masthmagaa.com:
ಕಳೆದ ವರ್ಷ ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಲಾಲ್ ಅವ್ರ ಬರ್ಬರ್ ಹತ್ಯೆ ಇಡೀ ದೇಶವನ್ನೇ ಬೆಚ್ಚಬೀಳಿಸಿತ್ತು. ಇದೀಗ ಅದೇ ರಾಜಸ್ಥಾನದಲ್ಲೇ ಅಂಥದ್ದೇ ಪ್ರಕರಣವೊಂದು ಮತ್ತೆ ಮರುಕಳಿಸಿದೆ. ಹಾಡಹಾಗಲೇ ದುಷ್ಕರ್ಮಿಗಳು ಮನೆಯಲ್ಲಿ ವ್ಯಕ್ತಿಗೆ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಎಲ್ಲ ಕಡೆ ವೈರಲ್ ಆಗ್ತಿದೆ. ರಾಜಸ್ಥಾನದ ಜೈಪುರ್ನಲ್ಲಿ ಇಂದು ಮಧ್ಯಾಹ್ನ ರಾಷ್ಟ್ರೀಯ ರಜ್ಪೂತ್ ಕಾರ್ಣಿ ಸೇನಾ ಸಂಸ್ಥೆಯ ನಾಯಕನ ಮನೆಗೆ ನುಗ್ಗಿದ ಹಂತಕರು ಮೂರ್ನಾಲ್ಕು ಸುತ್ತು ಗುಂಡು ಹಾರಿಸಿ ಆತನನ್ನು ಹತ್ಯೆ ಮಾಡಿದ್ದಾರೆ. ಸಂಘಟನೆಯ ಅಧ್ಯಕ್ಷ ಸುಖ್ದೇವ್ ಸಿಂಗ್ ಗೊಗಮೆದಿ ಅನ್ನೊ ವ್ಯಕ್ತಿ ಹತ್ಯೆಯಾದ ದುರ್ದೈವಿ. ಮನೆಯಲ್ಲಿ ಮೊಬೈಲ್ ನೋಡುತ್ತಾ ಕುಳಿತಿದ್ದ ಸುಖ್ದೇವ್ಗೆ ಗನ್ ಹಿಡಿದು ಬಂದ ಇಬ್ಬರು ವ್ಯಕ್ತಿಗಳು ಮೂರ್ನಾಲ್ಕು ಸುತ್ತು ಗುಂಡು ಹಾರಿಸಿದ್ದಾರೆ. ಒಟ್ಟು ನಾಲ್ಕು ಜನ್ರು ಮನೆಗೆ ನುಗ್ಗಿದ್ದು ಮನೆ ಹೊರಗಿದ್ದ ಸೆಕ್ಯೂರಿಟಿ ಗಾರ್ಡ್, ಮತ್ತೊಬ್ಬ ಸಹಾಯಕರ ಮೇಲೂ ಹಲ್ಲೆ ಮಾಡಿದ್ದಾರೆ ಅಂತ ರಾಜಸ್ತಾನ್ DGP ಉಮೇಶ್ ಮಿಶ್ರಾ ಹೇಳಿದ್ದಾರೆ. ಇನ್ನು ದಾಳಿಯ ಹೊಣೆಯನ್ನ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ನೋಯ್ ಬೆಂಬಲಿಗ ರೋಹಿತ್ ಗೊದಾರ ಅನ್ನೋನು ಹೊತ್ತುಕೊಂಡಿದ್ದಾನೆ. ಘಟನೆ ನಂತರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿರೊ ಈತ, ಹತ್ಯೆಗೆ ತಾನೇ ಕಾರಣೀಕರ್ತ ಅಂತ ಹೇಳಿಕೊಂಡಿದ್ದಾನೆ. ಅಂದ್ಹಾಗೆ ಹತ್ಯೆಗೆ ಕಾರಣ ಏನು ಅನ್ನೋದು ಈವರೆಗೂ ತಿಳಿದು ಬಂದಿಲ್ಲ. ಇತ್ತ ಸುಖ್ದೇವ್ ಸಿಂಗ್ ಹತ್ಯೆ ನಂತರ ರಾಜಸ್ಥಾನದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಹತ್ಯೆ ಮಾಡಿದವ್ರ ವಿರುದ್ಧ ತನಿಖೆಯನ್ನ ಆರಂಭಿಸಲಾಗಿದೆ ಅಂತ ಅಲ್ಲಿನ ಪೊಲೀಸರು ತಿಳಿಸಿದ್ದಾರೆ.
-masthmagaa.com
Contact Us for Advertisement