ಬಾಲಿವುಡ್‌ ಬಾದ್‌ ಷಾ ಶಾರುಖ್‌ ಖಾನ್‌ಗೆ ವೈ+ ಸೆಕ್ಯುರಿಟಿ

masthmagaa.com:

“ಪಠಾಣ್‌” ಮತ್ತು “ಜವಾನ್‌” ಸಿನಿಮಾದ ಭರ್ಜರಿ ಯಶಸ್ಸಿನ ಬಳಿಕ ಬಾಲಿವುಡ್‌ನ ಕಿಂಗ್‌ ಖಾನ್‌ ಶಾರುಖ್‌ ಖಾನ್‌ಗೆ ಜೀವ ಬೆದರಿಕೆಯನ್ನು ಒಡ್ಡಲಾಗಿರುವ ಕಾರಣದಿಂದ ಮುಂಬೈ ಪೊಲೀಸರು ಮಿಸ್ಟರ್‌ ಖಾನ್‌ರವರಿಗೆ ವೈ+ ಸೆಕ್ಯುರಿಟಿಯನ್ನು ನೀಡಿದ್ದಾರೆ.

ದಿನದ ೨೪ ಗಂಟೆಗಳ ಕಾಲ ಶಾರುಖ್‌ ಖಾನ್‌ರವರಿಗೆ ಆರು ಸಶಸ್ತ್ರ ಭದ್ರತಾ ಸಿಬ್ಬಂದಿಗಳನ್ನು ನೀಡಲಾಗಿದೆ. ಈ ಹಿಂದೆಯೂ ಇಂತಹ ಭದ್ರತೆಯನ್ನು ಶಾರುಖ್‌ ಖಾನ್‌ರವರಿಗೆ ನೀಡಲಾಗಿತ್ತು.

ಮುಂಬೈ ಪೊಲೀಸರ ಪ್ರಕಾರ, ಪಠಾಣ್‌ ಮತ್ತು ಜವಾನ್‌ನಂತಹ ಬ್ಲಾಕ್‌ಬಾಸ್ಟರ್‌ ಸಿನಿಮಾಗಳನ್ನು ನೀಡಿದ ಬಳಿಕ ಜೀವ ಬೆದರಿಕೆಯನ್ನು ಹಾಕಲಾಗುತ್ತಿದೆ ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮಿಸ್ಟರ್‌ ಖಾನ್‌ ಹೇಳಿಕೊಂಡಿದ್ದಾರೆ. ಆದ್ದರಿಂದ ಮಹಾರಾಷ್ಟ್ರ ಸರ್ಕಾರ ಬಾಲಿವುಡ್‌ನ ಈ ಜನಪ್ರಿಯ ನಟನಿಗೆ ಸೆಕ್ಯುರಿಟಿ ನೀಡಲು ಮುಂದಾಗಿದೆ.

ಈ ಮೊದಲು ಬಾಲಿವುಡ್‌ ನಟ ಸಲ್ಮಾನ್‌ ಖಾನ್‌ ಅವರಿಗೂ ಲಾರೆನ್ಸ್‌ ಬಿಶ್ನಾಯ್‌ ಗ್ಯಾಂಗ್‌ನಿಂದ ನೀಡಲಾದ ಜೀವ ಬೆದರಿಕೆ ಸಮಯದಲ್ಲಿ ವೈ+ ಸೆಕ್ಯುರಿಟಿಯನ್ನು ನೀಡಲಾಗಿತ್ತು. ಈ ಹಿಂದೆ ಮುಂಬೈನ ಭೂಗತ ಜಗತ್ತು ಮತ್ತು ಬೆದರಿಕೆಯನ್ನು ಶಾರುಖ್‌ ಖಾನ್‌ ಹಲವು ಬಾರಿ ಎದುರಿಸಿದ್ದಾರೆ.

ಇತ್ತೀಚೆಗೆ, ಸಿನಿಮಾ ನಿರ್ಮಾಪಕ ಸಂಜಯ್‌ ಗುಪ್ತ ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ಜವಾನ್‌” ಚಲನಚಿತ್ರವನ್ನು ಶ್ಲಾಘಿಸಿ, ಜೀವ ಬೆದರಿಕೆಗಳಂತಹ ಸವಾಲುಗಳನ್ನು ಸಲೀಸಾಗಿ ಎದುರಿಸುವ ಮಿಸ್ಟರ್‌ ಖಾನ್‌ರವರ ಧೃಡತೆಯನ್ನು ಹಾಡಿ ಹೊಗಳಿದ್ದಾರೆ.

೯೦ನೇ ದಶಕದಲ್ಲಿ ಭೂಗತ ಜಗತ್ತಿನಿಂದ ಸಿನಿಮಾ ತಾರೆಯರು ಬೆದರಿಕೆ ಎದುರಿಸುತ್ತಿದ್ದ ವೇಳೆ, ಕೇವಲ ನಟ ಶಾರುಖ್‌ ಖಾನ್‌ ಧೈರ್ಯದಿಂದ ಎದುರಿಸುತ್ತಿದ್ದರು. “ಶೂಟ್‌ ಮಾಡಲು ಬಯಸಿದರೆ ಶೂಟ್‌ ಮಾಡಿ, ಆದರೆ ನಿಮಗಾಗಿ ನಾನು ಕೆಲಸ ಮಾಡಲಾರೆ, ನಾನು ಪಥಾನ್‌, ಎಂದು ಹೇಳಿದರು. ಈಗಲೂ ಅವರು ಹಾಗೇ ಇದ್ದಾರೆ” ಎಂದು ಸಂಜಯ್‌ ಗುಪ್ತರವರು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದರು.

ಮಹಾರಾಷ್ಟ್ರ ಸರ್ಕಾರದ ಪಾಲಸಿ ಪ್ರಕಾರ, ಜೀವ ಬೆದರಿಕೆಯನ್ನು ಎದುರಿಸುತ್ತಿರುವ ನಾಗರೀಕರಿಗೆ ಈ ಸೆಕ್ಯುರಿಟಿಯನ್ನು ನೀಡಲಾಗುತ್ತದೆ. ಇಂತಹ ಪ್ರಕರಣದಲ್ಲಿ, ನಾಗರೀಕರು ತಮ್ಮ ರಕ್ಷಣೆಗಾಗಿ ಶುಲ್ಕ ಮತ್ತು ಮುಂಗಡ ಹಣವನ್ನು ಪಾವತಿಸಬೇಕು.

Contact Us for Advertisement

Leave a Reply