masthmagaa.com:
ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಲ್ಲಿರುವ ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವ್ರಿಗೆ ಸುಪ್ರೀಂ ಕೋರ್ಟ್ ಇಂದು ಜಾಮೀನು ನಿರಾಕರಿಸಿದೆ. ಪ್ರಕರಣವನ್ನ ವಿಶ್ಲೇಷಿಸಿರುವ ಸುಪ್ರೀಂ ಕೋರ್ಟ್, 338 ಕೋಟಿ ರೂಪಾಯಿ ವರ್ಗಾವಣೆ ಸಂಬಂಧಿಸಿದಂತೆ ಅನುಮಾನ ಹುಟ್ಟುಹಾಕುವ ಕೆಲ ಅಂಶಗಳು ಕಂಡುಬಂದಿದೆ ಅಂತ ಜಾಮೀನು ನೀಡಲು ತಿರಸ್ಕರಿಸಿದೆ. ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಎಸ್ವಿಎನ್ ಭಟ್ಟಿ ಅವ್ರ ನೇತೃತ್ವದ ಪೀಠ ಈ ಆದೇಶ ನೀಡಿದೆ. ಇನ್ನು ಈ ವಿಚಾರವಾಗಿ ಕೆಲ ಬಿಜೆಪಿ ನಾಯಕರು, ʻಟ್ರಾಯಲ್ ಕೋರ್ಟ್ ಆಯ್ತು, ಹೈ ಕೋರ್ಟ್ ಆಯ್ತು, ಈಗ ಸುಪ್ರೀಂ ಕೋರ್ಟ್ ಕೂಡ ಸಿಸೋಡಿಯಾ ಅವ್ರಿಗೆ ಜಾಮೀನು ನೀಡೋಕೆ ನಿರಾಕರಿಸಿದೆ. ಆಮ್ ಆದ್ಮ ಪಾರ್ಟಿಯ ಪ್ರಮುಖ ಮುಖಂಡರು ಕೂಡ ಈ ಅಬಕಾರಿ ನೀತಿ ಹಗರಣ ಸೇರಿಕೊಂಡಿದ್ದಾರೆ ಅನ್ನೋದು ಈ ಮೂಲಕ ಕ್ಲಿಯರ್ ಆಗಿದೆ. ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಪ್ನ ಪ್ರಮುಖ ನಾಯಕರನ್ನ ಬಂಧಿಸೋ ಘಳಿಗೆ ಹೆಚ್ಚೇನು ದೂರ ಇಲ್ಲ. ಇಂತಹ ಪ್ರಕರಣಕ್ಕೆ ಬೆಂಬಲ ನೀಡಿದ ಕೇಜ್ರಿವಾಲ್ ತಕ್ಷಣ ರಾಜಿನಾಮೆ ನೀಡಬೇಕುʼ ಅಂತ ಆಗ್ರಹಿಸಿದ್ದಾರೆ. ಅಂದ್ಹಾಗೆ ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿ 7 ತಿಂಗಳಿಂದ ಜೈಲುವಾಸದಲ್ಲಿರೋ ಸಿಸೋಡಿಯಾ ಅವರನ್ನ ಫೆಬ್ರವರಿ 26 ರಂದು ಸಿಬಿಐ ಬಂಧಿಸಿತ್ತು.
-masthmagaa.com
Contact Us for Advertisement