masthmagaa.com:
ಪಶ್ಚಿಮ ಬಂಗಾಳ: ರಾಜ್ಯದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬಿಜೆಪಿ ಈಗಿಂದಲೇ ಫೌಂಡೇಷನ್ ಹಾಕೋಕೆ ಶುರು ಮಾಡಿದೆ. ಚುನಾವಣೆಗೆ ಪಕ್ಷದ ಸಿದ್ಧತೆಯನ್ನು ಗಮನಿಸಲು ಗೃಹಸಚಿವ ಅಮಿತ್ ಶಾ ಇಂದು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದಾರೆ. ಎರಡು ದಿನಗಳ ಈ ಪ್ರವಾಸದಲ್ಲಿ ಪಕ್ಷ ಸಂಘಟನೆ ಕುರಿತು ಸಭೆ ನಡೆಸಲಿದ್ದಾರೆ. ಅದರಲ್ಲೂ ಪಶ್ಚಿಮ ಬಂಗಾಳದಲ್ಲಿ ಆಡಳಿತರೂಢ ತೃಣಮೂಲ ಕಾಂಗ್ರೆಸ್ ಪಕ್ಷದಲ್ಲಿ ಬಂಡಾಯ ಭುಗಿಲೆದ್ದ ಸಮಯದಲ್ಲೇ ಅಮಿತ್ ಶಾ ಭೇಟಿ ಮತ್ತಷ್ಟು ಮಹತ್ವ ಪಡೆದುಕೊಂಡಿದೆ. ಪಶ್ಚಿಮ ಬಂಗಾಳದ ಸಂಪುಟ ಸಚಿವ ಸ್ಥಾನ ಬಿಟ್ಟಿರೋ ಶುಬೇಂದು ಅಧಿಕಾರಿ, ಶೀಲ್ಭದ್ರ ದತ್ತಾ ಮತ್ತು ಜಿತೇಂದ್ರ ತಿವಾರಿಯಂತಹ ಟಿಎಂಸಿಯ ಕೆಲ ಅಸಮಾಧಾನಗೊಂಡ ನಾಯಕರು ಬಿಜೆಪಿ ಸೇರಲಿದ್ದಾರೆ.
ಮೊದಲಿಗೆ ಎನ್ಐಎ ಅಧಿಕಾರಿಗಳ ಜೊತೆ ಸಭೆ ನಡೆಸಲಿರುವ ಅಮಿತ್ ಶಾ, ನಂತರದಲ್ಲಿ ಉತ್ತರ ಕೋಲ್ಕತ್ತಾಗೆ ತೆರಳಿ ಸ್ವಾಮಿ ವಿವೇಕಾನಂದರಿಗೆ ಶ್ರದ್ಧಾಂಜಲಿ ಸಲ್ಲಿಸಲಿದ್ದಾರೆ. ಅಲ್ಲಿಂದ ಮಿದ್ನಾಪುರ್ಗೆ ತೆರಳಿ ಕ್ರಾಂತಿಕಾರಿ ಖುದಿರಾಮ್ ಬೋಸ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಿದ್ದಾರೆ. ಇದಾದ ಬಳಿಕ ಮಿದ್ನಾಪುರ ಕಾಲೇಜು ಮೈದಾನದಲ್ಲಿ ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಾವೇಶದಲ್ಲಿ ಟಿಎಂಸಿಯ ಬಂಡಾಯ ನಾಯಕರು ಭಾಗಿಯಾಗಲಿದ್ದಾರೆ.
ಈ ಹಿಂದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದಾಗ ಅವರ ಬೆಂಗಾವಲು ವಾಹನದ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಇದು ಟಿಎಂಸಿ ಮತ್ತು ಬಿಜೆಪಿ ನಡುವಿನ ಹಗ್ಗಜಗ್ಗಾಟಕ್ಕೆ ಕಾರಣವಾಗಿತ್ತು.
-masthmagaa.com
Contact Us for Advertisement