masthmagaa.com:
ಬಿಹಾರ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಬಗ್ಗೆ ಅವರ ಕುಟುಂಬಸ್ಥರಲ್ಲಿ ಅನುಮಾನ ಮೂಡಿದೆ. ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಪೊಲೀಸರು ಪ್ರಕರಣದ ತನಿಖೆ ನಡೆಸಬೇಕು. ಆತನ ಸಾವಿನ ಹಿಂದೆ ಸಾಕಷ್ಟು ಅನುಮಾನಗಳಿವೆ. ಅವನನ್ನು ಕೊಲೆ ಮಾಡಲಾಗಿದೆ ಅಂತ ಸುಶಾಂತ್ ಅವರ ಅಂಕಲ್ ಹೇಳಿದ್ದಾರೆ.
ಮತ್ತೊಬ್ಬ ಸಂಬಂಧಿ ಮತ್ತು ಬಿಹಾರ ಬಿಜೆಪಿ ಶಾಸಕರಾಗಿರುವ ನೀರಜ್ ಕುಮಾರ್ ಸಿಂಗ್ ಬಬ್ಲೂ ಮಾತನಾಡಿದ್ದು, ಸುಶಾಂತ್ ಸಿಂಗ್ ರಜಪೂತ್ ಇಲ್ಲ ಅನ್ನೋದನ್ನ ನಂಬೋಕೆ ಆಗ್ತಿಲ್ಲ. ಅಗತ್ಯವಿದ್ದರೆ ತನಿಖೆ ನಡೆಸಲು ಆಗ್ರಹಿಸುತ್ತೇವೆ ಎಂದಿದ್ದಾರೆ.
ಇನ್ನು ಜನ್ ಅಧಿಕಾರ್ ಪಕ್ಷದ ಮುಖ್ಯಸ್ಥ ಪಪ್ಪು ಯಾದವ್ ಪ್ರಕಾರ, ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಮಾಡಿಕೊಳ್ಳಲು ಸಾಧ್ಯವಿಲ್ಲ. ಅವನನ್ನು ಕೊಲೆ ಮಾಡಲಾಗಿದೆ. ಹೀಗಾಗಿ ಪ್ರಕರಣ ಸಂಬಂಧ ಸಿಬಿಐ ತನಿಖೆ ನಡೆಯಬೇಕು ಎಂದಿದ್ದಾರೆ.
ಬಿಹಾರದ ಪಾಟ್ನಾದಲ್ಲಿದ್ದ ಸುಶಾಂತ್ ಸಿಂಗ್ ಅವರ ತಂದೆ ಮತ್ತು ಕುಟುಂಬಸ್ಥರು ಮುಂಬೈಗೆ ಹೊರಟಿದ್ದು, ಮುಂಬೈನಲ್ಲೇ ಅಂತ್ಯ ಸಂಸ್ಕಾರ ನಡೆಸಲು ನಿರ್ಧರಿಸಿದ್ದಾರೆ. ಇತ್ತ ಮುಂಬೈನ ಡಾ.ಆರ್.ಎನ್. ಕೂಪರ್ ಮುನಿಸಿಪಲ್ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮರಣೋತ್ತರ ಪರೀಕ್ಷೆಯ ವರದಿಗಾಗಿ ಕಾಯಲಾಗುತ್ತಿದೆ.
-masthmagaa.com
Contact Us for Advertisement