masthmagaa.com:
ಸಚಿವ ಈಶ್ವರಪ್ಪ ಕೇಸರಿ ಧ್ವಜ ವಿವಾದವನ್ನು ಕಾಂಗ್ರೆಸ್ಸಿಗರು ಬಿಡೋ ಲಕ್ಷಣ ಕಾಣಿಸ್ತಿಲ್ಲ. ಅಹೋರಾತ್ರಿ ಧರಣಿ ಈಗ 4ನೇ ದಿನಕ್ಕೆ ಕಾಲಿಟ್ಟಿದ್ದು, ಇದಕ್ಕೆ ಸರ್ಕಾರ ಜಗ್ಗುತ್ತಿಲ್ಲ. ಇದೇ ಕಾರಣಕ್ಕೆ ನಾಳೆ ಇಡೀ ರಾಜ್ಯದ್ಯಂತ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧರಿಸಿದೆ. ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಈಶ್ವರಪ್ಪರನ್ನು ವಜಾಮಾಡುವಂತೆ ಮನವಿ ನೀಡಲು ನಿರ್ಧರಿಸಿದೆ. ಜೊತೆಗೆ ಈ ಬಗ್ಗೆ ಪ್ರತಿಕ್ರಿಯಿಸಿರೋ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಎಲ್ಲಿಯವರೆಗೆ ಈಶ್ವರಪ್ಪರನ್ನು ಸಂಪುಟದಿಂದ ತೆಗೆದು ಹಾಕೋದಿಲ್ವೋ ಅಲ್ಲಿಯವರೆಗೆ ಪ್ರತಿಭಟನೆ ಮಾಡ್ತೀವಿ. ಸಿಎಂ ಬಸವರಾಜ್ ಬೊಮ್ಮಾಯಿಯವರಿಗೆ ಸ್ವಾಭಿಮಾನ ಇದ್ದಿದ್ರೆ ಈಗಾಗಲೇ ಈಶ್ವರಪ್ಪರನ್ನು ವಜಾ ಮಾಡ್ಬೇಕಿತ್ತು ಅಂತ ಹೇಳಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರೋ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿಯವರು ತಮ್ಮನ್ನು ತಾವು ದೇಶಭಕ್ತರು ಅಂತ ಹೇಳ್ಕೋತಾರೆ.. ರಾಷ್ಟ್ರಧ್ವಜಕ್ಕೆ ಅಪಮಾನ ಮಾಡೋದು ದೇಶಭಕ್ತಿನಾ.. ಅಂಥವರು ಸಂಪುಟದಲ್ಲಿ ಇರಬೇಕಾ ಅಂತ ಪ್ರಶ್ನಿಸಿದ್ದಾರೆ.
ಆದ್ರೆ ಈ ಬಗ್ಗೆ ಪ್ರತಿಕ್ರಿಯಿಸಿರೊ ಕೆಎಸ್ ಈಶ್ವರಪ್ಪ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡ್ಬೇಕು ಅನ್ನೋ ಒತ್ತಡಕ್ಕೆಲ್ಲಾ ನಾನ್ ಕೇರ್ ಮಾಡೋದಿಲ್ಲ.. ಇಲ್ಲಿಗೇ ಬಿಟ್ ಬಿಡಿ.. ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಕೂಡ ನನ್ನ ಸ್ನೇಹಿತರೇ ಅಂತ ಹೇಳಿದ್ದಾರೆ..
ಈ ನಡುವೆ ಕಾಂಗ್ರೆಸ್ ನಾಯಕರಿಗೆ ಪಕ್ಷದಹೈಕಮಾಂಡ್ನಿಂದ ಬುಲಾವ್ ಬಂದಿದೆ. ಇದ್ರಲ್ಲಿ ಕಾಂಗ್ರೆಸ್ ಗುಂಪುಗಾರಿಕೆ ಜೊತೆಗೆ ರಾಜ್ಯದ ಹಿಜಬ್ ಮತ್ತು ರಾಷ್ಟ್ರಧ್ವಜ ವಿವಾದವನ್ನು ಕೂಡ ಚರ್ಚಿಸೋ ಸಾಧ್ಯತೆ ಇದೆ. ಫೆಬ್ರುವರಿ 25ರಂದು ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಸೇರಿ ಹಲವರು ದೆಹಲಿ ಪ್ರವಾಸ ಕೈಗೊಳ್ಳಲಿದ್ದಾರೆ.
-masthmagaa.com
Contact Us for Advertisement