ಕಾವೇರಿ ನದಿ ವಿವಾದ: ರಾಜ್ಯದಪರ ಧ್ವನಿ ಎತ್ತಿದೆ ಸ್ಯಾಂಡಲ್‌ವುಡ್‌ ತಾರೆಯರು

masthmagaa.com:

ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿಯಲ್ಲಿ ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಕೇಂದ್ರ ಸಚಿವರು ಹಾಗೂ ಸರ್ವಪಕ್ಷ ಸಂಸದರ ಸೆಭೆ ನಡೆಸಲಾಗಿದೆ. ಬಳಿಕ ಮಾತಾಡಿರುವ ಡಿಸಿಎಂ ಡಿಕೆ ಶಿವಕುಮಾರ್‌, ರಾಜಕೀಯ ಭಿನ್ನಾಭಿಪ್ರಾಯಗಳು ಇದ್ದರೂ ಕಾವೇರಿ ವಿಚಾರದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ರಾಜ್ಯದ ಪರ ನಿಲ್ಲುವುದಾಗಿ ಎಲ್ಲ ಸಂಸದರು ಮಾತುಕೊಟ್ಟಿದ್ದಾರೆ. ಜೊತೆಗೆ ಕಾವೇರಿ ವಿಚಾರವಾಗಿ ಸಂಸತ್ ಅಧಿವೇಶನದಲ್ಲಿ ದನಿ ಎತ್ತುವುದಾಗಿ ಭರವಸೆ ನೀಡಿದ್ದಾರೆ. ಅಲ್ದೆ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ರ ಭೇಟಿಗೆ ಅನುಮತಿ ಸಿಕ್ಕಿದ್ದು, ನಾಳೆ ಸಿಎಂ ಹಾಗೂ ನಾನು ಅವರನ್ನ ಭೇಟಿ ಮಾಡಲಿದ್ದೇವೆ ಅಂತ ಹೇಳಿದ್ದಾರೆ. ಇತ್ತ ಕಾವೇರಿ ನದಿ ವಿವಾದಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ ನಟ-ನಟಿಯರು ಮಾತಾಡ್ತಿಲ್ಲ, ಮೌನವಾಗಿದ್ದಾರೆ ಅಂತ ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಇದರ ಬೆನ್ನಲ್ಲೇ ನಟ ಸುದೀಪ್‌ ಹಾಗೂ ದರ್ಶನ್‌ ಅವರು ತಮ್ಮ ಬೆಂಬಲ ಸೂಚಿಸಿದ್ದಾರೆ. ಈ ಬಗ್ಗೆ Xನಲ್ಲಿ ಪೋಸ್ಟ್‌ ಹಾಕಿರುವ ಸುದೀಪ್‌, ನಮ್ಮ ಕಾವೇರಿ ನಮ್ಮ ಹಕ್ಕು. ಅಷ್ಟು ಒಮ್ಮತದಿಂದ ಗೆಲ್ಲಿಸಿರುವ ಸರ್ಕಾರ ಕಾವೇರಿಯನ್ನೇ ನಂಬಿರುವ ಜನರನ್ನು ಕೈಬಿಡುವುದಿಲ್ಲ ಎಂದು ನಾನು ನಂಬಿದ್ದೇನೆ. ನೆಲ-ಜಲ-ಭಾಷೆಯ ಹೋರಾಟದಲ್ಲಿ ನನ್ನ ಧ್ವನಿಯೂ ಇದೆ. ಕಾವೇರಿ ತಾಯಿ ಕರುನಾಡನ್ನು ಕಾಪಾಡಲಿ ಅಂತ ಬರೆದುಕೊಂಡಿದ್ದಾರೆ. ಅತ್ತ ದರ್ಶನ್‌, ಕರ್ನಾಟಕದ ಪಾಲಿನ ಕಾವೇರಿ ನೀರಿಗೆ ಕತ್ತರಿ ಹಾಕಿ ಮತ್ತಷ್ಟು ನೀರು ಪಡೆದುಕೊಳ್ಳುವ ಪ್ರಯತ್ನ ನಿರಂತರವಾಗಿ ನಡೆದು ಬಂದಿದೆ. ಈ ವರ್ಷ ನೀರಿನ ಅಭಾವ ಇದೆ. ಈ ಸಮಯದಲ್ಲಿ ಎಲ್ಲಾ ಅಂಕಿ-ಅಂಶಗಳನ್ನು ಪರಿಗಣಿಸಿ ಆದಷ್ಟು ಬೇಗ ನ್ಯಾಯ ಸಿಗುವಂತಾಗಲಿ ಅಂತ ಪೋಸ್ಟ್‌ ಹಾಕಿದ್ದಾರೆ. ಅತ್ತ ನಟ ಶಿವರಾಜ್‌ ಕುಮಾರ್‌ ಸೇರಿದಂತೆ ಹಲವರು ಈ ಕುರಿತು ಧ್ವನಿ ಎತ್ತಿದ್ದಾರೆ.

-masthmagaa.com

Contact Us for Advertisement

Leave a Reply