masthmagaa.com:
ಪಶ್ಚಿಮ ಬಂಗಾಳದ ಕದನಕಣದಲ್ಲಿ ಪ್ರಧಾನಿ ಮೋದಿ ದುರ್ಗಾಪೂಜೆಯ ರಣಕಹಳೆ ಮೊಳಗಿಸಲು ಸಜ್ಜಾಗಿದ್ದಾರೆ. ಈ ದುರ್ಗಾಪೂಜೆಯೇ ಈಗ ಆಡಳಿತ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಮತ್ತು ಬದ್ಧ ವಿರೊಧಿ ಬಿಜೆಪಿ ನಡುವೆ ಮತ್ತೆ ರಾಜಕೀಯ ಯುದ್ಧ ಭೂಮಿಯಾಗಿ ಪರಿವರ್ತನೆಯಾಗುವ ಎಲ್ಲಾ ಲಕ್ಷಣ ಗೋಚರವಾಗುತ್ತಿದೆ. 2021ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿಯಿಂದ ದುರ್ಗಾ ಪೂಜೆಯನ್ನ ಉದ್ಘಾಟಿಸಲು ಬಿಜೆಪಿ ಪ್ಲಾನ್ ಮಾಡಿದೆ.
ಕಳೆದ ವರ್ಷ ಕೋಲ್ಕತ್ತಾ ಸಾಲ್ಟ್ ಲೇಕ್ನಲ್ಲಿ ಅಮಿತ್ ಶಾ ದುರ್ಗಾಪೂಜೆಗೆ ಚಾಲನೆ ನೀಡಿದ್ದರು. ಇದೇ ಕಾರಣಕ್ಕೆ ಕಮಿಟಿಯವರು ಮತ್ತು ಸುತ್ತಮುತ್ತಲಿನ ಜನ ಇಬ್ಭಾಗವಾಗಿದ್ದರು. ಆದ್ರೆ ಈ ಬಾರಿ ಬಿಜೆಪಿಯವರೇ ದುರ್ಗಾ ಪೂಜೆ ಆಯೋಜಿಸಲು ಮುಂದಾಗಿದ್ದಾರೆ. ಅಲ್ಲದೆ ಪ್ರಧಾನಿ ಮೂಲಕ ಅದನ್ನು ಉದ್ಘಾಟಿಸಲು ನಿರ್ಧರಿಸಿದ್ದಾರೆ. ಅಕ್ಟೋಬರ್ 22ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮೋದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಿಎಂ ಮಮತಾ ಬ್ಯಾನರ್ಜಿ ಈಗಾಗಲೇ ವಿಡಿಯೋ ಕಾನ್ಫರೆನ್ಸ್ ಮೂಲಕ 69 ದುರ್ಗಾಪೂಜೆ ಪೆಂಡಲ್ಗಳನ್ನ ಉದ್ಘಾಟಿಸಿದ್ದಾರೆ.
ಅಂದ್ಹಾಗೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಉತ್ತಮ ಪ್ರದರ್ಶನ ನೀಡಿತ್ತು. ಹೀಗಾಗಿ ಆಡಳಿತ ಪಕ್ಷ ಟಿಎಂಸಿ ಮತ್ತು ಎಡಪಕ್ಷಗಳ ನಡುವಿನ ಯುದ್ಧ ಈಗ ಟಿಎಂಸಿ v/s ಬಿಜೆಪಿಯಾಗಿ ಪರಿವರ್ತನೆಯಾಗಿದೆ. ಮಮತಾ ಬ್ಯಾನರ್ಜಿ ಕೋಟೆಯನ್ನ ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದ್ರೆ, ಕೋಟೆಯನ್ನು ಉಳಿಸಿಕೊಳ್ಳಲು ಮಮತಾ ಬ್ಯಾನರ್ಜಿ ಹರಸಾಹಸ ಪಡುತ್ತಿದ್ದಾರೆ.
-masthmagaa.com
Contact Us for Advertisement