಟಿದ್ದಾರೆ. ಇಂಥ ಪೋಲಿಸ್ ಕಮೀಷ್ನರ್ರನ್ನ ಅಮಾನತು ಮಾಡ್ಬೇಕು. ಇಲ್ವೇ ವರ್ಗಾವಣೆ ಮಾಡ್ಬೇಕು ಅಂತ ನಿರಂಜನ್ ಒತ್ತಾಯಿಸಿದ್ದಾರೆ. ಇನ್ನು ನೇಹಾ ಹತ್ಯೆ ಖಂಡಿಸಿ ಹುಬ್ಬಳ್ಳಿ-ಧಾರವಾಡದಲ್ಲಿ ಮುಸ್ಲಿಂ ಸಂಘಟನೆಗಳು ನೀಡಿದ್ದ ಬಂದ್ ಯಶಸ್ವಿಯಾಗಿದೆ. ಮಧ್ಯಾಹ್ನ 3ಗಂಟೆವರೆಗೆ ಅಂಗಡಿ ಮುಂಗಟ್ಟುಗಳನ್ನ ಮುಚ್ಚಿ ಮುಸ್ಲಿಂ ವ್ಯಾಪಾರಿಗಳು ಬಂದ್ಗೆ ಬೆಂಬಲ ಸೂಚಿಸಿದ್ದಾರೆ. ಇತ್ತ ನೇಹ ಹತ್ಯೆಯನ್ನ ಖಂಡಿಸಿ ರಾಜ್ಯದ ಹಲವು ಕಡೆಗಳಲ್ಲಿ ಭಾರೀ ಪ್ರತಿಭಟನೆ ನಡೆಸಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ, ರಾಯಚೂರು, ಕೊಪ್ಪಳ, ಯಾದಗಿರಿ, ಚಾಮರಾಜನಗರದಲ್ಲಿ ಬಿಜೆಪಿ ಮತ್ತಿತರ ಹಿಂದೂಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ವಿರುದ್ದ ಘೋಷಣೆಗಳನ್ನ ಕೂಗಿ, ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತ ಆಗ್ರಹಿಸಲಾಗಿದೆ.
ಇನ್ನೊಂದು ಕಡೆ ಘಟನೆ ಖಂಡಿಸಿ ಜಾಗೃತ ಮಹಿಳಾ ವೇದಿಕೆ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸಿದೆ. ಈ ವೇಳೆ ರಾಜ್ಯದಲ್ಲಿ ಲವ್ ಜಿಹಾದ್ ಪ್ರತಿಬಂಧಕ ಕಾನೂನನ್ನ ರೂಪಿಸಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಇನ್ನು ಹಿಂದೂಗಳ ಕೊಲೆಯಾದ್ರೆ ಬಿಜೆಪಿಯವ್ರು ಹೋಗಲ್ಲ. ಆದ್ರೆ ಮುಸ್ಲಿಂ ವ್ಯಕ್ತಿಯಿಂದ ಹಿಂದೂಗಳ ಕೊಲೆಯಾದ್ರೆ ಬಿಜೆಪಿಯವ್ರಿಗೆ ಹಬ್ಬ ಅಂತ ಸಚಿವ ಸಂತೋಷ್ ಲಾಡ್ ಬಿಜೆಪಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಮಾತನಾಡಿದ್ದಾರೆ. ಹತ್ಯೆ ನಡೆದಿದ್ರೂ ಮೃತ ನೇಹಾಳ ನಿವಾಸಕ್ಕೆ ಯಾವ ಕಾಂಗ್ರೆಸ್ ನಾಯಕರು ಭೇಟಿ ಕೊಟ್ಟಿಲ್ಲ. ಪಾಪ ನೇಹಾ ತಂದೆ ನಿಸ್ಸಹಾಯಕರಾಗಿ ಕಾಂಗ್ರೆಸ್ ಸರ್ಕಾರದ ವಿರುದ್ದವೇ ಸಾಫ್ಟ್ ಕಾರ್ನರ್ ತೋರಿಸ್ತಿದ್ದಾರೆ ಅಂತ ಆರೋಪ ಮಾಡ್ತಿದ್ದಾರೆ. ಅಲ್ದೇ ಈ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರ ತುಷ್ಠೀಕರಣ ನೀತಿ ಅನುಸರಿಸ್ತಿದೆ. ಹೀಗಾದ್ರೆ ಈ ಕೇಸ್ನಲ್ಲಿ ನ್ಯಾಯ ಕೊಡಿಸಲು ಸಾಧ್ಯವೇ? ಅಂತ ಮಾಳವೀಯ ಪ್ರಶ್ನಿಸಿದ್ದಾರೆ.
-masthmagaa.com
Contact Us for Advertisement