masthmagaa.com:
ಚಂದ್ರಯಾನ-3 ಯೋಜನೆ ಯಶಸ್ಸಿನ ಹಿನ್ನಲೆಯಲ್ಲಿ ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಿ ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಿದ್ರು. ಈ ವೇಳೆ ಶಿಷ್ಟಾಚಾರದಂತೆ ಸಿಎಂ ಸಿದ್ದರಾಮಯ್ಯ ಆಗಲಿ ಅಥ್ವಾ ಡಿಸಿಎಂ ಡಿ.ಕೆ ಶಿವಕುಮಾರ್ ಆವರು ಸ್ವಾಗತಿಸೋಕೆ ಯಾಕೆ ಬಂದಿಲ್ಲ ಅನ್ನೋದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ. HAL ಏರ್ಪೋರ್ಟ್ನಲ್ಲಿ ಮೋದಿಯವರನ್ನ ವೆಲ್ಕಮ್ ಮಾಡದಂತೆ ನಿರ್ಬಂಧಿಸಲಾಗಿದ್ದು, ಇದೊಂದು ಪ್ರೊಟೋಕಾಲ್ನ ಅತಿದೊಡ್ಡ ಉಲ್ಲಂಘನೆ ಅಂತ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ Xನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಂ ರಮೇಶ್, ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ತಮಗಿಂತ ಮೊದಲು ಇಸ್ರೋ ವಿಜ್ಞಾನಿಗಳನ್ನ ಅಭಿನಂದಿಸಿದ್ದಾರೆ ಅಂತ ಮೋದಿಯವರು ಅಸಮಾಧಾನಗೊಂಡಿದ್ದಾರೆ. ಹೀಗಾಗಿ ಏರ್ಪೋರ್ಟ್ಗೆ ಸಿದ್ದರಾಮಯ್ಯ ಬರದಂತೆ ತಡೆದಿದ್ದು, ಸಣ್ಣಮಟ್ಟದ ರಾಜಕೀಯ ಮಾಡ್ತಿದ್ದಾರೆ ಅಂತ ವಾಗ್ದಾಳಿ ಮಾಡಿದ್ದಾರೆ. ಈ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಮೋದಿ, ನಾನು ಬೆಂಗಳೂರಿಗೆ ಯಾವ ಟೈಮ್ನಲ್ಲಿ ತಲುಪುತ್ತೇನೆ ಅಂತ ಗೊತ್ತಿರ್ಲಿಲ್ಲ. ಈ ಕಾರಣಕ್ಕೆ ಬೆಳಗ್ಗೆ ಬೇಗ ಬಂದು ನನ್ನ ಸ್ವಾಗತಿಸೋ ತೊಂದ್ರೆ ತಗೋಬೇಡಿ ಅಂತ ನಾನು ಸಿಎಂ, ಡಿಸಿಎಂ ಹಾಗೂ ರಾಜ್ಯಪಾಲರ ಬಳಿ ಮನವಿ ಮಾಡಿದ್ದೆ ಅಂತ ಹೇಳಿದ್ದಾರೆ. ಅಲ್ದೆ ವಿಜ್ಞಾನಿಗಳಿಗೆ ಅಭಿನಂದಿಸಿದ ಕೂಡಲೇ ನಾನು ಹೊರಡಬೇಕಿತ್ತು. ಹೀಗಾಗಿ ಬರೋದು ಬೇಡ ಎಂದು ಹೇಳಿದ್ದೆ ಅಂತ ಮೋದಿ ತಿಳಿಸಿದ್ದಾರೆ.
-masthmagaa.com
Contact Us for Advertisement