ಭಾರತದ ಸಂಸತ್ ಭವನದ ರೋಚಕ ಇತಿಹಾಸ ನಿಮಗೆ ಗೊತ್ತಾ..?

masthmagaa.com:

ಹಾಯ್ ಫ್ರೆಂಡ್ಸ್, ಅದು 1911.. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ.. ಭಾರತದಲ್ಲಿ ದೌರ್ಜನ್ಯದ ಆಡಳಿತ ನಡೆಸುತ್ತಿದ್ದ ಬ್ರಿಟಿಷರು ಕೋಲ್ಕತ್ತಾದಿಂದ ರಾಜಧಾನಿಯನ್ನು ಶಿಫ್ಟ್ ಮಾಡೋಕೆ ನಿರ್ಧರಿಸಿದ್ರು. ಅದರಂತೆ ಡಿಸೆಂಬರ್ 12ರಂದು ರೈಸಿನ ಬೆಟ್ಟದ ಹಸಿರು ತುಂಬಿದ ಜಾಗವಾದ ದೆಹಲಿಯನ್ನು ಹೊಸ ರಾಜಧಾನಿಯಾಗಿ ಆಯ್ಕೆ ಮಾಡಿ, ನವದೆಹಲಿ ಅಂತ ಹೆಸರಿಟ್ರು. ದೆಹಲಿ ನಗರದ ಲೇಔಟ್‍ನ್ನು ಅಡ್ಮಿರಲ್ ಲುಟಿಯನ್ಸ್ ಸಿದ್ಧಪಡಿಸಿದ್ರು. ಅದರಂತೆ ವೈಸ್‍ರಾಯ್ ಭವನ ಅಂದ್ರೆ ಇಂದಿನ ರಾಷ್ಟ್ರಪತಿ ಭವನ, ಸಚಿವಾಲಯ, ಇಂಡಿಯಾ ಗೇಟ್ ಸೇರಿದಂತೆ ನಗರದ ಹಲವು ಕಟ್ಟಡಗಳ ರೂಪುರೇಖೆ ಸಿದ್ಧವಾಯ್ತು. ಆದ್ರೆ ಸಂಸತ್ ಭವನದಂತಹ ಯಾವುದೇ ಕಟ್ಟಡದ ಪ್ಲಾನಿಂಗ್ ಇರಲಿಲ್ಲ. ನಂತರ ನಗರದ ಪ್ಲಾನಿಂಗ್‍ನಲ್ಲಿ ಸಂಸತ್ ಭವನ ಕಟ್ಟಡದ ಯೋಜನೆ ಸೇರಿಸಲಾಯ್ತು. ವಾಸ್ತುಶಿಲ್ಪಿ ಹರ್ಬರ್ಟ್ ಬೇಕರ್ ಸಂಸತ್ ಭವನವನ್ನು ತ್ರಿಭುಜಾಕಾರದಲ್ಲಿ ನಿರ್ಮಿಸಬೇಕು ಅಂತ ಪ್ಲಾನ್ ಮಾಡಿದ್ರು. ಆದ್ರೆ ಲುಟಿಯನ್ಸ್ ಅವರ ತಲೆಯಲ್ಲಿ ಬೇರೆಯದ್ದೇ ಪ್ಲಾನ್ ಇತ್ತು. ಸಂಸತ್ ಭವನವನ್ನು ವೃತ್ತಾಕಾರದಲ್ಲಿ ನಿರ್ಮಿಸಬೇಕು ಅಂತ ಪಟ್ಟು ಹಿಡಿದ್ರು. ಅದೇ ಪ್ರಸ್ತಾವನೆಯನ್ನು ಹೊಸ ರಾಜಧಾನಿ ಸಮಿತಿ ಮುಂದೆ ಇಟ್ಟು, ಪಾಸ್ ಕೂಡ ಆಯ್ತು.

1921ರ ಫೆಬ್ರವರಿ 12ರಂದು ಸಂಸತ್ ಭವನ ಕಟ್ಟಡ ಕಾಮಗಾರಿ ಆರಂಭವಾಯ್ತು. ಕಟ್ಟಡಕ್ಕೆ ಪ್ಲಾನ್ ಮಾಡಿದ್ದು, ಮೇಲ್ವಿಚಾರಣೆ ವಹಿಸಿಕೊಂಡಿದ್ದು ಎಲ್ಲಾ ಬ್ರಿಟಿಷರೇ ಆಗಿದ್ರೂ ಕೂಡ ಬೆವರು ಸುರಿಸಿ ಇದನ್ನು ಕಟ್ಟಿದವರು ಭಾರತದ ಕಾರ್ಮಿಕರೇ ಆಗಿದ್ರು. ಅಲ್ಲದೆ ಕೆಲವೊಂದು ವಸ್ತುಗಳನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದು ಬಿಟ್ರೆ ಉಳಿದೆಲ್ಲಾ ವಸ್ತುಗಳು ಭಾರತದ್ದೇ ಆಗಿದ್ದವು. ಬ್ರಿಟಿಷರು ಕ್ರೈಸ್ತ ಧರ್ಮೀಯರಾಗಿದ್ರೂ ಕೂಡ ಸಂಸತ್ ಭವನದಲ್ಲಿ ಹಿಂದೂ ಮತ್ತು ಮುಸ್ಲಿಂ ವಾಸ್ತು ಶೈಲಿಯನ್ನು ಕಾಣಬಹುದಾಗಿದೆ. ಈ ಕಟ್ಟಡ ನಿರ್ಮಾಣ ಕಾಮಗಾರಿ ಸತತ 6 ವರ್ಷಗಳ ಕಾಲ ನಡೀತು. ನಂತರ 1927 ಜನವರಿ 18ರಂದು ವೈಸ್ ರಾಯ್ ಲಾರ್ಡ್ ಇರ್ವಿನ್ ಸಂಸತ್ ಭವನವನ್ನು ಉದ್ಘಾಟನೆ ಮಾಡಿದ್ರು. ಇದರ ಬೀಗ ತೆರೆಯುವಾಗ ಮುಂದೊಂದಿನ ಇದೇ ಜಾಗದಲ್ಲಿ ಭಾರತೀಯರಿಗೆ ಅಧಿಕಾರ ಹಸ್ತಾಂತರ ನಡೆಯುತ್ತೆ ಅಂತ ಬ್ರಿಟಿಷರಿಗೆ ಗೊತ್ತಿರಲಿಲ್ಲ. ಈ ಕಟ್ಟಡ ನಿರ್ಮಾಣಕ್ಕೆ ಖರ್ಚಾಗಿದ್ದು 83 ಲಕ್ಷ ರೂಪಾಯಿ ಮಾತ್ರ. ಆಗಿನ ಕಾಲದಲ್ಲಿ ಇದು ದೊಡ್ಡ ಮೊತ್ತವೇ ಆಗಿತ್ತು.

ಕಟ್ಟಡದ ವಿನ್ಯಾಸ ಹೇಗಿದೆ..?
ಸಂಸತ್ ಭವನದ ಈ ಕಟ್ಟಡದ ಸುತ್ತ 10 ಅಡಿ ಎತ್ತರದ ಕೆಂಪುಕಲ್ಲಿನ ಕಂಪೌಂಡ್ ಇದೆ. 6 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರೋ ಸಂಸತ್ ಭವನದ ಪ್ರಮುಖ ಕಟ್ಟಡ 560 ಅಡಿ ಸುತ್ತಳತೆಯಲ್ಲಿ ನಿರ್ಮಾಣವಾಗಿದೆ. ಇದ್ರ ಕೆಳಮಹಡಿ ಕೆಂಪುಗಲ್ಲಿನಿಂದ ಕೂಡಿದ್ರೆ ಮೇಲ್ಭಾಗ ಹಳದಿಗಲ್ಲಿನಿಂದ ಕೂಡಿದೆ. ಕಟ್ಟಡದ ಸುತ್ತಲೂ ಸಮನಾಂತರದಲ್ಲಿರೋ ಸಾಲುಗಂಬಗಳು ಕಟ್ಟಡ ವೈಭವವನ್ನು ಮತ್ತಷ್ಟು ಹೆಚ್ಚಿಸಿವೆ. ಒಟ್ಟು 144 ಕಂಬಗಳಿದ್ದು, ಪ್ರತಿಯೊಂದು ಕಂಬ 27 ಅಡಿ ಎತ್ತರವಿದೆ. ಕಾಂಪೌಂಡ್ ಒಳಗೆ ಹೋಗುತ್ತಲೇ ಸ್ವತಂತ್ರ್ಯ ಹೋರಾಟಗಾರರ ಕೆಲವೊಂದು ಪ್ರತಿಮೆಗಳಿದ್ದು, ಅದು ಇತಿಹಾಸವನ್ನು ನೆನಪಿಸುತ್ತದೆ. ಜೊತೆಗೆ ಸಂಸತ್ ಭವನದ ಮುಂದೆ ಗಾಂಧೀಜಿ ಪ್ರತಿಮೆ ನಿರ್ಮಿಸಲಾಗಿದೆ. ಅದು ಹೇಗಿದೆ ಅಂದ್ರೆ ಓರ್ವ ಮಹಾನ್ ಸಂತ ಎಲ್ಲಾ ಜವಾಬ್ದಾರಿಯನ್ನು ಬೇರೆಯವರಿಗೆ ಹಸ್ತಾಂತರಿಸಿ ಧ್ಯಾನದಲ್ಲಿ ಲೀನವಾಗಿದ್ದಾರೇನೋ ಅಂತ ಅನ್ನಿಸುತ್ತೆ. ಕಟ್ಟಡ ಒಳಪ್ರವೇಶಿಸಿ ಗ್ರೌಂಡ್ ಫ್ಲೋರ್​​​ನಲ್ಲೇ ಸಾಗಿದ್ರೆ ಸೆಂಟ್ರಲ್ ಹಾಲ್, ಲೋಕಸಭೆ, ರಾಜ್ಯಸಭೆ ಮತ್ತು ಲೈಬ್ರರಿಗೆ ದಾರಿಯಿದೆ.

ಸೆಂಟ್ರಲ್ ಹಾಲ್
ಕಟ್ಟಡದ ಮಧ್ಯಭಾಗದಲ್ಲಿ ಸೆಂಟ್ರಲ್ ಹಾಲ್ ಇದೆ.. ಇದು ಬ್ರಿಟಿಷರು ಭಾರತಕ್ಕೆ ಅಧಿಕಾರ ಹಸ್ತಾಂತರ ಮಾಡಿದ ಐತಿಹಾಸಿಕ ಸ್ಥಳವಾಗಿದೆ. ಇದನ್ನು ಪ್ರವೇಶಿಸುವ ಮುನ್ನ ಒಂದು ತೆರೆದ ಅಂಗಳ ಸಿಗುತ್ತೆ. ಅಲ್ಲಿ ಸಣ್ಣ ಸಣ್ಣ ಕೊಳಗಳಿದ್ದು, ದೊಡ್ಡ ದೊಡ್ಡ ನಾಯಕರ ಪ್ರತಿಮೆಗಳನ್ನು ಇಡಲಾಗಿದೆ. ಸೆಂಟ್ರಲ್ ಹಾಲ್‍ಗೆ ದೊಡ್ಡ ಗುಂಬಜ್ ಇದ್ದು, ಅದರ ಮೇಲೆ ಅಷ್ಟ ಕೋನಾಕಾರದ ಒಂದು ಮಂಟಪ ಇದೆ. ಅದರ ಮೇಲೆ ಭಾರತದ ಲಾಂಛನ ಇದೆ.. ಈ ಗುಂಬಜ್‍ನ್ನು ಸಿಮೆಂಟ್ ಕಾಂಕ್ರಿಟ್‍ನಿಂದ ಮಾಡಲಾಗಿದೆ. ಇಲ್ಲಿ ಫ್ಯಾನ್‍ಗಳನ್ನು ಲೋಹದ ಕಂಬಗಳ ಮೇಲೆ ಉಲ್ಟಾ ನೇತು ಹಾಕಲಾಗಿದೆ. ಇಲ್ಲಿ ಎರಡೂ ಸದನಗಳ ಸದಸ್ಯರು ಕುಳಿತುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇದ್ರಲ್ಲಿ ಸಭಾಧ್ಯಕ್ಷರಿಗಾಗಿ ಮರದಲ್ಲಿ ಮಾಡಲಾದ ಮಂಟಪದಂತಹ ಕುರ್ಚಿ ಇದೆ. ಇದರ ಮೇಲೆ ಸರ್ ಓಸ್ವಲ್ಡ್ ಬಿರ್ಲೆ ಬಿಡಿಸಿದ ಗಾಂಧೀಜಿಯವರ ಚಿತ್ರವಿದೆ. ಅಲ್ಲದೆ ಹಾಲ್‍ನ ಗೋಡೆಯ ಮೇಲೂ ಸುತ್ತಲೂ ವಿವಿಧ ನಾಯಕರ ಚಿತ್ರವಿದೆ. ಅದಕ್ಕೂ ಮೇಲೆ ಬ್ರಿಟಿಷರು ಭಾರತವನ್ನು 12 ಪ್ರದೇಶಗಳಾಗಿ ವಿಭಜಿಸಿ ಆಳುತ್ತಿದ್ದರು ಅನ್ನೋದಕ್ಕೆ ಸಾಕ್ಷಿಯಾಗಿ 12 ಸಿಂಬಲ್‍ಗಳಿವೆ.

ಲೋಕಸಭೆ
ಇದು ಅರ್ಧಗೋಳಾಕಾರದಲ್ಲಿರೋ ದೊಡ್ಡ ಕೋಣೆ.. ಕಾರ್ಪೆಟ್ ಬಣ್ಣ ನೋಡಿ ಯಾವ ಸದನ ಅಂತ ಹೇಳ್ಬೋದು.. ಲೋಕಸಭೆಯದ್ದು ಹಸಿರು ಬಣ್ಣ.. ಹರ್ಬರ್ಟ್ ಬೇಕರ್ ಖುದ್ದಾಗಿ ಲೋಕಸಭೆಯ ಬ್ಲೂಪ್ರಿಂಟ್ ರೆಡಿ ಮಾಡಿದ್ರು. ಸಭಾಧ್ಯಕ್ಷರ ಕುರ್ಚಿಯ ಮೇಲೆ ಸಂಸ್ಕೃತದಲ್ಲಿ ಧರ್ಮಚಕ್ರ ಪ್ರವರ್ತನಾಯ್ ಅಂತ ಬರೆಯಲಾಗಿದೆ. ಮೊದಲಿಗೆ 400 ಜನ ಕೂರಬಹುದಿತ್ತು. ಈಗ ಅಗತ್ಯಕ್ಕೆ ತಕ್ಕಂತೆ ಸೀಟುಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಲೋಕಸಭೆಯ ಛಾವಣಿ ಮತ್ತು ಗೋಡೆಗಳಿಗೆ ಅಮೆರಿಕದಿಂದ ಟೈಲ್ಸ್​​​​ಗಳನ್ನು ತರಿಸಿ ಹಾಕಲಾಗಿತ್ತು. 1929 ಭಗತ್ ಸಿಂಗ್ ಮತ್ತು ಭಟುಕೇಶ್ವರ್ ದತ್ 1929ರ ಏಪ್ರಿಲ್ 8ರಂದು ಬಾಂಬ್ ದಾಳಿ ನಡೆಸಿದ್ರು. ಯಾವುದೇ ಪ್ರಾಣಹಾನಿಯಾಗಿರಲಿಲ್ಲ. ಆದ್ರೆ ಸಂಸತ್‍ನ ಒಂದು ಕಂಬಕ್ಕೆ ಸ್ವಲ್ಪ ಡ್ಯಾಮೇಜ್ ಆಗಿ, ಅದನ್ನು ಸರಿಪಡಿಸಲಾಯ್ತು. ಆದ್ರು ಕೂಡ ಇಂದಿಗೂ ಆ ಗುರುತು ಲೋಕಸಭೆಯಲ್ಲಿದೆ.

ರಾಜ್ಯಸಭೆ
ಲೋಕಸಭೆಯಲ್ಲಿ ಹಸಿರು ಕಾರ್ಪೆಟ್ ಇರುವಂತೆ ರಾಜ್ಯಸಭೆಯಲ್ಲಿ ಕೆಂಪು ಕಾರ್ಪೆಟ್ ಇದೆ. ಆರಂಭದಲ್ಲಿ ಇದ್ರಲ್ಲಿ 60 ಜನ ಕೂರಬಹುದಿತ್ತು. ಈಗ 250 ಜನ ಆರಾಮಾಗಿ ಕುಳಿತುಕೊಳ್ಳಬಹುದಾಗಿದೆ.

ಲೈಬ್ರರಿ
ರಾಜಮಹಾರಾಜರಿಗಾಗಿ ಮಾಡಲಾಗಿದ್ದ 3ನೇ ಸದನ ಈಗ ಲೈಬ್ರರಿಯಾಗಿ ಬದಲಾಗಿದೆ. ಇಲ್ಲಿಗೆ ಪ್ರತಿದಿನವೂ ಎಲ್ಲಾ ರಾಜ್ಯಗಳ, ಎಲ್ಲಾ ಭಾಷೆಯ ಪತ್ರಿಕೆಗಳು ಬರುತ್ತವೆ. ವೀಕ್ಷಕರಿಗಾಗಿ ಇಲ್ಲಿ ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಸಂವಿಧಾನವನ್ನು ಇರಿಸಲಾಗಿದೆ. ಇನ್ನೊಂದು ವಿಷ್ಯ ಅಂದ್ರೆ ಭಾರತದ ಸಂವಿಧಾನವನ್ನು ಯಾವುದೇ ಕಂಪ್ಯೂಟರ್​​​​​ನಲ್ಲಿ ಟೈಪ್ ಮಾಡಿ, ಪ್ರಿಂಟ್ ಹೊಡೆದಿರೋದು ಅಲ್ಲ.. ಇಡೀ ಪುಸ್ತಕವನ್ನು ಬರವಣಿಗೆ ಮೂಲಕ ಬರೆಯಲಾಗಿತ್ತು. ಪ್ರೇಮ್ ಬಿಹಾರಿ ನರೇನ್ ರಾಯ್ ಜಾದಾ ಅನ್ನೋರು ಇಟಾಲಿಯನ್ ಶೈಲಿಯಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಸಂವಿಧಾನ ಬರೆದ್ರು. ಪ್ರತಿ ಪೇಜ್‍ಗೆ 100 ರೂಪಾಯಿ ಪಡೆದಿದ್ರು. ಅದೇ ರೀತಿ ಹಿಂದಿಯಲ್ಲಿ ವಸಂತ ಕೃಷ್ಣ ವೈದ್ಯ ಅನ್ನೋರು ಬರೆದ್ರು. ಎಲ್ಲಾ ರಾಜ್ಯಗಳ ಎಲ್ಲಾ ಭಾಷೆಗಳ ಪತ್ರಿಕೆ ಬರುತ್ತೆ.

-masthmagaa.com

Contact Us for Advertisement

Leave a Reply