masthmagaa.com:
ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳು ಕಳೆದಿಲ್ಲ. ಅಷ್ಟರಲ್ಲಾಗಲೇ ಸರ್ಕಾರವನ್ನ ಬೀಳಿಸುವ ಪ್ರಯತ್ನ ಶುರುವಾಗಿದೆ. ಇಂತಹ ಪ್ರಯತ್ನ ಮಾಡ್ತಿರೋದು ಜೈಲಿನಲ್ಲಿರುವ ಆರ್ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅಂತೆ. ಹೌದು ಇಂಥಾದೊಂದು ಗಂಭೀರ ಆರೋಪವನ್ನ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಮಾಡಿದ್ದಾರೆ. ತಮ್ಮ ಆರೋಪಕ್ಕೆ ಪುಷ್ಟಿ ನೀಡುವಂತೆ ಇದೇ ನಂಬರ್ನಿಂದ (8051216302) ಲಾಲು ಪ್ರಸಾದ್ ಯಾದವ್ ನಮ್ಮ ಎಂಎಲ್ಎಗಳಿಗೆ ಕಾಲ್ ಮಾಡಿ ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ ಅಂತ ಸುಶೀಲ್ ಮೋದಿ ಹೇಳಿದ್ದಾರೆ. ಇಷ್ಟೇ ಅಲ್ಲ ಈ ನಂಬರ್ಗೆ ನಾನು ಕಾಲ್ ಮಾಡ್ದಾಗ ಸ್ವತಃ ಲಾಲು ಅವರೇ ರಿಸೀವ್ ಮಾಡಿದ್ರು. ಜೈಲಿನಲ್ಲಿ ಕೂತ್ಕೊಂಡು ಇಂತಹ ಗಲೀಜು ಕೆಲಸವನ್ನ ಮಾಡಬೇಡಿ. ಇದರಲ್ಲಿ ನೀವು ಸಕ್ಸಸ್ ಆಗಲ್ಲ ಅಂತ ಅವರಿಗೆ ಹೇಳಿದ್ದೀನಿ ಅಂತಾನೂ ಸುಶೀಲ್ ಮೋದಿ ಹೇಳಿದ್ದಾರೆ.
ಮತ್ತೊಂದುಕಡೆ ಲಾಲು ಪ್ರಸಾದ್ ಯಾದವ್ ಬಿಜೆಪಿ ಶಾಸಕರೊಬ್ಬರಿಗೆ ಮಂತ್ರಿಗಿರಿಯ ಆಮಿಷವೊಡ್ಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದೆ. ಇದರಲ್ಲಿ ‘ನಾವು ನಿನ್ನನ್ನ ಮಂತ್ರಿ ಮಾಡ್ತೀವಿ. ಸ್ಪೀಕರ್ ಚುನಾವಣೆಯಲ್ಲಿ ನಮಗೆ ಸಪೋರ್ಟ್ ಮಾಡು’ ಅಂತ ಲಾಲು ಹೇಳಿದ್ದಾರೆ. ಇದಕ್ಕೆ ‘ನಾನು ಪಕ್ಷದಲ್ಲಿದ್ದೇನಲ್ಲ’ ಅಂತ ಬಿಜೆಪಿ ಶಾಸಕ ಹೇಳಿದ್ದಾನೆ. ಹಾಗಿದ್ರೆ ‘ವಿಧಾನಸಭೆ ಕಲಾಪಕ್ಕೆ ಹೋಗ್ಬೇಡ. ಕೊರೋನಾ ಬಂದಿದೆ ಅಂತ ಹೇಳು. ನೀನು ನಮಗೆ ಸಪೋರ್ಟ್ ಮಾಡಿದ್ರೆ ನಮ್ಮವರು ಸ್ಪೀಕರ್ ಆಗ್ತಾರೆ. ಆಮೇಲೆ ನಾವು ಬೇಕಾಗಿದ್ದನ್ನ ಮಾಡಬಹುದು’ ಅಂತ ಲಾಲು ಪ್ರಸಾದ್ ಹೇಳಿದ್ದಾರೆ ಎನ್ನಲಾಗಿದೆ.
ಅಂದ್ಹಾಗೆ ಭ್ರಷ್ಟಾಚಾರ ಪ್ರಕರಣದಲ್ಲಿ ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಜಾರ್ಖಂಡ್ನಲ್ಲಿ 4 ವರ್ಷದ ಜೈಲು ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದ್ರೆ ಪದೇಪದೆ ಆರೋಗ್ಯ ಕೈ ಕೊಡುತ್ತಿರೋದ್ರಿಂದ ಹೆಚ್ಚಿನ ಸಮಯವನ್ನ ಆಸ್ಪತ್ರೆಯಲ್ಲಿ ಕಳೆದಿರೋದು ಗಮನಾರ್ಹ.
-masthmagaa.com
Contact Us for Advertisement