masthmagaa.com:
ಜನವರಿ ತಿಂಗಳ ಯಾವುದೇ ವಾರದಲ್ಲಾದ್ರೂ ಭಾರತದಲ್ಲಿ ಕೊರೋನಾ ಲಸಿಕೆಯ ಅಭಿಯಾನ ಶುರುವಾಗಬಹುದು ಅಂತ ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ‘ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆ ಹಾಕಬೇಕು ಅನ್ನೋದಕ್ಕೆ ನಾವು ಮೊದಲ ಆದ್ಯತೆ ಕೊಟ್ಟಿದ್ದೇವೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ. ತಜ್ಞರ ಜೊತೆ ಮಾತುಕತೆ ನಡೆಸಿದ್ದು 30 ಕೋಟಿ ಜನರಿಗೆ ಲಸಿಕೆ ಹಾಕಲು ಮೊದಲ ಆದ್ಯತೆ ನೀಡಲಾಗಿದೆ. ಆರೋಗ್ಯ ಕಾರ್ಯಕರ್ತರು, ಫ್ರಂಟ್ಲೈನ್ ವರ್ಕರ್ಸ್ (ಅಂದ್ರೆ ಪೊಲೀಸರು, ಯೋಧರು, ಸ್ಯಾನಿಟೈಸೇಷನ್ ಸಿಬ್ಬಂದಿ, ಇತ್ಯಾದಿ), 50 ವರ್ಷ ಮೇಲ್ಪಟ್ಟವರು, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೊದಲು ಲಸಿಕೆ ಹಾಕಲಾಗುತ್ತೆ. ನಮ್ಮ ಆದ್ಯತೆ ಪಟ್ಟಿಯಲ್ಲಿರುವ ಎಲ್ಲರಿಗೂ ಲಸಿಕೆ ಹಾಕಬೇಕು ಅನ್ನೋದು ನಮ್ಮ ಉದ್ದೇಶ. ಲಸಿಕೆ ಬಗ್ಗೆ ಇರುವ ಅನುಮಾನಗಳನ್ನ ನಾವು ಬಗೆಹರಿಸುತ್ತೇವೆ. ಇದರ ನಂತರವೂ ಯಾರಾದ್ರೂ ಲಸಿಕೆ ಹಾಕಿಸಿಕೊಳ್ಳಲು ಹಿಂದೇಟು ಹಾಕಿದ್ರೆ ನಾವು ಅವರಿಗೆ ಬಲವಂತ ಮಾಡೋದಿಲ್ಲ’ ಅಂತ ಡಾ. ಹರ್ಷವರ್ಧನ್ ಹೇಳಿದ್ದಾರೆ. ಇನ್ನು ಪೋಲಿಯೊ ರೀತಿಯಲ್ಲಿ ಕೊರೋನಾವನ್ನು ನಿರ್ಮೂಲನೆ ಮಾಡಬಹುದೇ ಅಂತ ಕೇಳಿದ ಪ್ರಶ್ನೆಗೆ, ‘ಪೋಲಿಯೊವನ್ನ ನಿರ್ಮೂಲನೆ ಮಾಡಲು ವೈಜ್ಞಾನಿಕವಾಗಿ ಸಾಧ್ಯವಾಯ್ತು. ಕೊರೋನಾ ವೈರಸ್ ಕೂಡ ಕಡಿಮೆಯಾಗುತ್ತೆ. ದೇಶದಲ್ಲಿ ಕೆಲವೇ ಕೆಲವು ಕೊರೋನಾ ಸೋಂಕಿನ ಪ್ರಕರಣಗಳು ವರದಿಯಾಗುವ ದಿನಗಳು ಬರುತ್ತವೆ’ ಅಂತ ಕೇಂದ್ರ ಆರೋಗ್ಯ ಸಚಿವರು ಹೇಳಿದ್ದಾರೆ.
-masthmagaa.com
Contact Us for Advertisement