masthmagaa.com:
ದೇಶದಲ್ಲಿ ಲಾಕ್ಡೌನ್ ಅಂತ್ಯಗೊಳಿಸಿ ಭಾರತವನ್ನ ಹಂತ ಹಂತವಾಗಿ ಅನ್ಲಾಕ್ ಮಾಡಲು ಕೇಂದ್ರ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದೆ. ಈಗಿರುವ ನಿಯಮಗಳು ಜೂನ್ 7ರ ಮಧ್ಯರಾತ್ರಿವರೆಗೆ ಮುಂದುವರಿಯಲಿದೆ. ಆದ್ರೆ ಜೂನ್ 8ರಿಂದ ಹಂತ ಹಂತವಾಗಿ ಎಲ್ಲವೂ ಓಪನ್ ಆಗಲಿದೆ. ಈ ಅನ್ಲಾಕ್ ಪ್ರಕ್ರಿಯೆಯನ್ನ ಹಲವು ಹಂತಗಳಲ್ಲಿ (ಫೇಸ್) ವಿಂಗಡಿಸಲಾಗಿದೆ.
ಮೊದಲ ಹಂತ ಜೂನ್ 8ರಿಂದ ಆರಂಭ:
ಮೊದಲ ಹಂತದಲ್ಲಿ ಎಲ್ಲಾ ಧಾರ್ಮಿಕ ಕೇಂದ್ರಗಳು, ಹೋಟೆಲ್, ರೆಸ್ಟೋರೆಂಟ್, ರೆಸಾರ್ಟ್ ಮತ್ತು ಶಾಪಿಂಗ್ ಮಾಲ್ಗಳು ಓಪನ್ ಆಗಲಿವೆ. ಆದ್ರೆ ಆರೋಗ್ಯ ಇಲಾಖೆ ಜಾರಿ ಮಾಡುವ ನಿಯಮಗಳನ್ನ ಅನುಸರಿಸಿ ಕಾರ್ಯನಿರ್ವಹಿಸಬೇಕು. ಕಾಯಿಲೆ ಹರಡದಂತೆ ಒಂದಷ್ಟು ನಿಯಮಗಳನ್ನ ಪಾಲಿಸಬೇಕಾಗುತ್ತದೆ.
ಎರಡನೇ ಹಂತ ಜುಲೈನಿಂದ ಆರಂಭ:
ಇನ್ನು ಎರಡನೇ ಹಂತವು ಜುಲೈನಲ್ಲಿ ಆರಂಭವಾಗಲಿದೆ. ಇದರಲ್ಲಿ ಶಾಲಾ ಕಾಲೇಜು, ಶೈಕ್ಷಣಿಕ ಕೇಂದ್ರಗಳು ಮತ್ತು ತರಬೇತಿ ಕೇಂದ್ರಗಳು ಓಪನ್ ಆಗಲಿವೆ. ಆದ್ರೆ ಈ ವಲಯಗಳನ್ನ ಓಪನ್ ಮಾಡುವ ಮೊದಲು ಸಂಬಂಧಪಟ್ಟ ಸಂಸ್ಥೆ ಮತ್ತು ಪೋಷಕರಿಂದ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ.
ಮೂರನೇ ಹಂತದ ದಿನಾಂಕ ನಿಗದಿಯಾಗಿಲ್ಲ:
ಇನ್ನು ಮೂರನೇ ಹಂತ.. ಇದರಲ್ಲಿ ಕೆಲವೇ ಕೆಲವು ಆಯ್ದ ವಲಯಗಳನ್ನ ಹೊರತುಪಡಿಸಿ ಉಳಿದಂತೆ ಪೂರ್ತಿ ದೇಶ ಓಪನ್ ಮಾಡಲಾಗುತ್ತದೆ. ಈ ಹಂತದಲ್ಲಿ ಅಂತಾರಾಷ್ಟ್ರೀಯ ವಿಮಾನಯಾನ, ಮೆಟ್ರೋ ರೈಲು, ಸಿನಿಮಾ ಹಾಲ್, ಜಿಮ್, ಸ್ವಿಮ್ಮಿಂಗ್ ಪೂಲ್, ಮನರಂಜನಾ ಪಾರ್ಕ್ ಬಾರ್ ಅಂಡ್ ರೆಸ್ಟೊರೆಂಟ್, ಆಡಿಟೋರಿಯಂ, ಹಾಲ್ಗಳು ಓಪನ್ ಆಗಲಿವೆ. ಜೊತೆಗೆ ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ ಕಾರಣಕ್ಕೆ ದೊಡ್ಡ ಪ್ರಮಾಣದಲ್ಲಿ ಜನ ಗುಂಪು ಸೇರಲು ಅವಕಾಶ ನೀಡಲಾಗುತ್ತದೆ. ಆದ್ರೆ ಪೂರ್ತಿ ಓಪನ್ ಅಪ್ ಆಗುವ ಈ ಮೂರನೇ ಹಂತ ಯಾವಾಗ ಶುರುವಾಗುತ್ತೆ ಅಂತ ಕೇಂದ್ರ ಸರ್ಕಾರ ಇನ್ನೂ ದಿನಾಂಕ ನಿಗದಿಪಡಿಸಿಲ್ಲ. ಜೂನ್-ಜುಲೈನಲ್ಲಿ ಆಗುವ ಮೊದಲೆರಡು ಹಂತಗಳ ಪರಿಣಾಮ ನೋಡಿಕೊಂಡು ಮೂರನೇ ಹಂತದ ದಿನಾಂಕ ನಿಗದಿಪಡಿಸಲಾಗುತ್ತದೆ.
ಕಂಟೈನ್ಮೆಂಟ್ ಜೋನ್ಗಳಲ್ಲಿ ಜೂನ್ 30ರವರೆಗೆ ಲಾಕ್ಡೌನ್:
ಇನ್ನು ಕಂಟೈನ್ಮೆಂಟ್ ಜೋನ್ಗಳಲ್ಲಿ ಜೂನ್ 30ರವರೆಗೆ ಕಂಪ್ಲೀಟ್ ಲಾಕ್ಡೌನ್ ಇರುತ್ತದೆ. ಯಾರೂ ಕೂಡ ಕಂಟೈನ್ಮೆಂಟ್ ಜೋನ್ ಒಳಗೆ ಹೋಗುವಂತಿಲ್ಲ. ಹೊರಗೆ ಬರುವಂತಿಲ್ಲ. ಆದ್ರೆ ಅಗತ್ಯ ಸೇವೆಗಳು ಲಭ್ಯವಿರುತ್ತದೆ.
ನೈಟ್ ಕರ್ಫ್ಯೂ ಸಮಯ ಬದಲಾವಣೆ:
ಇನ್ನು ನೈಟ್ ಕರ್ಫ್ಯೂ ಅವಧಿಯನ್ನ ಬದಲಿಸಲಾಗಿದೆ. ಸಂಜೆ 7ರಿಂದ ಬೆಳಗ್ಗೆ 7 ಗಂಟೆ ಬದಲಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೆ ನೈಟ್ ಕರ್ಫ್ಯೂ ಇರಲಿದೆ.
ಅಂತರ್ ಜಿಲ್ಲಾ ಹಾಗೂ ಅಂತರ್ ರಾಜ್ಯ ಸಂಚಾರ:
ಅಂತರ್ ರಾಜ್ಯ ಹಾಗೂ ಅಂತರ್ ಜಿಲ್ಲಾ ಪ್ರಯಾಣಕ್ಕೆ ಯಾವುದೇ ಅನುಮತಿ ಬೇಕಿಲ್ಲ. ಯಾವುದೇ ನಿರ್ಬಂಧ ಇರುವುದಿಲ್ಲ. ಆದ್ರೆ ರಾಜ್ಯ ಸರ್ಕಾರಗಳು ಅಗತ್ಯಬಿದ್ದರೆ ನಿರ್ದಿಷ್ಟ ರಾಜ್ಯ ಅಥವಾ ಜಿಲ್ಲೆಗಳ ನಡುವೆ ಸಂಚಾರ ನಿರ್ಬಂಧಿಸಬಹುದು. ಶ್ರಮಿಕ್ ವಿಶೇಷ ರೈಲು, ದೇಶೀ ವಿಮಾನಯಾನ, ವಿದೇಶದಲ್ಲಿ ಸಿಲುಕಿರುವವರನ್ನು ಕರೆತರುವ ಪ್ರಕ್ರಿಯೆ ಮುಂದುವರಿಯಲಿದೆ.
ಈ ವರ್ಗದ ಜನ ಮನೆಯಲ್ಲೇ ಇರಿ:
ಇನ್ನು 65 ವರ್ಷ ಮೇಲ್ಪಟ್ಟವರು, 10 ವರ್ಷದೊಳಗಿನ ಮಕ್ಕಳು, ರೋಗಿಗಳು, ಗರ್ಭಿಣಿಯರು ಮನೆಯಲ್ಲೇ ಇರುವಂತೆ ಕೇಂದ್ರ ಸರ್ಕಾರ ಸಲಹೆ ನೀಡಿದೆ.
ಮದುವೆ ಸಮಾರಂಭ ಮತ್ತು ಅಂತ್ಯಸಂಸ್ಕಾರ:
ಮದುವೆ ಸಮಾರಂಭದಲ್ಲಿ ಗರಿಷ್ಠ 50 ಮತ್ತು ಅಂತ್ಯ ಸಂಸ್ಕಾರದಲ್ಲಿ ಗರಿಷ್ಠ 20 ಜನ ಭಾಗವಹಿಸಬಹುದು.
ಆರೋಗ್ಯ ಸೇತು ಅಪ್ಲಿಕೇಶನ್:
ಸ್ಮಾರ್ಟ್ ಪೋನ್ ಇರುವ ಪ್ರತಿಯೊಬ್ಬ ಉದ್ಯೋಗಿಯು ಆರೋಗ್ಯ ಸೇತು ಅಪ್ಲಿಕೇಶನ್ ಬಳಸುವಂತೆ ನೋಡಿಕೊಳ್ಳುವ ಜವಾಬ್ದಾರಿ ಆಯಾ ಕಂಪನಿಗಳದ್ದು.
ಮಾರ್ಗಸೂಚಿಗಳನ್ನು ದುರ್ಬಲಗೊಳಿಸುವಂತಿಲ್ಲ:
ಕೇಂದ್ರ ಸರ್ಕಾರ ಜಾರಿ ಮಾಡಿರುವ ಈ ಮಾರ್ಗಸೂಚಿಗಳನ್ನ ಯಾವುದೇ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶ ಮತ್ತಷ್ಟು ಸ್ಟ್ರಿಕ್ಟ್ ಮಾಡಬಹುದು. ಆದ್ರೆ ದುರ್ಬಲಗೊಳಿಸುವಂತಿಲ್ಲ.
-masthmagaa.com
Contact Us for Advertisement