masthmagaa.com:
ಲೋಕಸಭಾ ಚುನಾವಣಾ ಪ್ರಚಾರಕ್ಕೆ ಕಲಬುರಗಿಗೆ ಬಂದಿಳಿದಿರೋ ಪಿಎಂ ನರೇಂದ್ರ ಮೋದಿಯವ್ರು, ಬರುತ್ತಲೇ ಕಾಂಗ್ರೆಸ್ ಸರ್ಕಾರವನ್ನ ಟೀಕಿಸಿದ್ದಾರೆ. ವಿಪಕ್ಷ ನಾಯಕ ಮಲ್ಲಿಕಾರ್ಜುನ್ ಖರ್ಗೆ ತವರಿನಿಂದ್ಲೇ ರಾಜ್ಯದ ಕ್ಯಾಂಪೇನ್ ಶುರು ಮಾಡಿರೋ ಪಿಎಂ ಮೋದಿ, ಕಾಂಗ್ರೆಸ್ ಪಕ್ಷಕ್ಕೆ ಭ್ರಷ್ಟಾಚಾರ ಒಂದ್ ರೀತಿ ಆಕ್ಸಿಜನ್.. ಆಮ್ಲಜನಕ ಇದ್ಹಾಗೆ ಅಂದಿದ್ದಾರೆ. ಅಲ್ಲದೆ, ʻಮುಂಬರೋ ಚುನಾವಣೆಯಲ್ಲಿ ಬಿಜೆಪಿಯನ್ನ ಗೆಲ್ಲಿಸೋಕೆ ಕರ್ನಾಟಕ ಈಗಾಗಲೇ ಸಂಕಲ್ಪ ತೊಟ್ಟಿದೆ. ಈ ಬಾರಿ 400 ಕ್ರಾಸ್ ಮಾಡ್ತೀವಿ ಅಂತ ಇಡೀ ಕರ್ನಾಟಕ ಹೇಳ್ತಿದೆʼ ಅಂದಿದ್ದಾರೆ. ಇನ್ನು ʻಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಬಹಳ ಹದಗೆಟ್ಹೋಗಿದೆ. ಸಮಾಜ ವಿರೋಧಿಗಳಿಗೆ ರಾಜ್ಯದಲ್ಲಿ ರಕ್ಷಣೆ ನೀಡಲಾಗ್ತಿದೆ. ಕಾಂಗ್ರೆಸ್ ವಿರುದ್ಧ ನಿಮ್ಮೆಲ್ಲರಿಗಿರೋ ಕೋಪ ನನಗೆ ಅರ್ಥವಾಗುತ್ತೆ. ಕಲ್ಲಿದ್ದಲಿನ ಕಪ್ಪಾದ್ರೂ ತೆಗಿಬೋದು.. ಆದ್ರೆ ಕಾಂಗ್ರೆಸ್ನಿಂದ ಮಾತ್ರ ಭ್ರಷ್ಟಾಚಾರವನ್ನ ದೂರ ಮಾಡೋಕೆ ಸಾಧ್ಯವಿಲ್ಲ. ಈ ರಾಜವಂಶಗಳಿಗೆ ಭ್ರಷ್ಟಾಚಾರ ಒಂಥರಾ ಆಕ್ಸಿಜನ್ ಇದ್ಹಾಗೆ ಅಂತ ಟೀಕಿಸಿದ್ದಾರೆ.
ಇನ್ನೊಂದ್ಕಡೆ ಮೋದಿಯ ಕಲಬುರಗಿ ಭೇಟಿ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯನವ್ರು ತಮ್ಮ X ಖಾತೆಯಲ್ಲಿ ಸಾಲು ಸಾಲು ಪೋಸ್ಟ್ ಹಾಕಿ ಪ್ರಶ್ನೆಗಳ ಅಸ್ತ್ರವನ್ನ ಮೋದಿ ಕಡೆ ಬಿಟ್ಟಿದ್ದಾರೆ. ʻಕರ್ನಾಟಕಕ್ಕೆ ಪ್ರಧಾನಿ ಮೋದಿಯವ್ರಿಗೆ ಸ್ವಾಗತ. ವಿಶ್ವದ ಬಹುದೊಡ್ಡ ಭ್ರಷ್ಟಾಚಾರ ಹಗರಣವಾಗಿ ಹೊರಹೊಮ್ಮುತ್ತಿರೋ ಚುನಾವಣಾ ಬಾಂಡ್ ಸುಲಿಗೆ ಬಗ್ಗೆ ನಿಮ್ಮ ಬಿಜೆಪಿ ಯಾಕೆ ಸೈಲೆಂಟಾಗಿದೆ? ಸ್ವಿಸ್ ಬ್ಯಾಂಕ್ನಲ್ಲಿರೋ ಕಪ್ಪು ಹಣವನ್ನ ಜನರಿಗೆ ಹಂಚುತ್ತೇವೆ, ನೋಟ್ ಬ್ಯಾನ್ ಮಾಡಿ ಕಪ್ಪು ಹಣವನ್ನ ಬುಡ ಸಮೇತ ಕಿತ್ತು ಎಸೀತೇವೆ. ʻನಾ ಖಾವೂಂಗಾ.. ನಾ ಖಾನೆ ದೂಂಗಾ ಅಂತೇಳಿ, ದೇಶದ ಆಸ್ತಿಗೆಲ್ಲಾ ನಾನೇ ಚೌಕಿದಾರ ಅಂತೆಲ್ಲಾ ಹೇಳಿ, ಹತ್ತು ವರ್ಷಗಳಿಂದ ಅಧಿಕಾರದಲ್ಲಿರೋ ಮೋದಿಯವರೇ, ಅಟ್ಲೀಸ್ಟ್ ಚುನಾವಣಾ ಬಾಂಡ್ ಕೇಸ್ ಕುರಿತಾದ್ರೂ ಮಾತನಾಡಿ.. ಉತ್ತರ ನೀಡಿʼ ಅಂತ ಕೇಳಿದ್ದಾರೆ. ಅಷ್ಟೇ ಅಲ್ದೇ, ಸುಪ್ರೀಂ ಕೋರ್ಟ್ ಆದೇಶ ಆದ್ರೂ SBI ಸಂಪೂರ್ಣ ಮಾಹಿತಿ ನೀಡಲು ಯಾಕೆ ಹಿಂಜರೀತಿದೆ? SBI ಅದ್ಯಾಕೆ ಮಾಹಿತಿ ಮುಚ್ಚಿಡಲು ಪ್ರಯತ್ನಿಸ್ತಿದೆ? SBI ಮೇಲೆ ಒತ್ತಡ ಹೇರ್ತಿರೋರು ಯಾರು? ದೇಣಿಗೆ ವಸೂಲಿ ಮಾಡೋಕೆ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನ ದುರುಪಯೋಗಪಡಿಸ್ಕೊಳ್ತಿದೆಯೇ? ಚುನಾವಣಾ ಬಾಂಡ್ ಅನ್ನೋದು ಬಿಜೆಪಿಯ ಕೈಯಲ್ಲಿರೋ ರಾಜಕೀಯ ಸುಲಿಗೆಯ ಬ್ರಹ್ಮಾಸ್ತ್ರನಾ? ಅಂತ ಕೇಳಿದ್ದಾರೆ.
ಇನ್ನೊಂದ್ಕಡೆ ಸಿಎಂ ಸಿದ್ದರಾಮಯ್ಯ ತಮ್ಮ 5 ಗ್ಯಾರಂಟಿಗಳ ವಾರಂಟಿ ಬಗ್ಗೆ ಮಾತನಾಡಿದ್ದಾರೆ. ತಮ್ಮ ಸರ್ಕಾರದ 5 ವರ್ಷಗಳ ಪೂರ್ಣ ಅವಧಿವರೆಗೂ ಗ್ಯಾರಂಟಿ ಯೋಜನೆಗಳು ಕಂಟಿನ್ಯೂ ಆಗಲಿದೆ ಅಂದಿದ್ದಾರೆ. ಈ ರೀತಿ ಮಾರ್ಚ್ 15ರಂದು ಮೈಸೂರಿನಲ್ಲಿ ಆಯೋಜಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಸಮಾವೇಶದಲ್ಲಿ ಹೇಳಿದ್ದಾರೆ.
-masthmagaa.com