masthmagaa.com:
ಕರ್ನಾಟಕದಲ್ಲಿ ಲವ್ ಜಿಹಾದ್ಗೆ ಅಂತ್ಯ ಹಾಡಲು ಸೂಕ್ತ ಕ್ರಮಗಳನ್ನ ಕೈಗೊಳ್ಳುತ್ತೇವೆ ಅಂತ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಮಂಗಳೂರಿನಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದ ಅವರು, ‘ಲವ್ ಜಿಹಾದ್ ಹೆಸರಿನಲ್ಲಿ ಮತಾಂತರವಾಗುವುದನ್ನ ನೋಡಿದ್ದೀವಿ. ನಾನು ಇಲ್ಲಿಗೆ ಬರುವ ಮುನ್ನ ಇದರ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿದ್ದೀನಿ. ಬೇರೆ ರಾಜ್ಯದವರು ಏನು ಮಾಡುತ್ತಾರೋ ಗೊತ್ತಿಲ್ಲ. ಆದ್ರೆ ಕರ್ನಾಟಕದಲ್ಲಿ ಮಾತ್ರ ನಾವು ಇದಕ್ಕೆ ಅಂತ್ಯ ಹಾಡುತ್ತೇವೆ. ಹಣ ಅಥವಾ ಪ್ರೀತಿಯ ಹೆಸರಲ್ಲಿ ಹೆಣ್ಣು ಮಕ್ಕಳಿಗೆ ಆಮಿಷ ಒಡ್ಡುವುದನ್ನ ನಾವು ಗಂಭೀರವಾಗಿ ಪರಿಗಣಿಸುತ್ತೇವೆ. ಇದನ್ನ ಕೊನೆಗೊಳಿಸಲು ಕಠಿಣ ಕ್ರಮಗಳನ್ನ ತೆಗೆದುಕೊಳ್ಳುತ್ತೇವೆ’ ಅಂತ ಸಿಎಂ ಬಿಎಸ್ವೈ ಹೇಳಿದ್ದಾರೆ.
ಈ ಮೂಲಕ ಲವ್ ಜಿಹಾದ್ ವಿರುದ್ಧ ಕಾನೂನು ತರಲು ಮುಂದಾಗಿರುವ ಉತ್ತರಪ್ರದೇಶ, ಮಧ್ಯಪ್ರದೇಶ ಮತ್ತು ಹರಿಯಾಣ ರಾಜ್ಯಗಳ ಸಾಲಿಗೆ ಈಗ ಕರ್ನಾಟಕ ಕೂಡ ಸೇರಿಕೊಂಡಿದೆ. ಮದುವೆಗಾಗಿ ಮತಾಂತರವಾಗುವುದು ಕಾನೂನುಬಾಹಿರ ಅಂತ ಇತ್ತೀಚೆಗೆ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿತ್ತು. ಇದರ ಬೆನ್ನಲ್ಲೇ ದೇಶದ ವಿವಿಧ ರಾಜ್ಯಗಳು ಲವ್ ಜಿಹಾದ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರಲು ಚಿಂತನೆ ನಡೆಸಿವೆ.
-masthmagaa.com
Contact Us for Advertisement