masthmagaa.com:
ಬಿಜೆಪಿ ಗೆದ್ರೆ ಬಿಎಸ್ವೈ ಪುತ್ರ ವಿಜಯೇಂದ್ರ ಅವರನ್ನ ಸಿಎಂ ಮಾಡ್ಬಹುದು ಅನ್ನೋ ಗುಸುಗುಸು ಎದ್ದಿರೋ ಹೊತ್ತಲ್ಲೇ ಅಮಿತ್ ಶಾ ರಾಜ್ಯ ಬಿಜೆಪಿ ನಾಯಕರಿಗೆ ಇವತ್ತೊಂದು ಇಂಟರೆಸ್ಟಿಂಗ್ ಸಿಗ್ನಲ್ನ್ನ ಕೊಟ್ಟಿದ್ದಾರೆ. ಅಮಿತ್ ಶಾ ಇವತ್ತು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ರು, ಈ ವೇಳೆ ಕಾರಿನಿಂದ ಇಳೀತಾ ಇದ್ದ ಅವರಿಗೆ ಬಿಎಸ್ವೈ ಅವ್ರು ಬೊಕ್ಕೆ, ಹೂಗುಚ್ಛ ಕೊಡಲು ಮುಂದೆ ಬಂದ್ರು. ಆಗ ಯಡಿಯೂರಪ್ಪನವ್ರನ್ನ ತಡೆದ ಅಮಿತ್ ಶಾ, ಪಕ್ಕದಲ್ಲೇ ಇದ್ದ ವಿಜಯೇಂದ್ರ ಅವ್ರಿಗೆ ಆ ಬೊಕ್ಕೆ ಕೊಡಿ, ಅವ್ರು ನನ್ನ ಸ್ವಾಗತಿಸಲಿ ಅಂತ ಹೇಳಿದ್ರು. ಆಗ ಬಿಎಸ್ವೈ ತಮ್ಮ ಹತ್ರ ಇದ್ದ ಹೂಗುಚ್ಛವನ್ನ ವಿಜಯೇಂದ್ರಗೆ ಕೊಟ್ರು, ವಿಜಯೇಂದ್ರ ಅಮಿತ್ ಶಾಗೆ ಕೊಟ್ಟು ವೆಲ್ಕಂ ಮಾಡಿದ್ರು. ಅಮಿತ್ ಶಾ ವಿಜಯೇಂದ್ರ ಅವ್ರ ಭುಜತಟ್ಟಿ ಪಕ್ಕಕ್ಕೆ ನಿಲ್ಲಿಸ್ಕೊಂಡು ಫೋಟೊ ತೆಗೆಸಿಕೊಂಡ್ರು. ಈ ವೇಳೆ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಾಧ್ಯಕ್ಷ ಬಿವೈ ವಿಜಯೇಂದ್ರ ಉಪಸ್ಥಿತರಿದ್ರು. ಅಂದ್ಹಾಗೆ ಯಡಿಯೂರಪ್ಪನವ್ರ ನಂತ್ರ ವಿಜಯೇಂದ್ರ ಸಿಎಂ ಆಗ್ಬಹುದು ಅಂತ ಬಹಳ ದಿನದಿಂದ ರಾಜ್ಯ ಬಿಜೆಪಿಯಲ್ಲಿ ಚರ್ಚೆಯಾಗ್ತಿದೆ. ವಿಜಯೇಂದ್ರ ಸಿಎಂ ಮಾಡೋಕಾಗಿನೇ ಬಿಎಸ್ವೈ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಟ್ರು ಅಂತ ಹೇಳಲಾಗುತ್ತೆ. ಇತ್ತೀಚೆಗೆ ಬಿಎಸ್ವೈ ಅವ್ರು, ರಾಷ್ಟ್ರೀಯ ಮಾಧ್ಯಮ ಒಂದರ ಹತ್ರ, ನನ್ನ ನಂತ್ರ ವಿಜಯೇಂದ್ರ ಇದಾನೆ ಅಂತ ಹೇಳಿದ್ರು. ಮತ್ತೊಂದ್ ಕಡೆ ಚುನಾವಣೆ ನಂತ್ರ ಸಿಎಂ ಯಾರಾಗ್ತಾರೆ ಅಂತ ಡಿಸೈಡ್ ಆಗುತ್ತೆ ಅಂದಿದ್ರು. ಅದಕ್ಕೆ ಪ್ರತಿಕ್ರಿಯೆ ರೀತಿಯಲ್ಲಿ ಮಾತಾಡಿದ್ದ ಬೊಮ್ಮಾಯಿ, ಮುಂದೆನೂ ನಾನೇ ಸಿಎಂ ಆಗಿರ್ತೀನಿ ಅಂದಿದ್ರು. ಮತ್ತೊಂದ್ ಕಡೆ ಸಿ.ಟಿ ರವಿಯವ್ರು ಬಿಜೆಪಿ ಟಿಕೆಟ್ ಯಾರದೋ ಮನೆಯ ಕಿಚನ್ನಲ್ಲಿ ಡಿಸೈಡ್ ಆಗಲ್ಲ ಅಂದಿದ್ರು. ವಿಜಯೇಂದ್ರ -ಬಿಎಸ್ವೈ ಗುರಿಯಾಗಿಸ್ಕೊಂಡೇ ಈ ಮಾತನ್ನ ಹೇಳಲಾಗಿದೆ ಅಂತ ವಿಶ್ಲೇಷಣೆ ಮಾಡಲಾಗಿತ್ತು. ಆದ್ರೆ ಈಗ ಅಮಿತ್ ಶಾ ಯಡಿಯೂರಪ್ಪ ಅವರ ಮನೆಯಲ್ಲೇ ಉಪಾಹಾರ ಸೇವಿಸಿ, ವಿಧಾನಸಭಾ ಚುನಾವಣೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ನಾಳೆ ರಾಜ್ಯಕ್ಕೆ ಮತ್ತೊಮ್ಮೆ ನರೇಂದ್ರ ಮೋದಿ ಆಗಮಿಸಲಿದ್ದಾರೆ. ಬೆಂಗಳೂರಿನ ವೈಟ್ಫೀಲ್ಡ್ ಹಾಗೂ ಕೆ ಆರ್ ಪುರಂ ನಡುವಿನ ಮೆಟ್ರೋಗೆ ನಾಳೆ ಮೋದಿ ಚಾಲನೆ ನೀಡಲಿದ್ದಾರೆ.
-masthmagaa.com
Contact Us for Advertisement