masthmagaa.com:
ಉತ್ತರಪ್ರದೇಶ: ಭಾರತದ ಪಾಸ್ಪೋರ್ಟ್ ಹಾಗೂ ವೀಸಾ ನಿಯಮಗಳನ್ನು ಉಲ್ಲಂಘಿಸಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ ಇಂಡೋನೇಷ್ಯಾ ಹಾಗೂ ಥಾಯ್ಲೆಂಡ್ನ 17 ಪ್ರಜೆಗಳನ್ನು ಜೈಲಿಗೆ ಕಳಿಸಲಾಗಿದೆ.
ಇವರೆಲ್ಲಾ ದೆಹಲಿಯ ನಿಜಾಮುದ್ದೀನ್ನಲ್ಲಿ ನಡೆದಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಉತ್ತರ ಪ್ರದೇಶದ ಬಹ್ರೇಚ್ಗೆ ಬಂದಿದ್ದರು. ಇವರಿಗೆ ಬಹ್ರೇಚ್ನ ಸ್ಥಳೀಯರು ಎರಡು ಮಸೀದಿಗಳಲ್ಲಿ ಆಶ್ರಯ ನೀಡಿದ್ದರು. ಬಳಿಕ 17 ಮಂದಿ ವಿದೇಶಿಗರು ಸೇರಿದಂತೆ ಆಶ್ರಯ ನೀಡಿದ್ದ ನಾಲ್ವರು ಭಾರತೀಯರನ್ನ ಮಾರ್ಚ್ 31ರಂದು ವಶಕ್ಕೆ ಪಡೆದು ಕ್ವಾರಂಟೈನ್ನಲ್ಲಿ ಇಡಲಾಗಿತ್ತು.
ಪಾಸ್ಪೋರ್ಟ್ ಹಾಗೂ ವೀಸಾ ನಿಯಮ ಉಲ್ಲಂಘಿಸಿದ್ದ ವಿದೇಶಿಗರ ವಿರುದ್ಧ ಎಫ್ಐಆರ್ ದಾಖಲಾಗಿದ್ದ ಹಿನ್ನೆಲೆ ಕ್ವಾರಂಟೈನ್ ಅವಧಿ ಮುಗಿದ ನಂತರ ಅವರನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್ ಎದುರು ಹಾಜರುಪಡಿಸಲಾಯ್ತು. ಈ ವೇಳೆ ನಾಲ್ವರು ಭಾರತೀಯರು ಬಾಂಡ್ ನೀಡಿದ್ದಕ್ಕೆ ಅವರನ್ನು ಬಿಡುಗಡೆ ಮಾಡಿ, 17 ಮಂದಿ ವಿದೇಶಿಗರನ್ನು ಜೈಲಿಗೆ ಕಳಿಸಲಾಗಿದೆ. 14 ದಿನಗಳ ಬಳಿಕ ಅವರನ್ನು ಮತ್ತೆ ಕೋರ್ಟ್ ಮುಂದೆ ಹಾಜರುಪಡಿಸೋದಾಗಿ ಬಹ್ರೇಚ್ ಎಸ್ಪಿ ಬಿಪಿನ್ ಮಿಶ್ರಾ ಹೇಳಿದ್ದಾರೆ.
ಬಂಧಿತರ ವಿರುದ್ಧ ಸಾಂಕ್ರಾಮಿಕ ರೋಗ ನಿಯಂತ್ರಣ ಕಾಯ್ದೆ-1897 ಹಾಗೂ ಪಾಸ್ಪೋರ್ಟ್ ಕಾಯ್ದೆ-1967ರ ಅನ್ವಯ ಆರೋಪಗಳನ್ನು ಹೊರಿಸಲಾಗಿದೆ. ಜೊತೆಗೆ ಸೋಂಕಿನ ಪರೀಕ್ಷೆಯ ವರದಿ ನೆಗೆಟಿವ್ ಬಂದಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
-masthmagaa.com
Contact Us for Advertisement