ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ನಮ್ಮನ್ನೆಲ್ಲ ಆಗಲಿ 20ಕ್ಕೂ ಹೆಚ್ಚು ದಿನಗಳು ಕಳೆದಿವೆ. ಪುನೀತ್ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ಅಷ್ಟೇ ಅಲ್ಲದೇ ಇಡೀ ಕರ್ನಾಟಕ ಜನತೆಗೆ ತುಂಬಲಾರದ ನಷ್ಟ! ಈ ಸಂದರ್ಭದಲ್ಲಿ ಪುನೀತ್ ರಾಜ್ಕುಮಾರ್ ಅವರಿಗೆ ಸ್ವತಃ ಪ್ರಧಾನಿ ಮೋದಿ ಬಿಜೆಪಿ ಪಕ್ಷ ಸೇರಿಕೊಳ್ಳುವಂತೆ ಆಹ್ವಾನ ನೀಡಿದ್ದರು. ಆದರೆ ಅವರ ಆಹ್ವಾನವನ್ನ ಪುನೀತ್ ರಾಜ್ಕುಮಾರ್ ನಯವಾಗಿಯೇ ನಿರಾಕರಿಸಿದ್ದರು ಎಂಬ ವಿಷಯ ಬಹಿರಂಗ ಆಗಿದೆ. ಹೀಗಂತ ಹೇಳಿದ್ದು ಬೇರೆ ಯಾರೂ ಅಲ್ಲ ಪುನೀತ್ ಆಪ್ತ, ಮತ್ತು ಅವರ ಪ್ರೊಡಕ್ಷನ್ ಮ್ಯಾನೇಜರ್ ಎನ್.ಎಸ್. ರಾಜ್ಕುಮಾರ್.
ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ಎನ್. ಎಸ್ ರಾಜಕುಮಾರ್ ಪುನೀತ್ರನ್ನ ರಾಜಕೀಯಕ್ಕೆ ಕರೆತರಲು ಬಿಜೆಪಿ ನಾಯಕರು ತುಂಬಾ ಪ್ರಯತ್ನ ಪಟ್ಟಿದ್ದರು, ಕಳೆದ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್, ಚಿತ್ರನಟ ಹಾಗೂ ಬಿಜೆಪಿ ಮುಖಂಡ ಜಗ್ಗೇಶ್ ಮತ್ತು ನಿರ್ಮಾಪಕ ಎಸ್.ವಿ. ಬಾಬು ಅವರು ಪುನೀತ್ ಅವರನ್ನು ಭೇಟಿ ಮಾಡಿ, ರಾಜಕೀಯಕ್ಕೆ ಬರುವಂತೆ ಕೋರಿದ್ದರು. ಆಗ ಅಪ್ಪು ’‘ನನಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲ, ನಾನು ನನ್ನ ತಂದೆಯ ಹಾದಿಯಲ್ಲಿಯೇ (ಡಾ.ರಾಜ್ಕುಮಾರ್) ಸಾಗುತ್ತೇನೆ ಎಂದು ಸ್ಪಷ್ಟವಾಗಿ ಹೇಳಿ ಕಳುಹಿಸಿದರು’ ಎಂದು ಪುನೀತ್ ಆಪ್ತ ಎನ್ ಎಸ್ ರಾಜಕುಮಾರ್ ಹೇಳಿಕೊಂಡಿದ್ದಾರೆ.
ಹಾಗೆ ಮುಂದುವರಿದು ಮಾತನಾಡಿರುವ ಎನ್ ಎಸ್ ರಾಜಕುಮಾರ್ “ಇದರ ನಂತರ ಅಂದ್ರೆ ಸಂತೋಷ್ ಅವರು ಬಂದು ಹೋಗಿ ಸುಮಾರು 20 ದಿನಗಳ ನಂತರ, ಬಿಜೆಪಿ ಮುಖಂಡರಾದ ಗುಜರಾತ್ನ ಬಿ.ವಿ.ಎಸ್. ಶರ್ಮಾ ಹಾಗೂ ಆಂಧ್ರಪ್ರದೇಶದ ಸೋಮು ವಿ. ರಾಜು ಮತ್ತು ನಿರ್ಮಾಪಕ ಎಸ್.ವಿ. ಬಾಬು ಬಂದು ನನ್ನನ್ನು ಭೇಟಿಯಾದರು. ಎಲ್ಲ ನಟರೂ ಬಿಜೆಪಿಗೆ ಬೆಂಬಲ ನೀಡುತ್ತಿದ್ದಾರೆ. ನೀವು ಕೂಡ ಪುನೀತ್ ಅವರನ್ನು ಒಪ್ಪಿಸಿ ಎಂದರು. ಆಗ ನಾನು ಈ ವಿಷಯದಲ್ಲಿ ಅವರನ್ನು ಒಪ್ಪಿಸುವುದು ಸಾಧ್ಯವೇ ಇಲ್ಲ ಅಂತ ಹೇಳಿ ಕಳುಹಿಸಿದೆ’ ಎಂದು ರಾಜ್ಕುಮಾರ್ ಹೇಳಿದ್ದಾರೆ.
‘ಕೊನೆಗೆ, ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಅನಿಲ್ ಎಂಬುವರ ಮೂಲಕವೂ ಪುನೀತ್ರಿಗೆ ಆಹ್ವಾನ ನೀಡಲಾಯಿತು. ನೀವು ರಾಜಕೀಯಕ್ಕೆ ಬರುವುದೇನೂ ಬೇಡ, ಆದರೆ, ಒಂದು ಬಾರಿ ನರೇಂದ್ರ ಮೋದಿಯವರನ್ನು ದೆಹಲಿಗೆ ಬಂದು ಭೇಟಿ ಮಾಡಿ ಎಂದು ಮನವಿ ಮಾಡಿದಾಗಲೂ ಅಪ್ಪು ಅದನ್ನು ನಿರಾಕರಿಸಿದ್ದರು. ಅಷ್ಟೇ ಅಲ್ಲದೇ ನಮಗೆ ಎಲ್ಲ ಪಕ್ಷದವರೂ ಬೇಕಾದವರೇ, ಸಿದ್ದರಾಮಯ್ಯ, ಎಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ ಎಲ್ಲರೂ ಬೇಕು. ಎಲ್ಲ ಪಕ್ಷಗಳಲ್ಲಿಯೂ ನಮ್ಮ ಅಭಿಮಾನಿಗಳಿದ್ದಾರೆ. ಮೋದಿಯವರನ್ನು ಭೇಟಿಯಾದರೆ ಅದು ರಾಜಕೀಯವಾಗುತ್ತದೆ ಎಂದು ಅಪ್ಪು ಪುನರುಚ್ಚರಿಸಿದ್ದರು’ ಎಂದು ಎನ್ ಎಸ್ ರಾಜಕುಮಾರ್ ಮಾಹಿತಿ ನೀಡಿದ್ದಾರೆ.
ಹೀಗೆ ಕಡೆಗೂ ಪ್ರಧಾನಿ ಮೋದಿ ಹಾಗೂ ಪುನೀತ್ ರಾಜ್ ಕುಮಾರ್ ಭೇಟಿಗೆ ಮುಹೂರ್ತ ಕೂಡಿಬಂದಿದ್ದು, 2018ರ ಮೇ 03ನೇ ತಾರೀಖು. ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ಮತದಾನಕ್ಕೂ ಜಸ್ಟ್ 9 ದಿನ ಮೊದಲು. ಚುನಾವಣಾ ಪ್ರಚಾರ ಮುಗಿಸಿ ಪಿಎಂ ಮೋದಿ ದಿಲ್ಲಿಗೆ ಹಾರುವ ಕೆಲವೇ ಕ್ಷಣಗಳ ಮುನ್ನ ಬೆಂಗಳೂರಿನ ಎಚ್ಎಎಲ್ ಏರ್ ಪೋರ್ಟ್ ನಲ್ಲಿ ಪ್ರಧಾನಿಯವರನ್ನು ಅಪ್ಪು ಮತ್ತು ಅಶ್ವಿನಿಯವರು ಭೇಟಿಯಾದರು. ಈ ಬಗ್ಗೆ ಕೂಡ ಮಾತನಾಡಿರೋ ಅಪ್ಪು ಆಪ್ತ ರಾಜ್ಕುಮಾರ್, ‘ಆಗ ನಾನೂ ಜೊತೆಗಿದ್ದೆ. ಪ್ರಧಾನಿಯವರು ಸುಮಾರು 7 ನಿಮಿಷ ಮಾತನಾಡಿದರು. ನಿಮ್ಮಂಥ ಯುವಕರು ರಾಜಕೀಯಕ್ಕೆ ಬಂದರೆ ದೇಶ ಬದಲಾಗಲಿದೆ ಎಂದು ಹೇಳಿದರು. ಅಪ್ಪು ಮುಗುಳ್ನಕ್ಕು ವಂದನೆ ಸಲ್ಲಿಸಿ ಮರಳಿದರು’ ಅಂತ ಹೇಳಿಕೊಂಡಿದ್ದಾರೆ.
-masthmagaa.com
Contact Us for Advertisement