masthmagaa.com:
ಮಹಾರಾಷ್ಟ್ರ: ರೈಲ್ವೆ ಹಳಿ ಮೇಲೆ ಮಲಗಿದ್ದ 20 ವಲಸೆ ಕಾರ್ಮಿಕರ ಮೇಲೆ ಗೂಡ್ಸ್ ರೈಲು ಹರಿದು 15 ಮಂದಿ ಮೃತಪಟ್ಟಿರುವ ದಾರುಣ ಘಟನೆ ಮಹಾರಾಷ್ಟ್ರದ ಔರಂಗಬಾದ್ ಬಳಿ ನಡೆದಿದೆ. ಉಳಿದ ಐವರಲ್ಲಿ ಒಬ್ಬ ವ್ಯಕ್ತಿಗೆ ಗಾಯವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನುಳಿದ ನಾಲ್ವರು ಶಾಕ್ಗೆ ಒಳಗಾಗಿದ್ದಾರೆ. ಹೀಗಾಗಿ ಅವರಿಗೆ ಕೌನ್ಸಿಲಿಂಗ್ ನೀಡಲಾಗ್ತಿದೆ ಅಂತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ದೇಶಾದ್ಯಂತ ಲಾಕ್ಡೌನ್ ಇರೋದ್ರಿಂದ ರೈಲುಗಳು ಸಂಚರಿಸೋದಿಲ್ಲ.. ರೈಲ್ವೆ ಹಳಿ ಮೇಲೆ ಹೋದ್ರೆ ಬೇಗ ಊರು ಸೇರಬಹುದು ಅಂದುಕೊಂಡ ವಲಸೆ ಕಾರ್ಮಿಕರು ಮಧ್ಯಪ್ರದೇಶದತ್ತ ಕಾಲ್ನಡಿಗೆಯಲ್ಲಿ ಹೊರಟಿದ್ದಾರೆ. ದಾರಿಮಧ್ಯೆ ವಿಶ್ರಾಂತಿ ಪಡೆಯಲು ರೈಲ್ವೆ ಹಳಿ ಮೇಲೆಯೇ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಬೆಳಗಿನಜಾವ 5.15ಕ್ಕೆ ಬಂದ ಗೂಡ್ಸ್ ರೈಲು ಅವರ ಮೇಲೆ ಹರಿದಿದೆ ಅಂತ ಪೊಲೀಸರು ಹೇಳಿದ್ದಾರೆ.
ರೈಲ್ವೆ ಹಳಿ ಮೇಲೆ ವಲಸೆ ಕಾರ್ಮಿಕರ ಬಟ್ಟೆ, ಚಪ್ಪಲಿ, ದಾರಿಯುದ್ಧಕ್ಕೂ ತಿನ್ನಲು ಇಟ್ಟುಕೊಂಡಿದ್ದ ರೊಟ್ಟಿ ಅನಾಥವಾಗಿ ಬಿದ್ದಿರೋ ದೃಶ್ಯಗಳು ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿವೆ.
ರೈಲ್ವೆ ಹಳಿ ಮೇಲೆ ವಲಸೆ ಕಾರ್ಮಿಕರನ್ನು ಗಮನಿಸಿದ ಲೋಕೊ ಪೈಲಟ್ ರೈಲನ್ನು ನಿಲ್ಲಿಸಲು ಪ್ರಯತ್ನಿಸಿದ್ದಾನೆ. ಆದ್ರೆ ದುರದೃಷ್ಟವಶಾತ್ ರೈಲು ಅವರಿಗೆ ಡಿಕ್ಕೆ ಹೊಡೆದಿದೆ ಅಂತ ರೈಲ್ವೆ ಇಲಾಖೆ ಟ್ವೀಟ್ ಮಾಡಿದೆ.
-masthmagaa.com
Contact Us for Advertisement