masthmagaa.com:
ಕೊರೋನಾ ವಿರುದ್ಧದ ಹೋರಾಟಕ್ಕೆ ಇಡೀ ದೇಶ ಒಂದಾಗಿ ಹೋರಾಡುತ್ತಿದೆ. ಈ ಹೋರಾಟಕ್ಕೆ ಹಲವರು ಧನಸಹಾಯ ನೀಡುತ್ತಿದ್ದಾರೆ. ಇದೀಗ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರದ ಎಲ್ಲಾ ಸಚಿವರು ಹಾಗೂ ಸಂಸದರ ವೇತನವನ್ನ ಒಂದು ವರ್ಷದ ಅವಧಿಗೆ ಶೇ. 30ರಷ್ಟು ಕಡಿತ ಮಾಡಲು ನಿರ್ಧಾರ ಮಾಡಿದೆ. ಅದೇ ರೀತಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯನ್ನ ಕೂಡ 2 ವರ್ಷಗಳ ಕಾಲ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಈ ಎರಡು ವರ್ಷದ ಒಟ್ಟು 7,900 ಕೋಟಿ ರೂಪಾಯಿಯನ್ನ ಕೊರೋನಾ ವಿರುದ್ಧದ ಹೋರಾಟಕ್ಕೆ ಬಳಸಿಕೊಳ್ಳೋದಾಗಿ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ.
ಸಂಸದರ ವೇತನ, ಭತ್ಯೆ ಹಾಗೂ ಪಿಂಚಣಿ ಕುರಿತ 1954ರ ಕಾಯ್ದೆಗೆ ತಿದ್ದುಪಡಿ ಮಾಡುವ ಸುಗ್ರೀವಾಜ್ಞೆಯನ್ನ ಕೇಂದ್ರ ಸಚಿವ ಸಂಪುಟ ಅಂಗೀಕರಿಸುವ ಮೂಲಕ ಈ ನಿರ್ಧಾರ ಕೈಗೊಂಡಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಎಲ್ಲಾ ರಾಜ್ಯಗಳ ರಾಜ್ಯಪಾಲರು ಕೂಡ ಸ್ವಯಂಪ್ರೇರಣೆಯಿಂದ ವೇತನ ಕಡಿತವನ್ನ ಸಾಮಾಜಿಕ ಜವಾಬ್ದಾರಿಯಾಗಿ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಅಂತ ಜಾವ್ಡೇಕರ್ ಹೇಳಿದ್ರು.
ಕೆಲ ಸಂಸದರು ತಮ್ಮ ವೈಯಕ್ತಿಕ ಹಣದ ಬದಲಾಗಿ ಸಂಸದರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ಪಿಎಂ ಕೇರ್ಸ್ ನಿಧಿಗೆ ಧನಸಹಾಯ ನೀಡುತ್ತಿದ್ದರು. ಇದೀಗ ಕೇಂದ್ರ ಸರ್ಕಾರ ಅದಕ್ಕೂ ಬ್ರೇಕ್ ಹಾಕಿದಂತಾಗಿದೆ.
-masthmagaa.com
Contact Us for Advertisement