masthmagaa.com:
ನಿನ್ನೆ 69 ಕೊರೋನಾ ಪ್ರಕರಣಗಳು ದೃಢಪಟ್ಟಿದ್ದ ರಾಜ್ಯದಲ್ಲಿ ನಿನ್ನೆ ಸಂಜೆಯಿಂದ ಇವತ್ತು ಮಧ್ಯಾಹ್ನದವರೆಗೆ 23 ಹೊಸ ಪ್ರಕರಣಗಳು ಪತ್ತೆಯಾಗಿವೆ ಅಂತ ರಾಜ್ಯ ಆರೋಗ್ಯ ಇಲಾಖೆ ತಿಳಿಸಿದೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1,079ಕ್ಕೆ ಏರಿಕೆಯಾಗಿದೆ. ಇದುವರೆಗೆ 36 ಮಂದಿ ಪ್ರಾಣ ಕಳೆದುಕೊಂಡಿದ್ದು, 494 ಮಂದಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ 548 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಸದಾಗಿ ಪತ್ತೆಯಾದ 23 ಪ್ರಕರಣಗಳಲ್ಲಿ ಬೆಂಗಳೂರು ನಗರ ಒಂದರಲ್ಲೇ 14 ಜನರಿಗೆ ಸೋಂಕು ತಗುಲಿದೆ. ಇವರೆಲ್ಲರೂ ರೋಗಿ ನಂಬರ್ 653ರ (34 ವರ್ಷದ ಪುರುಷ) ದ್ವಿತೀಯ ಸಂಪರ್ಕಕ್ಕೆ ಬಂದವರಾಗಿದ್ದಾರೆ.
ಹಾಸನದಲ್ಲಿ 3 ಜನರಿಗೆ ಹೊಸದಾಗಿ ಕಾಯಿಲೆ ಹರಡಿದೆ. ಇವರೆಲ್ಲರೂ ಇತ್ತೀಚೆಗಷ್ಟೇ ಮುಂಬೈನಿಂದ ಬಂದವರಾಗಿದ್ದಾರೆ.
ಉಳಿದಂತೆ ಮಂಡ್ಯ, ದಾವಣಗೆರೆ, ಬಾಗಲಕೋಟೆ, ಧಾರವಾಡ, ಉಡುಪಿ, ಬಳ್ಳಾರಿಯಲ್ಲಿ ತಲಾ ಒಂದೊಂದು ಪ್ರಕರಣಗಳು ದೃಢಪಟ್ಟಿವೆ.
ಆತಂಕದ ವಿಚಾರ ಅಂದ್ರೆ ಇವತ್ತು ಪತ್ತೆಯಾದ ಮಂಡ್ಯದ ಪ್ರಕರಣ ಅಂತರ್ ಜಿಲ್ಲಾ ಓಡಾಟಕ್ಕೆ ಸಂಬಂಧಪಟ್ಟಿದೆ. ಮಂಡ್ಯದ 40 ವರ್ಷದ ಪುರುಷ ಇತ್ತೀಚೆಗಷ್ಟೇ ಕೋಲಾರ ಮತ್ತು ಬೆಂಗಳೂರಿಗೆ ಹೋಗಿ ಬಂದವರಾಗಿದ್ದಾರೆ. ರಾಜ್ಯದಲ್ಲಿ ಅಂತರ್ ಜಿಲ್ಲಾ ಓಡಾಟ ಸಡಿಲಗೊಳಿಸಲಾಗಿದ್ದು, ಪಾಸ್ ಪಡೆದು ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಚರಿಸಬಹುದಾಗಿದೆ. ಹೀಗೆ ಹೋದವರಲ್ಲೂ ಕಾಯಿಲೆ ಪತ್ತೆಯಾಗಿರೋದು ಆತಂಕ ಹೆಚ್ಚಿಸಿದೆ.
-masthmagaa.com
Contact Us for Advertisement