masthmagaa.com:
ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ತಮಿಳುನಾಡಿನಲ್ಲಿ ರಾಜಕೀಯ ಜೋರಾಗಿದೆ. ಇವತ್ತು ತಮ್ಮ ‘ರಜಿನಿ ಮಕ್ಕಳ್ ಮಂಡ್ರಮ್’ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳ ಜೊತೆ ನಟ ರಜಿನಿಕಾಂತ್ ಚೆನ್ನೈನಲ್ಲಿ ಸಭೆ ನಡೆಸಿದ್ರು. ಸಭೆ ಬಳಿಕ ಮಾತನಾಡಿದ ಅವರು, ‘ನಾನು ಯಾವ ನಿರ್ಧಾರ ತೆಗೆದುಕೊಳ್ಳುತ್ತೇನೋ ಅದನ್ನ ಬೆಂಬಲಿಸ್ತೀವಿ ಅಂತ ಜಿಲ್ಲಾ ಕಾರ್ಯದರ್ಶಿಗಳು ಹೇಳಿದ್ದಾರೆ. ಶೀಘ್ರದಲ್ಲೇ ನನ್ನ ನಿರ್ಧಾರವನ್ನ ತಿಳಿಸುತ್ತೇನೆ’ ಅಂತ ಹೇಳಿದ್ದಾರೆ.
ಸಭೆಯಲ್ಲಿ ಭಾಗವಹಿಸಿದ ಎಲ್ಲರೂ ಶೀಘ್ರದಲ್ಲೇ ರಾಜಕೀಯ ಪಕ್ಷವನ್ನ ಘೋಷಣೆ ಮಾಡಿ, ಮುಂಬರುವ ಚುನಾವಣೆಗೆ ನೀವೇ ಆ ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿಯಾಗುವಂತೆ ರಜಿನಿಕಾಂತ್ಗೆ ಒತ್ತಾಯಿಸಿದ್ದಾರೆ ಅನ್ನೋದು ಗೊತ್ತಾಗಿದೆ. ಒಂದ್ವೇಳೆ ರಜಿನಿಕಾಂತ್ ತಮ್ಮದೇ ಪಕ್ಷವನ್ನ ಘೋಷಿಸಿ, ತಾವೇ ಸಿಎಂ ಅಭ್ಯರ್ಥಿ ಅಂತ ಘೋಷಿಸಿದ್ರೆ ತಮಿಳುನಾಡು ರಾಜಕೀಯದಲ್ಲಿ ಹೊಸ ಅಲೆಯೇ ಏಳಲಿದೆ. ಕಳೆದ 30 ವರ್ಷಗಳಲ್ಲಿ ಕರುಣಾನಿಧಿ ಹಾಗೂ ಜಯಲಲಿತಾ ಸುತ್ತಲೇ ತಮಿಳುನಾಡು ರಾಜಕಾರಣ ಸುತ್ತುತ್ತಿತ್ತು. ಕಳೆದ ಎಲಕ್ಷನ್ನಲ್ಲಿ ಇಬ್ಬರೂ ಇದ್ರು. ಆದ್ರೆ ಈಗ ಇಬ್ಬರೂ ಇಲ್ಲ. ರಾಜಕಾರಣದಲ್ಲೂ ಹೀರೋಯಿಸಂ ಇಷ್ಟ ಪಡೋ ತಮಿಳುನಾಡಿಗೆ ಈಸಲ ಚುನಾವಣೆಯಲ್ಲಿ ದೊಡ್ಡ ನಾಯಕತ್ವವೇ ಇಲ್ಲ. ಹೀಗಾಗಿ ಎಲ್ಲರ ದೃಷ್ಟಿ ಈಗ 69 ವರ್ಷ ವಯಸ್ಸಿನ ರಜಿನಿಕಾಂತ್ ಫೈನಲ್ ಡಿಸಿಷನ್ ಮೇಲೆ ನೆಟ್ಟಿದೆ. ರಜಿನಿಕಾಂತ್ ಸ್ವಂತಪಕ್ಷದ ಮೂಲಕ ಸ್ಪರ್ಧೆ ಮಾಡ್ತಾರಾ? ಬಿಜೆಪಿ ಸೇರ್ತಾರಾ? ಅಂತೆಲ್ಲಾ ಚರ್ಚೆ ಇದೆ. ರಜಿನಿ ಏನೇ ಹೆಜ್ಜೆ ಇಟ್ರೂ ತಮಿಳುನಾಡಲ್ಲಿ ಭಾರಿ ಸಂಚಲನ ಗ್ಯಾರಂಟಿ.
-masthmagaa.com
Contact Us for Advertisement