masthmagaa.com:
ಕೊರೋನಾ ಹಾವಳಿಯಿಂದ ಬಂದ್ ಆಗಿರುವ ಶಾಲೆ ಮತ್ತು ಪಿಯು ಕಾಲೇಜುಗಳನ್ನ ಡಿಸೆಂಬರ್ವರೆಗೂ ತೆರೆಯೋದಿಲ್ಲ ಅಂತ ರಾಜ್ಯ ಸರ್ಕಾರ ಘೋಷಿಸಿದೆ. ಅದ್ರಲ್ಲೂ 1ರಿಂದ 8ನೇ ತರಗತಿವರೆಗಿನ ಮಕ್ಕಳಿಗೆ ಪ್ರಸಕ್ತ ಶೈಕ್ಷಣಿಕ ವರ್ಷವನ್ನ ಶುರು ಮಾಡೋ ಚಿಂತನೆಯೇ ಇಲ್ಲ. ಆದ್ರೆ 10ನೇ ತರಗತಿಗೆ ಬೋರ್ಡ್ ಎಕ್ಸಾಂ ಇರೋದ್ರಿಂದ ಮತ್ತು ಸಿಇಟಿ ಮುಂತಾದ ಪರೀಕ್ಷೆಗಳಿಗೆ ಪಿಯುಸಿ ಆಧಾರವಾಗಿರೋದ್ರಿಂದ SSLC ಮತ್ತು PUC ತರಗತಿಗಳನ್ನ ಡಿಸೆಂಬರ್ ನಂತರದಲ್ಲಿ ತೆರೆಯುವ ಬಗ್ಗೆ ಡಿಸೆಂಬರ್ ಮೂರನೇ ವಾರದಲ್ಲಿ ಸಭೆ ಸೇರಿ ನಿರ್ಧಾರ ಕೈಗೊಳ್ಳುತ್ತೇವೆ ಅಂತ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಹೇಳಿದ್ದಾರೆ.
ಇದಕ್ಕೂ ಮೊದಲು ಶಾಲೆಗಳನ್ನ ಡಿಸೆಂಬರ್ವರೆಗೂ ಆರಂಭ ಮಾಡೋದು ಬೇಡ ಅಂತ ರಾಜ್ಯ ಸರ್ಕಾರಕ್ಕೆ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿತ್ತು. ರಾಜ್ಯ ಸರ್ಕಾರ ಕೂಡ ಈ ಸಮಿತಿಯ ಶಿಫಾರಸಿಗೆ ಅಸ್ತು ಎಂದಿದೆ. ರಾಜ್ಯದಲ್ಲಿ ನವೆಂಬರ್ 17ರಿಂದ ಸ್ನಾತಕೋತ್ತರ ಮತ್ತು ಅಂತಿಮ ವರ್ಷದ ಪದವಿ ಕಾಲೇಜುಗಳು ಆರಂಭವಾಗಿವೆ. ಕಾಲೇಜು ಆರಂಭವಾದ ಬಳಿಕ ನಡೆಸಿದ ಕೊರೋನಾ ಪರೀಕ್ಷೆಗಳ ಪೈಕಿ ಬೆಂಗಳೂರಿನಲ್ಲಿ ಸುಮಾರು 150ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಸೋಂಕು ದೃಢಪಟ್ಟಿದೆ. ಮತ್ತೊಂದುಕಡೆ ಕೆಲ ರಾಜ್ಯಗಳಲ್ಲಿ ಶಾಲೆಗಳನ್ನ ತೆರೆದ ಬಳಿಕ ಮಕ್ಕಳು ಮತ್ತು ಶಿಕ್ಷಕರಿಗೂ ಸೋಂಕು ತಗುಲಿದ ಹಿನ್ನೆಲೆ ಶಾಲೆಗಳನ್ನ ಮತ್ತೆ ಬಂದ್ ಮಾಡಲಾಗಿದೆ. ಈ ಎಲ್ಲಾ ವಿಚಾರಗಳನ್ನ ಗಮನದಲ್ಲಿಟ್ಟುಕೊಂಡು ರಾಜ್ಯದಲ್ಲಿ ಈ ವರ್ಷ ಶಾಲೆಗಳನ್ನ ತೆರೆಯದಿರಲು ಸರ್ಕಾರ ಅಂತಿಮ ನಿರ್ಧಾರ ಕೈಗೊಂಡಿದೆ.
-masthmagaa.com
Contact Us for Advertisement