masthmagaa.com:
ಚುನಾವಣೆ ಹೊತ್ತಲ್ಲೇ ರಾಜ್ಯ ಕಾಂಗ್ರೆಸ್ಗೆ ದೊಡ್ಡ ತಲೆನೋವು ಶುರುವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಆಡಿಯೋ ಒಂದು ರಾಜಕೀಯ ವಲಯದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಗಿದೆ. ಕಾರ್ಯಕರ್ತರನ್ನ ದುಡ್ಡು ಕೊಟ್ಟು ಕರ್ಕೊಂಡು ಬರೋದಾಗಿ ಸಿದ್ದರಾಮಯ್ಯ ಹೇಳಿದಾರೆ ಅನ್ನೋ ಆಡಿಯೋವೊಂದು ಲೀಕ್ ಆಗಿದ್ದು ಬಿಜೆಪಿ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮಾಡಿದೆ. ಇದಕ್ಕೆ ಸಂಬಂಧಪಟ್ಟಂತೆ ಬಿಜೆಪಿ ತನ್ನ ಸೋಷಿಯಲ್ ಮೀಡಿಯಾ ಅಕೌಂಟ್ನಲ್ಲಿ ವಿಡಿಯೋವನ್ನ ಕೂಡ ಹಂಚಿಕೊಂಡಿದೆ. ಅದ್ರಲ್ಲಿ ಕಾಂಗ್ರೆಸ್ ನಾಯಕರಾದ ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳ್ಕರ್, ಹಾಗೂ ಸಿದ್ದರಾಮಯ್ಯ ಸೇರಿ ಇತರೆ ನಾಯಕರು ಇದ್ದಾರೆ. ಆಗ ಸಿದ್ದರಾಮಯ್ಯ ದ್ವನಿಯಿಂದ ʻಎಲೆಕ್ಷನ್ ಇರೋದ್ರಿಂದ ಕಾರ್ಯಕ್ರಮಕ್ಕೆ ಅವರೂ ಕೂಡ ಜನ ಸೇರಿಸ್ತಾರೆ. ಹೀಗಾಗಿ ಪ್ರತಿಯೊಬ್ಬರಿಗೂ 500 ರೂಪಾಯಿ ಕೊಟ್ಟು ಕರೆದುಕೊಂಡು ಬರಬೇಕು ಅಂತ ಹೇಳಲಾಗಿದೆ. ಮಾಹಿತಿಯ ಪ್ರಕಾರ ಬೆಳಗಾವಿಯಲ್ಲಿ ಶಿವಾಜಿ ಪ್ರತಿಮೆ ಉದ್ಘಾಟನೆಗೆ ಸಮಾರಂಭಕ್ಕೆ ಅಂತ ಜನರನ್ನ ಸೇರಿಸುವ ಸಂಬಂಧ ಲಕ್ಷ್ಮೀ ಹೆಬ್ಬಾಳ್ಕರ್ ಅವರು ತಮ್ಮ ನಾಯಕರ ಜೊತೆಗೆ ಚರ್ಚೆ ಮಾಡಿದ್ರು. ಆಗ ಸಿದ್ದರಾಮಯ್ಯ ಈ ಸ್ಟೇಟ್ಮೆಂಟ್ ಕೊಟ್ಟಿದ್ದಾರೆ ಅಂತ ಹೇಳಲಾಗ್ತಿದೆ. ಇನ್ನು ಇದೇ ವಿಚಾರವನ್ನ ಇಟ್ಕೊಂಡು ಬಿಜೆಪಿ ಕಾಂಗ್ರೆಸ್ ಮೇಲೆ ಮುಗಿಬಿದ್ದಿದೆ. ದುಡ್ಡು ಕೊಟ್ಟು ಜನರನ್ನ ಕರ್ಕೊಂಡು ಬರೋದು, ಅವರಿಗೆಲ್ಲ ಬಿಟ್ಟಿ ಬಿಟ್ಟಿ ಭಾಗ್ಯ ಘೋಷಣೆ ಮಾಡೋದು. ಆ ಕಡೆ ಅದೂ ಇಲ್ಲ, ಈ ಕಡೆ ಇದೂ ಇಲ್ಲ. ಕಾಂಗ್ರೆಸ್ ಕಥೆ ಈಗ ಮುಂಡಾಸು ಇಲ್ಲದಿರೋ ಮದುಮಗನ ಥರ ಆಗಿದೆ ಅಂತ ಬಿಜೆಪಿ ಕಾಂಗ್ರೆಸ್ ವಿರುದ್ದ ಟೀಕಾ ಪ್ರಹಾರ ಮಾಡಿದೆ. ಇನ್ನು ಆಡಿಯೋ ಕುರಿತು ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ನಮ್ಮಲ್ಲಿ ಆ ಪದ್ದತಿ ಇಲ್ಲ. ಅದರ ಅವಶ್ಯಕತೆನೂ ಇಲ್ಲ ಅಂತ ಹೇಳಿದ್ದಾರೆ. ಇಡೀ ಕಾಂಗ್ರೆಸ್ ಪಾರ್ಟಿ ಈ ಆಡಿಯೋ ಸುಳ್ಳು ಅಂತ ಹೇಳಿದೆ. ಇನ್ನು ಆಡಿಯೋ ವಿಚಾರಕ್ಕೆ ಸಂಬಂಧಪಟ್ಟಂತೆ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ. ಇದ್ರಲ್ಲಿ , ಆಶ್ಚರ್ಯ ಏನಿಲ್ಲ, ಮೊದಲಿನಿಂದಲೂ ಅವರದ್ದು ಇದೇ ಪರಿಸ್ಥಿತಿ ಅಂತ ಹೇಳಿದ್ದಾರೆ.
-masthmagaa.com
Contact Us for Advertisement