masthmagaa.com:
ಆರೋಗ್ಯ ತುರ್ತುಪರಿಸ್ಥಿತಿಯ ಈ ಸಂದರ್ಭದಲ್ಲಿ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಕೆಲಸಕ್ಕೆ ನಿಜಕ್ಕೂ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಹೀಗಾಗಿಯೇ ಅವರನ್ನು ಕೊರೋನಾ ವಾರಿಯರ್ಸ್, ಹಿರೋಸ್ ಅಂತೆಲ್ಲಾ ಕರೆಯಲಾಗ್ತಿದೆ. ಆದ್ರೆ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ದೇಶದ ಕೊರೋನಾ ಸ್ಥಿತಿ ಬಗ್ಗೆ ಸಂಸತ್ನಲ್ಲಿ ಹೇಳಿಕೆ ನೀಡುವಾಗ ವೈದ್ಯರ ಸಾವಿನ ಬಗ್ಗೆ ಒಂದೇ ಒಂದು ಮಾತನ್ನು ಆಡದಿರೋದು ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ (IMA) ಕೆಂಗಣ್ಣಿಗೆ ಗುರಿಯಾಗಿದೆ. ಅಷ್ಟೇ ಅಲ್ಲ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ನೀಡಿದ ಹೇಳಿಕೆಯೂ ವೈದ್ಯರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಐಎಂಎ, ದೇಶದಲ್ಲಿ ಇದುವರೆಗೆ 382 ವೈದ್ಯರು ಕೊರೋನಾದಿಂದ ಮೃತಪಟ್ಟಿದ್ದಾರೆ ಅಂತ ಲಿಸ್ಟ್ ಬಿಡುಗಡೆ ಮಾಡಿದೆ. ಜೊತೆಗೆ ಇಂತಹ ಕಠಿಣ ಸಂದರ್ಭದಲ್ಲಿ ವೈದ್ಯರ ಸೇವೆಯನ್ನ ನಿರ್ಲಕ್ಷಿಸಲಾಗುತ್ತಿದೆ. ನಮ್ಮ ಸೇವೆಯನ್ನು ಪ್ರಸ್ತಾಪಿಸುವಾಗ ಸೋಂಕಿನಿಂದ ಪ್ರಾಣ ಕಳೆದುಕೊಂಡ ವೈದ್ಯಕೀಯ ಸಿಬ್ಬಂದಿ ಬಗ್ಗೆ ಕೇಂದ್ರ ಆರೋಗ್ಯ ಸಚಿವರು ಮಾತನಾಡಿಲ್ಲ. ಈ ವಿಚಾರವನ್ನು ದೇಶದ ಜನರ ಗಮನಕ್ಕೆ ತರುವುದು ಅರ್ಹವಲ್ಲ ಅಂತ ಭಾವಿಸಿರೋದು ನಿಜಕ್ಕೂ ಅಸಹ್ಯಕರ. ಭಾರತದಲ್ಲಿ ಮೃತಪಟ್ಟ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯಷ್ಟು ಬೇರೆ ಯಾವ ದೇಶದಲ್ಲೂ ಮೃತಪಟ್ಟಿಲ್ಲ ಅನಿಸುತ್ತದೆ ಅಂತ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಇನ್ನು ಸಾರ್ವಜನಿಕ ಆರೋಗ್ಯ ಮತ್ತು ಆಸ್ಪತ್ರೆಗಳ ವಿಚಾರ ಆಯಾ ರಾಜ್ಯಗಳ ವ್ಯಾಪ್ತಿಗೆ ಬರುತ್ತದೆ. ಅದರ ಬಗ್ಗೆ ಕೇಂದ್ರ ಸರ್ಕಾರದ ಬಳಿ ಯಾವುದೇ ಮಾಹಿತಿ ಇಲ್ಲ ಎಂದಿದ್ದ ಕೇಂದ್ರ ಸಚಿವ ಅಶ್ವಿನಿ ಕುಮಾರ್ ಚೌಬೆ ಹೇಳಿಕೆಗೂ ಐಎಂಎ ತಿರುಗೇಟು ನೀಡಿದೆ. ಒಂದುಕಡೆ ಕೊರೋನಾ ವಾರಿಯರ್ಸ್ ಅಂತ ಕರೆಯುವ ನೀವು ಮತ್ತೊಂದುಕಡೆ ಅವರಿಗೆ ಮತ್ತು ಅವರ ಕುಟುಂಬಸ್ಥರಿಗೆ ಸಹಾಯ ಮಾಡದಿರೋದು ಸರಿಯಲ್ಲ. ಇದರಿಂದ ಸರ್ಕಾರವು ಸಾಂಕ್ರಾಮಿಕ ಕಾಯ್ದೆ- 1987 ಮತ್ತು ವಿಪತ್ತು ನಿರ್ವಹಣಾ ಕಾಯ್ದೆಯನ್ನ ನಿರ್ವಹಿಸುವ ನೈತಿಕತೆಯನ್ನು ಕಳೆದುಕೊಂಡಿದೆ ಅಂತ ಐಎಂಎ ಹೇಳಿದೆ.
-masthmagaa.com
Contact Us for Advertisement