masthmagaa.com:
ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ ಮತ್ತು ಬ್ಯಾನ್ ಆಗಿರೋ ಮೂಲಭೂತವಾದಿ ಸಂಘಟನೆಯಾದ ಟಿಎಲ್ಪಿ ನಡುವಿನ ಸಂಘರ್ಷ ಜೋರಾಗಿದೆ. ವಿವಿಧ ಬೇಡಿಕೆಗಳನ್ನ ಇಟ್ಟುಕೊಂಡು ತೆಹ್ರೀಕ್ ಎ ಲಬ್ಬೈಕ್ ಪಾಕಿಸ್ತಾನ್ ಸಂಘಟನೆಯ ಕಾರ್ಯಕರ್ತರು ದೇಶದ ವಿವಿಧ ಭಾಗಗಳಲ್ಲಿ ರಸ್ತೆಗಳನ್ನ ತಡೆದು ಪ್ರತಿಭಟನೆ ಮಾಡ್ತಿದ್ದಾರೆ. ಈ ಪ್ರತಿಭಟನೆ ಈಗ ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್ ಕಡೆಗೆ ಬರ್ತಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಪಾಕಿಸ್ತಾನದ ಇಂಟೀರಿಯರ್ ಮಿನಿಸ್ಟರ್ ಶೇಖ್ ರಶೀದ್ ಅಹ್ಮದ್, ಟಿಎಲ್ಪಿ ಸಂಘಟನೆ ಸರ್ಕಾರಕ್ಕೆ ನೀಡಿರುವ ಭರವಸೆಗಳಿಗೆ ಬದ್ಧವಾಗಿರಬೇಕು. ಪ್ರತಿಭಟನೆ ವಾಪಸ್ ಪಡೀಬೇಕು. ಇಲ್ಲದಿದ್ದರೆ ನಾನೇನು ಮಾಡೋಕೂ ಆಗಲ್ಲ, ನನ್ನ ಕಂಟ್ರೋಲ್ನಲ್ಲಿ ಆಗ ಏನೂ ಇರಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದಾರೆ. ಅಲ್ಲದೆ ನಿಮ್ಮ ನಾಯಕ ಸಾದ್ ಹುಸೇನ್ ರಿಝ್ವಿ ಜೊತೆ ಹಲವು ಸಲ ಮಾತನಾಡಿದ್ದೀವಿ, ಇವತ್ತು ಅಥವಾ ನಾಳೆಯೂ ಮಾತಾಡ್ತೀವಿ. ಮಾತುಕತೆ ನಡೀಬೇಕು ಅಂದ್ರೆ ನೀವು ಹಿಂದೆ ಸರೀಬೇಕು ಅಂತ ಆಗ್ರಹಿಸಿದ್ದಾರೆ. ಈ ಮೂಲಕ ಪ್ರತಿಭಟನಾಕಾರರು ಇಸ್ಲಾಮಾಬಾದ್ಗೆ ಬಂದ್ರೆ ಸುಮ್ನೆ ಬಿಡಲ್ಲ, ಅವರನ್ನ ಏನಾದ್ರೂ ಮಾಡಿ ತಡ್ದೇ ತಡೀತೀವಿ ಅನ್ನೋ ಸಂದೇಶ ರವಾನಿಸಿದೆ ಇಮ್ರಾನ್ ಖಾನ್ ಸರ್ಕಾರ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕೂಡ ಇವತ್ತು ನ್ಯಾಷನಲ್ ಸೆಕ್ಯೂರಿಟಿ ಕಮಿಟಿಯ ಸಭೆಯನ್ನ ಕರೆದಿದ್ದಾರೆ. ಅಂದ್ಹಾಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಟಿಎಲ್ಪಿ ಸಂಘಟನೆ ಪ್ರತಿಭಟನೆ ನಡೆಸ್ತಿದೆ. ಜೈಲಿನಲ್ಲಿರೋ ತಮ್ಮ ನಾಯಕ ಸಾದ್ ಹುಸೇನ್ ರಿಝ್ವಿಯನ್ನ ಬಿಡುಗಡೆ ಮಾಡ್ಬೇಕು, ಪಾಕಿಸ್ತಾನದಲ್ಲಿರೋ ಫ್ರಾನ್ಸ್ ರಾಯಭಾರಿಯನ್ನ ವಾಪಸ್ ಕಳಿಸಬೇಕು, ಫ್ರಾನ್ಸ್ನ ಸರಕುಗಳನ್ನ ಬ್ಯಾನ್ ಮಾಡ್ಬೇಕು ಅನ್ನೋದು ಟಿಎಲ್ಪಿ ಬೇಡಿಕೆ. ಈ ಹಿಂದೆ ಫ್ರಾನ್ಸ್ನಲ್ಲಿ ಇಸ್ಲಾಂ ಧರ್ಮಕ್ಕೆ ಸಂಬಂಧಿಸಿದಂತೆ ವ್ಯಂಗ್ಯಚಿತ್ರದ ವಿವಾದವಾದಾಗ ಫ್ರಾನ್ಸ್ ರಾಯಭಾರಿಯನ್ನ ವಾಪಸ್ ಕಳುಹಿಸಬೇಕು ಅಂತ ಪಾಕ್ನಲ್ಲಿ ಭಾರಿ ಪ್ರತಿಭಟನೆ ನಡೆದಿತ್ತು. ಆಗ ಸಾದ್ ರಿಜ್ವಿಯನ್ನ ಅರೆಸ್ಟ್ ಮಾಡಲಾಗಿತ್ತು.
-masthmagaa.com
Contact Us for Advertisement