masthmagaa.com:
ಚುನಾವಣೆಯಲ್ಲಿ ಕಾಂಗ್ರೆಸ್ ನೀಡಿದ್ದ 5 ಗ್ಯಾರೆಂಟಿಗಳನ್ನ ಜಾರಿ ಮಾಡೋಕೆ ಸಂಬಂಧಪಟ್ಟ 5 ಇಲಾಖೆಗಳ ಅಧಿಕಾರಿಗಳ ಜೊತೆ ಸಿಎಂ ಸಿದ್ದರಾಮಯ್ಯ ಇವತ್ತು ಸಭೆ ಮಾಡಿದ್ದಾರೆ. ಆಹಾರ ಇಲಾಖೆ, ಕೌಶಲ್ಯಾಭಿವೃದ್ಧಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರಿಗೆ ಇಲಾಖೆ, ಇಂಧನ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದ್ದು ಗ್ಯಾರಂಟಿಗಳ ಬ್ಲೂಪ್ರಿಂಟ್ ಕುರಿತು ಚರ್ಚೆ ನಡೆದಿದೆ. ಈ ವೇಳೆ ಉಚಿತ ಬಸ್ ಪಾಸ್, ಫಲಾನುಭವಿಗಳ ಪಟ್ಟಿ ನೀಡಿ ಅಂತ ಅಧಿಕಾರಿಗಳಿಗೆ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಇನ್ನು ಯುವ ನಿಧಿ ಗ್ಯಾರಂಟಿ ಬಗ್ಗೆ ಕೂಡ ಸಿಎಂ ಮಾಹಿತಿ ಪಡೆದಿದ್ದಾರೆ. ಈ ಕಡೆ ಜೂನ್ 1ಕ್ಕೆ ಟೀಕೆ ಮಾಡೋರ ಬಾಯಿ ಮುಚ್ಚಿಸ್ತೀವಿ ಅಂತ ಕಾನೂನು ಮತ್ತು ಸಂಸದೀಯ ಸಚಿವ ಹೆಚ್. ಕೆ ಪಾಟೀಲ್ ಹೇಳಿದ್ದಾರೆ. ಇತ್ತ ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ದಿನಾಂಕ ಬರುವವರೆಗೂ ಬಿಜೆಪಿ ಪಕ್ಷಕ್ಕೆ ತಡೆದುಕೊಳ್ಳುವ ಶಕ್ತಿ ಇಲ್ಲ. ನಮ್ಮ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅವರು ಜೂನ್ 1 ರ ಬಳಿಕ ಗ್ಯಾರಂಟಿ ಜಾರಿ ಮಾಡುತ್ತೇವೆ ಅಂತ ಸ್ಪಷ್ಟವಾಗಿ ಹೇಳಿದ್ದಾರೆ ಅಂತ ಹೇಳಿದ್ದಾರೆ. ಇದೆಲ್ಲವನ್ನೂ ನೋಡಿದ್ರೆ ಜೂನ್ 1 ರಿಂದಲೇ ಹೊಸ ಗ್ಯಾರೆಂಟಿಗಳು ಜಾರಿಯಾಗಬೋದು ಅನ್ನೋ ಸೂಚನೆ ಸಿಕ್ತಾಯಿದೆ. ಆದ್ರೆ ಯಾವ್ಯಾವ ಗ್ಯಾರೆಂಟಿ ಜಾರಿಯಾಗುತ್ತೆ ಅನ್ನೋದೇ ಇನ್ನೂ ಕೂಡ ಗೊಂದಲ ಹಾಗೂ ಕೂತುಹಲದ ವಿಷಯ. ಜೂನ್ 1 ನೇ ತಾರೀಖು ಸಿದ್ದು ಸಂಪುಟದ ಎರಡನೇ ಕ್ಯಾಬಿನೆಟ್ ಮೀಟಿಂಗ್ ನಡೆಯಲಿದೆ. ಅಲ್ಲೇ ಗ್ಯಾರೆಂಟಿ ಘೋಷಣೆ ಆಗಲಿದೆ ಕೂಡ ಹೇಳಲಾಗ್ತಿದೆ. ಇನ್ನೊಂದ್ಕಡೆ ಗ್ಯಾರೆಂಟಿಗಳ ಬಗ್ಗೆ ಹಾರಿಕೆ ಉತ್ತರ ನೀಡಿದರೆ ಜನರ ಮನಸಿನಲ್ಲಿ ಗೊಂದಲ ಮೂಡುತ್ತೆ. ಹಾಗಾಗಿ ಮಂತ್ರಿಗಳು ಜಾಸ್ತಿ ಮಾತನಾಡಬಾರದು ಅಂತ ಮಂತ್ರಿ ಸ್ಥಾನ ವಂಚಿತ, ಶಾಸಕ ಟಿಬಿ ಜಯಚಂದ್ರ ತಮ್ಮ ಸರ್ಕಾರಕ್ಕೆ ಸಲಹೆ ಕೊಟ್ಟಿದ್ದಾರೆ. ಇತ್ತ ಗ್ಯಾರೆಂಟಿ ಅನುಷ್ಠಾನದಲ್ಲಿ ಕಾಂಗ್ರೆಸ್ ನಿಂದ ಜನತೆಗೆ ದೋಖಾ ಆಗ್ತಿದೆ ಅಂತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಟೀಕೆ ಮಾಡಿದ್ದಾರೆ.
-masthmagaa.com
Contact Us for Advertisement