masthmagaa.com:
ಬಿಹಾರದ ನೂತನ ಶಾಸಕರಿಗೆ ಸೋಮವಾರ ಪ್ರಮಾಣ ವಚನ ಬೋಧಿಸುವ ವೇಳೆ ಉರ್ದು ಶಪಥದಲ್ಲಿದ್ದ ‘ಹಿಂದೂಸ್ತಾನ್’ ಎಂಬ ಪದದ ಬಗ್ಗೆ ವಿವಾದ ಮಾಡಲಾಗಿದೆ. ಹಿಂದೂಸ್ತಾನ್ ಪದ ಬದಲಿಸಿ ‘ಭಾರತ್’ ಎಂದು ಮಾಡುವಂತೆ ಅಸಾದುದ್ದಿನ್ ಓವೈಸಿ ಅವರ ಎಐಎಂಐಎಂ ಪಕ್ಷದ ಶಾಸಕ ಅಖ್ತರುಲ್ ಇಮಾನ್ ಒತ್ತಾಯಿಸಿದ್ರು. ಈ ಬೇಡಿಕೆ ಕಂಡು ಆಶ್ಚರ್ಯಗೊಂಡ ಹಂಗಾಮಿ ಸ್ಪೀಕರ್ ಜಿತನ್ ರಾಮ್ ಮಾಂಜಿ, ‘ಈವರೆಗೆ ಉರ್ದುನಲ್ಲಿ ಪ್ರಮಾಣ ವಚನ ಸ್ವೀಕರಿಸಿದವರು ಹಿಂದೂಸ್ತಾನ್ ಎಂದೇ ಹೇಳಿದ್ದಾರೆ’ ಅಂದ್ರು. ಆದರೂ ಅಖ್ತರುಲ್ ಹಠ ಹಿಡಿದ ಕಾರಣ ‘ಹಿಂದೂಸ್ತಾನ್’ ಬದಲಿಗೆ ‘ಭಾರತ್’ ಎಂದು ಹೇಳಲು ಸ್ಪೀಕರ್ ಪರ್ಮಿಶನ್ ಕೊಟ್ರು. ಈ ಅಖ್ತರುಲ್ ಬಿಹಾರದಲ್ಲಿ ಎಐಎಂಐಎಂ ಪಕ್ಷದ ರಾಜ್ಯಾಧ್ಯಕ್ಷ ಕೂಡ ಹೌದು. ಯಾಕ್ರೀ ಸ್ವಾಮಿ ನಿಮಗೆ ಹಿಂದೂಸ್ತಾನ್ ಅಂದ್ರೆ ಏನ್ ಕಷ್ಟ ಅಂತ ಕೇಳಿದ್ರೆ, ‘ನಾವು ಯಾವುದೇ ಭಾಷೆಯಲ್ಲಿ ಸಂವಿಧಾನದ ಮುನ್ನುಡಿ ಓದಿದರೂ, ಅಲ್ಲಿ ಭಾರತ್ ಎಂಬ ಪದವನ್ನು ಉಲ್ಲೇಖಿಸಲಾಗಿರುತ್ತದೆ. ಇದನ್ನೇ ನಾನು ಸರಳವಾಗಿ ಹೇಳಿದ್ದೇನೆ’ ಅಂತ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರೋ ಬಿಜೆಪಿ ಶಾಸಕ ನೀರಜ್ ಸಿಂಗ್ ಬಬ್ಲು, ‘ಹಿಂದೂಸ್ತಾನ್ ಎಂಬ ಪದದಲ್ಲಿ ಯಾರಿಗಾದರೂ ಆಕ್ಷೇಪಣೆಗಳಿದ್ದರೆ ಅವರು ಪಾಕಿಸ್ತಾನಕ್ಕೆ ಹೋಗಲಿ’ ಅಂತ ಹೇಳಿದ್ದಾರೆ.
-masthmagaa.com
Contact Us for Advertisement