masthmagaa.com:
ಹರಿಯಾಣದ ನೂಹ್ ಗಲಭೆ ಕೇಸ್ಗೆ ಸಂಬಂಧಿಸಿದಂತೆ ಹಲವು ರೋಹಿಂಗ್ಯಾ ವಲಸಿಗರನ್ನ ಅರೆಸ್ಟ್ ಮಾಡಲಾಗಿದೆ ಅಂತ ಅಲ್ಲಿನ ಪೊಲೀಸರು ಹೇಳಿದ್ದಾರೆ. ಈ ವಲಸಿಗರು ಅಕ್ರಮವಾಗಿ ಮನೆ ಹಾಗೂ ಕಟ್ಟಡಗಳನ್ನ ನಿರ್ಮಿಸಿಕೊಂಡಿದ್ದ ಕಾರಣಕ್ಕೆ ಡೆಮಾಲಿಷನ್ ಕಾರ್ಯಾಚರಣೆ ನಡೆಸಲಾಗಿತ್ತು. ಅಷ್ಟೆ ಅಲ್ದೆ ಜುಲೈ 31ರಂದು ನಡೆದ ಕೋಮು ಗಲಭೆ ವೇಳೆ ಕಲ್ಲು ತೂರಾಟ ನಡೆಸಿದ್ರು. ಈ ಕುರಿತು ಎವಿಡೆನ್ಸ್ ಇದ್ದು, ಹಲವರನ್ನ ಬಂಧಿಸಲಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ. ಆದ್ರೆ ಕೋಮು ಘರ್ಷಣೆ ಹಿನ್ನಲೆಯಲ್ಲಿ ಕಟ್ಟಡಗಳ ತೆರವು ಕಾರ್ಯಾಚರಣೆ ಪ್ರಾರಂಭಿಸಿದ್ದರಿಂದ ಪಂಜಾಬ್-ಹರ್ಯಾಣ ಹೈಕೋರ್ಟ್ ಸುಮೋಟೋ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆಗೆ ತಡೆ ನೀಡಿದೆ.
ಇನ್ನೊಂದ್ ಕಡೆ ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಅವರು ನೂಹ್ ಹಿಂಸಾಚಾರದ ನಂತರ ಬುಲ್ಡೋಜರ್ ಮೂಲಕ ಮುಸ್ಲಿಂರಿಗೆ ಸಾಮೂಹಿಕ ಶಿಕ್ಷೆ ನೀಡ್ತಿದ್ದಾರೆ ಅಂತ AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಆರೋಪಿಸಿದ್ದಾರೆ. ಮನೆಗಳು, ಮೆಡಿಕಲ್ ಶಾಪ್ಗಳು ಮತ್ತು ಒಂದು ಸಮುದಾಯದ ಗುಡಿಸಲುಗಳನ್ನ ಡೆಮಾಲಿಷ್ ಮಾಡುವ ಮೂಲಕ ಸಾಮೂಹಿಕ ಶಿಕ್ಷೆಯನ್ನು ನೀಡಲಾಗಿದೆ. ಇದಕ್ಕೆ ಸರಿಯಾದ ನಿಯಮವನ್ನು ಅನುಸರಿಸದೆ ಕೆಡವಲಾಗಿದೆ. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರ ಸರ್ಕಾರ ನ್ಯಾಯಾಲಯಗಳ ಹಕ್ಕುಗಳನ್ನು ಕಸಿದುಕೊಂಡಿದೆ ಅಂತ ಆರೋಪಿಸಿದ್ದಾರೆ. ಓವೈಸಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ನೂಹ್ ಡೆಪ್ಯೂಟಿ ಕಮಿಷನರ್, ಡೆಮಾಲಿಷ್ ಮಾಡೋದು ರೂಢಿಯಲ್ಲಿರೋ ಒಂದು ಕಾರ್ಯವಿಧಾನವಾಗಿದೆ ಮತ್ತು ಯಾರನ್ನೂ ಗುರಿಯಾಗಿಸಲು ಕ್ರಮ ತೆಗೆದುಕೊಳ್ಳುತ್ತಿಲ್ಲ ಅಂತ ಹೇಳಿದ್ದಾರೆ. ಅಲ್ದೆ ಬುಲ್ಡೋಜರ್ ಕ್ರಿಯೆ ಮತ್ತು ನೂಹ್ ಹಿಂಸಾಚಾರ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಅಂತ ಅಧಿಕಾರಿಗಳು ತಿಳಿಸಿದ್ದಾರೆ. ಆದ್ರೂ ಕೆಡವಲಾಗುತ್ತಿರುವ ಕೆಲವು ಅಂಗಡಿಗಳು ಮತ್ತು ಮನೆಗಳು ಇತ್ತೀಚಿನ ಘರ್ಷಣೆಯಲ್ಲಿ ಭಾಗಿಯಾಗಿರುವವರಿಗೆ ಸೇರಿವೆ ಅಂತ ತಿಳಿದು ಬಂದಿದೆ.
-masthmagaa.com
Contact Us for Advertisement