masthmagaa.com:
ಬಿಎಸ್ಪಿ ನಾಯಕ ರಾಜ್ಪಾಲ್ ಹತ್ಯೆಯ ಪ್ರಮುಖ ಸಾಕ್ಷಿಯಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅತೀಕ್ ಅಹ್ಮದ್ನ ಮಗ ಸೇರಿದಂತೆ ಇಬ್ಬರು ಆರೋಪಿಗಳನ್ನ ಯುಪಿ ಪೊಲೀಸರು ಅಲ್ಲಿನ ಝಾನ್ಸಿಯಲ್ಲಿ ಎನ್ಕೌಂಟರ್ ಮಾಡಿದ್ದಾರೆ. ಅಸಾದ್ ಅಹ್ಮದ್ ಹಾಗೂ ಗುಲಾಮ್ ಅನ್ನೊ ಆರೋಪಿಗಳು ಮೃತಪಟ್ಟಿದ್ದಾರೆ. ಈ ಮೂಲಕ ಪ್ರಕರಣದಲ್ಲಿ ಈವರೆಗೆ ಒಟ್ಟು 4 ಆರೋಪಿಗಳನ್ನ ಎನ್ಕೌಂಟರ್ನಲ್ಲಿ ಹತ್ಯೆ ಮಾಡಿದಂತಾಗಿದೆ. ಇತ್ತ ಇದೇ ಪ್ರಕರಣದಲ್ಲಿ ಅತೀಕ್ ಅಹ್ಮದ್ನನ್ನ ಪ್ರಯಾಗ್ರಾಜ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಲಯ ಅತೀಕ್ ಅಹ್ಮದ್ಗೆ 14 ದಿನಗಳ ನ್ಯಾಯಂಗ ಬಂಧನ ನೀಡಿ ಆದೇಶ ಹೊರಡಿಸಿದೆ. ಇನ್ನು ಅತೀಕ್ ಕೋರ್ಟ್ನಲ್ಲಿದ್ದಾಗಲೇ ಮಗನ ಎನ್ಕೌಂಟರ್ ಸುದ್ದಿ ತಿಳಿದುಬಂದಿದೆ ಎನ್ನಲಾಗಿದೆ. ಅಂದ್ಹಾಗೆ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯುಪಿ ವಿಧಾನಸಭೆಯಲ್ಲಿ ಯೋಗಿ ರೊಚ್ಚಿಗೆದ್ದು, ಮಾಫಿಯಾವನ್ನ ಮಣ್ಣು ಮಾಡ್ತೀನಿ ಅಂತ ಶಪಥ ಮಾಡಿದ್ರು. ಅದರಂತೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳನ್ನ ಸರದಿಯಲ್ಲಿ ಎನ್ಕೌಂಟರ್ ಮಾಡಿ ಹತ್ಯೆ ಮಾಡಲಾಗ್ತಿದೆ. ಹೀಗಾಗಿಯೇ ಜೈಲಿನಿಂದ ಹೊರ ಬಂದ್ರೆ ಎನ್ಕೌಂಟರ್ ಹೆಸರಿನಲ್ಲಿ ಹತ್ಯೆ ಮಾಡಲಾಗುತ್ತೆ ಅಂತ ಅತೀಕ್ ಆತಂಕದಲಿದ್ದು, ಜೈಲಿನಿಂದ ಕಳಿಸದಂತೆ ಬೇಡಿಕೊಂಡಿದ್ದ.) ಇತ್ತ ಆರೋಪಿಗಳ ಎನ್ಕೌಂಟರ್ಗೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಯೋಗಿ ಸರ್ಕಾರವನ್ನ ಟೀಕಿಸಿದ್ದಾರೆ. ನಿಜವಾದ ಸಮಸ್ಯೆಗಳಿಂದ ಜನರ ಗಮನವನ್ನ ಸೆಳೆಯಲು ಫೇಕ್ ಎನ್ಕೌಂಟರ್ ಅಸ್ತ್ರ ಬಳಸಲಾಗ್ತಿದೆ. ಬಿಜೆಪಿಗೆ ನ್ಯಾಯಾಲಯದ ಮೇಲೆ ಸ್ವಲ್ಪವೂ ನಂಬಿಕೆಯಿಲ್ಲ ಅಂತ ಆರೋಪಿಸಿದ್ದಾರೆ. ಇನ್ನು ಎನ್ಕೌಂಟರ್ ಬಳಿಕ ಉನ್ನತ ಮಟ್ಟದ ಸಭೆ ನಡೆಸಿರೊ ಯೋಗಿ, ಎನ್ಕೌಂಟರ್ನಲ್ಲಿ ಭಾಗಿಯಾಗಿದ್ದ ಅಧಿಕಾರಿಗಳ ತಂಡವನ್ನ ಪ್ರಶಂಸಿಸಿದ್ದಾರೆ ಎನ್ನಲಾಗಿದೆ.
-masthmagaa.com
Contact Us for Advertisement